ಉಡುಪಿ: ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಹಾಸ್ಯಾಸ್ಪದ. ಶ್ರೀರಾಮ ಮಂದಿರದ ದೇಣಿಗೆಯ ಅವ್ಯವಹಾರವನ್ನು ಬಿಜೆಪಿ ಎಲ್ಲಿಯೂ ಸಮರ್ಥನೆ ಮಾಡಿಲ್ಲ. ಬದಲಿಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದೇ ಹೇಳಿದೆ. ಆದರೂ ಉಡುಪಿಯ ಕಾಂಗ್ರೆಸ್ ಬಾಡಿಗೆ ಭಾಷಣಕಾರರನ್ನು ಕರೆಯಿಸಿ, ಅಯೋಧ್ಯೆ ವಿಷಯದಲ್ಲಿ ಬಿಜೆಪಿಯ ಶಾಸಕರನ್ನು ದೂಷಿಸುತ್ತಿರುವುದು ಶೋಚನೀಯ ಎಂದು ಉಡುಪಿ ಜಿಲ್ಲಾ ಬಿಜೆಪಿ ವಕ್ತಾರ ಮಧುಕರ ಮುದ್ರಾಡಿ ವಿಷಾದಿಸಿದ್ದಾರೆ. ಇದೇ ಕಾಂಗ್ರೆಸ್ ಅಂದು ರಾಮ ಮಂದಿರ ನಿರ್ಮಾಣ ವಿರುದ್ಧ ಸುಪ್ರೀಂ ಕೋರ್ಟ್ ನಿಂದ ತಡೆಯಾಜ್ಞೆ ತರುವ ವ್ಯರ್ಥ ಪ್ರಯತ್ನ ಮಾಡಿತ್ತು. ರಾಮೇಶ್ವರಂನ ಧನುಷ್ಕೋಟಿಯಲ್ಲಿ ಶ್ರೀ ರಾಮನ ಸೇತುವೆಯನ್ನೇ ಒಡೆಯಲು ಒಪ್ಪಿಗೆ ಕೊಟ್ಟಿತ್ತು. ಅಫ್ಜಲ್ ಗುರು, ಕಸಬ್‌ನಂತಹ ಭಯೋತ್ಪಾದಕರನ್ನು ಬಿಡಿಸಲು ರಾತ್ರೋ ರಾತ್ರಿ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಇದೀಗ ಕಾಪುವಿನ ಕಾಂಗ್ರೆಸ್ ನಾಯಕರು ಉಡುಪಿಯಲ್ಲಿ ನಡೆಯಲಿದ್ದ ಕೋಟಿ ಚೆನ್ನಯ ಕಂಬಳಕ್ಕೆ ತಡೆಯಾಜ್ಞೆ ತಂದಿದ್ದಾರೆ ಎಂದು ಮಧುಕರ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.