ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ನಡೆದ ಬಸವ ಜಯಂತಿ ಆಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕೇಂದ್ರದಲ್ಲಿ ಮಹಿಳಾ ಮೀಸಲಾತಿಗೆ ವಿರೋಧಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಬಸವಣ್ಣನವರ ಜಯಂತಿ ಆಚರಿಸುವ ನೈತಿಕತೆಯಿಲ್ಲವೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಚ್.ಮೋಹನ್‍ ಕುಮಾರ್ ಹೇಳಿದರು.

ಜಗಜ್ಯೋತಿ ಬಸವೇಶ್ವರರ 893ನೇ ಜಯಂತಿ ಅಂಗವಾಗಿ ಬಿಜೆಪಿ ಕಚೇರಿಯಲ್ಲಿ ಸೋಮವಾರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರ ಆಶಯಗಳಿಗೆ ಕಾಂಗ್ರೆಸ್‍ನವರು ಅಪಮಾನ ಮಾಡುತ್ತಿದ್ದಾರೆಂದು ಆರೋಪಿಸಿದರು.

12ನೇ ಶತಮಾನದಲ್ಲಿಯೇ ಬಸವಣ್ಣನವರು ಅಸಮಾನತೆ ವಿರುದ್ಧ ಹೋರಾಡಿದರು. ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ಸ್ತ್ರೀ ಸಮಾನತೆಯನ್ನು ಅಂದಿನ ಕಾಲದಲ್ಲಿಯೇ ಎತ್ತಿ ಹಿಡಿದಿದ್ದರು. ಬಸವಣ್ಣ ಅಂದು ನೀಡಿದ ಮೀಸಲಾತಿಯ ಇಂದು ಕಾಂಗ್ರೆಸ್ಸಿಗರು ವಿರೋದಿಸುವುದರ ಮೂಲಕ ಅಪಚಾರ ಎಸಗುತ್ತಿದ್ದಾರೆ ಎಂದರು.

ಅಂತರ್ಜಾತಿ ವಿವಾಹವನ್ನು ಮುನ್ನೆಲೆಗೆ ತಂದ ಬಸವಣ್ಣನವರು ಜಾತಿ ತಾರತಮ್ಯ ವಿರೋಧಿಸಿದರು. ಅಂತರ್ಜಾತಿ ವಿವಾಹಕ್ಕೆ ಸಂಬಂಧಿಸಿದಂತೆ 3500 ಅರ್ಜಿಗಳು ಸಲಿಕೆಯಾಗಿದ್ದರೂ ರಾಜ್ಯ ಸರ್ಕಾರ ಇನ್ನೂ ಅನುದಾನ ನೀಡಿಲ್ಲ. ಸಿಎಂ ಸಿದ್ದರಾಮಯ್ಯ ಮಾತಿನಲ್ಲಿ ಜನರನ್ನು ಮರಳು ಮಾಡುತ್ತಿದ್ದಾರೆಯೇ ವಿನಾ ಬಸವನ ತತ್ವ ಸಂದೇಶಗಳನ್ನು ಪಾಲಿಸುತ್ತಿಲ್ಲ. ಸಾರ್ವಕಾಲಿಕ ಸತ್ಯವಾಗಿರುವ ಬಸವಣ್ಣನವರ ನಡೆ-ನುಡಿ-ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವ ಜಯಂತಿಗೆ ನಿಜವಾದ ಅರ್ಥ ಸಿಗುತ್ತದೆಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, 12ನೇ ಶತಮಾನದಲ್ಲಿ ಸಮಾಜ ಸುಧಾರಣೆಗಾಗಿ ಹೋರಾಡಿದ ಬಸವಣ್ಣನವರ ಜಯಂತಿಯನ್ನು ವಿಶ್ವದಲ್ಲಿಯೇ ಆಚರಿಸಲಾಗುತ್ತಿದೆ. ಮೂಢನಂಬಿಕೆ, ಮೌಢ್ಯ, ಕಂದಾಚಾರಗಳನ್ನು ನಿರ್ಮೂಲನೆಗೊಳಿಸಿ ಸಮ ಸಮಾಜ ನಿರ್ಮಾಣಕ್ಕಾಗಿ ಕ್ರಾಂತಿ ಮಾಡಿದ ಬಸವಣ್ಣನವರು ಅನುಭವ ಮಂಟಪದಲ್ಲಿ ಎಲ್ಲಾ ಜಾತಿಯವರಿಗೆ ಮುಕ್ತವಾಗಿ ಪ್ರವೇಶ ಕಲ್ಪಿಸಿದ್ದರು. ಅನೇಕ ವಚನಕಾರರಿದ್ದಾರೆಂದರೆ ಅದಕ್ಕೆ ಬಸವಣ್ಣನವರೆ ಕಾರಣ ಎಂದರು. ಪ್ರಧಾನಿ ನರೇಂದ್ರಮೋದಿರವರು ಬಸವಣ್ಣನವರ ಆದರ್ಶಗಳನ್ನು ತಮ್ಮ ಭಾಷಣಗಳಲ್ಲಿ ನೆನಪಿಸಿಕೊಳ್ಳುತ್ತಾರೆ. ಮನುಕುಲಕ್ಕೆ ಅವರ ಮಾರ್ಗದರ್ಶನ ಬೇಕು. ಸಮಾನತೆಯ ಹರಿಕಾರ ಬಸವಣ್ಣನವರ ತತ್ವಗಳನ್ನು ಎಲ್ಲರೂ ಪಾಲಿಸಬೇಕಿದೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಸಿದ್ದಾರ್ಥ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್‍ ಯಾದವ್, ಜಿಲ್ಲಾ ಕಾರ್ಯದರ್ಶಿಗಳಾದ ರೇಖ, ಪಾಲಯ್ಯ, ವಕ್ತಾರ ನಾಗರಾಜ್‍ ಬೇದ್ರೆ, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಗ್ರಾಮಾಂತರ ಮಾಜಿ ಅಧ್ಯಕ್ಷ ಕಲ್ಲೇಶಯ್ಯ, ನಗರ ಪ್ರಧಾನ ಕಾರ್ಯದರ್ಶಿ ಬಸವೇಶ್, ನಗರ ಯುವ ಮೋರ್ಚಾ ಅಧ್ಯಕ್ಷ ವಸಂತ ಆಚಾರ್, ಬಸಮ್ಮ, ಶಾಂತಮ್ಮ, ವೀಣ, ಮಂಜುಳಮ್ಮ, ಉಮಾ, ಶಂಭು, ವೀರೇಶ್, ಲಕ್ಷ್ಮಿಸಾಗರ ವಸಂತ್, ಸತೀಶ್‍ಆಚಾರ್, ಪಿ.ಮಹಂತೇಶ್ ಇದ್ದರು.