ಅಂಬೇಡ್ಕರ್‌ ಅವಮಾನ ಮಾಡಿದ ಕಾಂಗ್ರೆಸ್‌ಗೆ ಪಾಠಕಲಿಸಿ: ರವಿಕುಮಾರ್‌

| Published : Apr 15 2024, 01:18 AM IST

ಅಂಬೇಡ್ಕರ್‌ ಅವಮಾನ ಮಾಡಿದ ಕಾಂಗ್ರೆಸ್‌ಗೆ ಪಾಠಕಲಿಸಿ: ರವಿಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಸಮಾಜದ ಪುನರುತ್ಥಾನದ ಚೇತನ ಅಂಬೇಡ್ಕರ್, ದಲಿತರನ್ನು, ಅಸ್ಪೃಶ್ಯರನ್ನು ಮನುಷ್ಯರಂತೆ ಕಾಣಬೇಕೆಂದುವಾದಿಸಿದ ಮಹಾನ್ ಮಾನವತಾವಾದಿ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಎನ್.ರವಿಕುಮಾರ್ ತಿಳಿಸಿದರು.

ಚಿತ್ರದುರ್ಗ: ಹಿಂದೂ ಸಮಾಜದ ಪುನರುತ್ಥಾನದ ಚೇತನ ಅಂಬೇಡ್ಕರ್, ದಲಿತರನ್ನು, ಅಸ್ಪೃಶ್ಯರನ್ನು ಮನುಷ್ಯರಂತೆ ಕಾಣಬೇಕೆಂದುವಾದಿಸಿದ ಮಹಾನ್ ಮಾನವತಾವಾದಿ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಎನ್.ರವಿಕುಮಾರ್ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್‌ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಅಂಬೇಡ್ಕರ್‌ ತೀರಿ ಹೋದಾಗ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡಲಿಲ್ಲ. ಆದರೆ ನೆಹರು ಅವರಿಗೆ 52.6 ಎಕರೆ, ಇಂದಿರಾ ಗಾಂಧಿಗೆ 45 ಎಕರೆ ಹಾಗೂ ರಾಜೀವ್ ಗಾಂಧಿಗೆ 15 ಎಕರೆ ಒಟ್ಟಾರೆ ನೆಹರು ಕುಟುಂಬಕ್ಕೆ 110 ಎಕರೆಗೂ ಹೆಚ್ಚು ಜಾಗ ನೀಡಿದ್ದಾರೆ. ಕಡೆ ಪಕ್ಷ ಅಂಬೇಡ್ಕರ್ ಮೃತದೇಹ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ಸಾರಿಗೆ ವ್ಯವಸ್ಥೆ ಸಹ ನೀಡಲಿಲ್ಲ. ಇದು ಕೇವಲ ದಲಿತರಿಗೆ ಅಲ್ಲ, ಇಡೀ ರಾಷ್ಟ್ರಕ್ಕೆ ಮಾಡಿದ ಅಪಮಾನ ಎಂದರು.

ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಅತ್ಯಂತ ಅವಮಾನೀಯವಾಗಿ ಸೋಲಿಸಿದ ಪಕ್ಷ ಕಾಂಗ್ರೆಸ್. ಅವರಿಗೆ ಭಾರತ ರತ್ನ ಪ್ರಶಸ್ತಿನ್ನು ಕೊಡಲಿಲ್ಲ ಅವರನ್ನು ಸೋಲಿಸಿದ ನಾರಾಯಣ ಸದೋಬ ಕಜ್ರೋಲ್ಕರ್‌ಗೆ ಪದ್ಮವಿಭೂಷಣ ಪ್ರಶಸ್ತಿ ಕೊಟ್ಟು ಗೌರವಿಸಿದರು. ಅಂಬೇಡ್ಕರ್‌ಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದು ಅಟಲ್ ಬಿಹಾರಿ ವಾಜಪೇಯಿ ಎಂದರು.

ಕಾಂಗ್ರೆಸ್ ದಲಿತರನ್ನು ಕೇವಲ ಮತ ಬ್ಯಾಂಕ್‍ನ್ನಾಗಿ ಮಾಡಿಕೊಂಡಿದೆ. ಕಾಂಗ್ರೆಸ್‌ನವರು ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡಲಿಲ್ಲ. ಅಂಬೇಡ್ಕರ್ ಅವರ ಜನ್ಮಭೂಮಿಯನ್ನು ಬಿಜೆಪಿ ಅಭಿವೃದ್ಧಿಪಡಿಸಿದೆ. ಅವರು ಲಂಡನ್‌ನಲ್ಲಿ ಓದಿದ ಜಾಗವನ್ನು ಮ್ಯೂಸಿಯಂನ್ನಾಗಿ ಮಾಡಿದೆ ಎಂದರು.

ದೇಶದಲ್ಲಿ ಕೋಮುಗಲಭೆ ಹೆಚ್ಚಾಗಲು ಕಾರಣ ಕಾಂಗ್ರೆಸ್: ದೇಶದಲ್ಲಿ ಕೋಮುಗಲಭೆ ಹೆಚ್ಚಾಗಲು ಕಾರಣ ಕಾಂಗ್ರೆಸ್. ವಿಧಾನಸೌಧದಲ್ಲಿ ನಿಂತುಕೊಂಡು ಪಾಕಿಸ್ತಾನ ಜಿಂದಾಬಾದ್ ಕೂಗಿದವರನ್ನು ರಕ್ಷಣೆ ಮಾಡುವ, ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು. ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದೇ ಅಂಬೇಡ್ಕರ್ ಅವರಿಗೆ ಮಾಡುವ ಸನ್ಮಾನ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಹಳ ದಿನ ಇರಲ್ಲ ಎಂದರು.

ದಲಿತ ವಿರೋಧಿ ಸಿದ್ದರಾಮಯ್ಯು: ಕೆ.ಎಚ್.ಮುನಿಯಪ್ಪ ಅವರನ್ನು ಕೋಲಾರದಲ್ಲಿ ಸೋಲಿಸಿದರು. ಸಚಿವ ಜಿ.ಪರಮೇಶ್ವರ್‌ ಅವರು ಗೆದ್ದರೆ ಮುಖ್ಯಮಂತ್ರಿ ಆಗಿಬಿಡುತ್ತಾರೆ ಎಂದು ಅವರನ್ನು ಸೋಲಿಸಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ತಂತ್ರ-ಕುತಂತ್ರದಿಂದ ದೆಹಲಿಗೆ ಕಳಿಸಿದ್ದಾರೆ. ಈಗ ದಲಿತರಿಗಾಗಿ ಮೀಸಲಿಟ್ಟಿದ್ದ 11,144 ಕೋಟಿ ರು. ಅನುದಾನವನ್ನು ದಲಿತರಿಗೆ ಖರ್ಚು ಮಾಡದೆ ಬೇರೆ ಇಲಾಖೆಗೆ ವರ್ಗಾವಣೆ ಮಾಡಿರುವ ಸಿದ್ದರಾಮಯ್ಯ ದಲಿತ ವಿರೋಧಿ ಎಂದು ದೂರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸಂಪತ್‍ ಕುಮಾರ್, ವಕ್ತಾರರಾದ ನಾಗರಾಜ್ ಬೇಂದ್ರೇ, ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ ಛಲವಾದಿ ಉಪಸ್ಥಿತರಿದ್ದರು.