ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ ವಾಲ್ಮೀಕಿ ನಿಗಮದ ಹಗರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಯಾರನ್ನೋ ರಕ್ಷಣೆ ಮಾಡುತ್ತಿದೆ. ಈ ಮೂಲಕ ಸರ್ಕಾರ ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡುತ್ತಿದೆ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ನಾವು ಒತ್ತಾಯಿಸಿದ್ದೇವೆ, ಆದರೆ ಸರ್ಕಾರದ್ದು ಆನೆ ಚರ್ಮ, ದಬ್ಬಾಳಿಕೆಯ ಮಾತುಗಳನ್ನು ಆಡುತ್ತಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ. ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿಗಳನ್ನೇ ಬದಲಾಯಿಸಬೇಕು ಎಂದು ಆಡಳಿತ ಪಕ್ಷ ಕಾಂಗ್ರೆಸ್ನ ಮಂತ್ರಿಗಳು, ಶಾಸಕರೇ ಧ್ವನಿ ಎತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿ ಬಿಟ್ಟು, ಎಲ್ಲ ಶಾಸಕರನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಕಾಂಗ್ರೆಸ್ನ ಹಿರಿಯರೇ ವ್ಯಂಗ್ಯ ಮಾಡುತ್ತಿದ್ದಾರೆ. ಮಠಾಧೀಶರು ನೀಡುವ ಹೇಳಿಕೆಗಳು ಆಡಳಿತದ ಮೇಲೆ ಪರಿಣಾಮ ಬೀರುತ್ತಿವೆ. ಸರ್ಕಾರ ಆಡಳಿತದ ಮೇಲಿನ ಬಿಗಿತನವನ್ನು ಕಳೆದುಕೊಂಡಿದೆ. ಕರ್ನಾಟಕ ರಾಜಕಾರಣ ಗೊಂದಲಮಯವಾಗಿದೆ ಎಂದರು.
ಒಂದೇ ಒಂದು ಬಡವರ ಕಲ್ಯಾಣ ಯೋಜನೆಗಳು ಜಾರಿಯಾಗುತ್ತಿಲ್ಲ, ಬಡವರ ಮಕ್ಕಳಿಗೆ ಹಾಸ್ಟೆಲ್ಗಳು ಸಿಗುತ್ತಿಲ್ಲ. ಪರಿಶಿಷ್ಟ ಜಾತಿ ಪಂಗಡದ ಹಣವನ್ನು ಸರ್ಕಾರ ತನ್ನ ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದೆ. ಈ ಸರ್ಕಾರ ಬಹಳ ದಿನಗಳ ಮುಂದುವರಿಯುತ್ತೆ ಅನ್ನಿಸುತ್ತಿಲ್ಲ.ವಿಪಕ್ಷವಾಗಿ ನಾವು ಏನು ಮಾಡಬಹುದು ಎಲ್ಲವನ್ನು ಮಾಡುತ್ತಿದ್ದೇವೆ ಎಂದರು.ನೀಟ್ ಪರೀಕ್ಷೆಯ ಅಕ್ರಮದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಕೇಂದ್ರ ಸರ್ಕಾರದ ತಪ್ಪು, ಆದರೆ ಕೇಂದ್ರ ಸರ್ಕಾರ ಈಗಾಗಲೇ ಸಿಬಿಐ ತನಿಖೆಗೆ ಆದೇಶಿಸಿ ಆಗಿದೆ. ತಪ್ಪಾಗಿದ್ದರೆ ಸೂಕ್ತ ಕ್ರಮ ಆಗಿಯೇ ಆಗುತ್ತದೆ, ಆದರೆ ವಿಪಕ್ಷದವರು ಅನಗತ್ಯ ಈ ಬಗ್ಗೆ ಗಲಾಟೆ ಎಬ್ಬಿಸಿ ಸದನ ಮುಂದೂಡಲು ಪ್ರಯತ್ನಿಸುತ್ತಿದ್ದಾರೆ. ಸಿಬಿಐ ತನಿಖೆಗಿಂತ ಈ ದೇಶದಲ್ಲಿ ದೊಡ್ಡ ತನಿಖೆ ಇಲ್ಲ, ಅದನ್ನೂ ಒಪ್ಪದೆ ಕಾಂಗ್ರೆಸ್ ಅನಗತ್ಯ ಮೊಂಡುವಾದ ಮಾಡುತ್ತಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.