ಯಲಬುರ್ಗಾ ತಾಲೂಕಿನ ಹುಣಸಿಗಾಳ, ನಿಲೋಗಲ್, ನರಸಾಪುರ, ಮುರಡಿ, ಮುರಡಿ ತಾಂಡಾ, ಬೇವೂರು, ಮಂಗಳೂರು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಚಾಲನೆ ನೀಡಿದರು.

ಯಲಬುರ್ಗಾ: ಕೆರೆ ತುಂಬಿಸುವ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿ ಜನಸಂಪರ್ಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ೨೦೧೩ ನ. ೨೨ರಂದು ಕೃಷ್ಣಾ ಬಿ ಸ್ಕೀಂ ನೀರಾವರಿ ಯೋಜನೆ ಜಾರಿಗೆ ತರಲಾಯಿತು. ಇದಕ್ಕೆ ಬ್ರಿಜೇಶ್ ಪಟೇಲ್ ಆಯೋಗ ರಚನೆ ಮಾಡಲಾಯಿತು. ಅಂತರರಾಜ್ಯ ನೀರು ಹಂಚಿಕೆ ವಿವಾದದಿಂದ ನೀರಾವರಿ ಯೋಜನೆಗಳು ವಿಳಂಬವಾಗಿವೆ. ಈ ಸಮಸ್ಯೆಯನ್ನು ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ನಮ್ಮ ಪಾಲಿನ ನೀರನ್ನು ಕೆರೆ ತುಂಬಿಸುವ ಯೋಜನೆ ಮೂಲಕ ಮಾಡಲಾಗುತ್ತಿದೆ ಎಂದರು.

ಗ್ಯಾರಂಟಿ ಸ್ಕೀಮ್‌ಗಳು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಯಲಬುರ್ಗಾ ಘಟಕಕ್ಕೆ ಹೊಸ ಬಸ್ ಕೊಡಿಸಲಾಗುವುದು. ಇನ್ನುಮುಂದೆ ಅನ್ನಭಾಗ್ಯ ಯೋಜನೆಯಡಿ ೫ ಕೆಜಿ ಅಕ್ಕಿ ಜತೆಗೆ ಆಹಾರ ಕಿಟ್ ಕೊಡಲಾಗುತ್ತದೆ. ಏಪ್ರಿಲ್ ತಿಂಗಳಲ್ಲಿ ಪಂಚಾಯಿತಿ ವ್ಯಾಪಿಯ ಮುಖಂಡರ ಸಭೆ ಕರೆಯಲಾಗುವುದು. ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಲಾಗುವುದು. ನಮ್ಮದು ಜನಪರ ಕಾಳಜಿ ಇರುವ ಸರ್ಕಾರ ಎಂದರು.

ನಾನು ೧೯೮೯ರಲ್ಲಿ ಶಾಸಕನಾದಾಗ ತಾಲೂಕಿನಲ್ಲಿ ಕೇವಲ ೨ ಡಾಂಬರು ರಸ್ತೆ ಇದ್ದವು. ಶಾಲೆ, ಕಾಲೇಜು, ಆಸ್ಪತ್ರೆ, ವಿದ್ಯುತ್ ಸೌಕರ್ಯ ಇರಲಿಲ್ಲ. ಕೆಲವು ಹಳ್ಳಿಗಳಿಗೆ ನಡೆದುಕೊಂಡು ಹೋಗಿದ್ದೇನೆ. ಈಗ ಎಲ್ಲ ಅಭಿವೃದ್ಧಿ ಕೆಲಸಗಳಾಗಿವೆ. ಕಾಂಗ್ರೆಸ್ ಸರ್ಕಾರ ಜನಪರ ಕೆಲಸ ಮಾಡುತ್ತಿದೆ ಎಂದರು.

ಇದೇ ವೇಳೆ ಹುಣಸಿಗಾಳ, ನಿಲೋಗಲ್, ನರಸಾಪುರ, ಮುರಡಿ, ಮುರಡಿ ತಾಂಡಾ, ಬೇವೂರು, ಮಂಗಳೂರು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ತಾಪಂ ಇಒ ನೀಲಗಂಗಾ ಬಬಲಾದ, ಉಪ ತಹಸೀಲ್ದಾರ್ ವಿಜಯಕುಮಾರ ಗುಂಡೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಉಪಾಧ್ಯಕ್ಷ ರೇವಣಪ್ಪ ಸಂಗಟಿ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಸುಧೀರ ಕೊರ್ಲಹಳ್ಳಿ, ಪ್ರಮುಖರಾದ ಡಾ. ಶಿವನಗೌಡ ದಾನರಡ್ಡಿ, ಆನಂದ ಉಳ್ಳಾಗಡ್ಡಿ, ತೇಜನಗೌಡ ಪಾಟೀಲ್, ಮಲ್ಲನಗೌಡ ಪಾಟೀಲ್, ವೀರನಗೌಡ ಪಾಟೀಲ್, ಯಮನೂರಪ್ಪ ತಳವಾರ್, ಮುದಿಯಪ್ಪ ಮೇಟಿ, ಪ್ರಕಾಶ ಮಾಲಿಪಾಟೀಲ್, ಮುತ್ತಣ್ಣ ಮೇಟಿ, ಯಮನೂರಪ್ಪ ಕಂಬಳಿ, ಹುಲಗಪ್ಪ ಬಂಡಿವಡ್ಡರ್, ಪುನೀತ್ ಕೊಪ್ಪಳ, ಪಿಡಿಒ ಪುಷ್ಪಲತಾ ಇದ್ದರು.