ಸಾರಾಂಶ
ಹಳಿಯಾಳ: ಜೆಡಿಎಸ್ ಮುಖಂಡ, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಅವರನ್ನು ಹಣಿಯಲು ಕಾಂಗ್ರೆಸ್- ಬಿಜೆಪಿಗಳೆರಡು ಸಜ್ಜಾಗಿವೆ.
ಘೋಟ್ನೇಕರ ಅವರ ಸಖ್ಯ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಅವರ ಪರಮಾಪ್ತ ಶಿಷ್ಯ ಸಂಜು ಪಾಟೀಲ ಘೋಷಿಸಿದ್ದಾರೆ. ಈ ಹೇಳಿಕೆಯ ಬೆನ್ನಲ್ಲೆ ಘೋಟ್ನೇಕರ ಪುತ್ರನೊಂದಿಗೆ ಸಂಜು ಪಾಟೀಲ ಅವರು ಸಂಸದ ಕಾಗೇರಿ ಅವರನ್ನು ಭೇಟಿಯಾಗಿದ್ದಾರೆ. ಈ ಬೆಳವಣಿಗೆಗೆ ಮುಂಬರುವ ಸಹಕಾರಿ ಸಂಘಗಳ ಚುನಾವಣೆಯೇ ಮೂಲ ಕಾರಣವೆಂದು ಅಂದಾಜಿಸಲಾಗುತ್ತಿದೆ. ತಾಲೂಕಿನ ಸಹಕಾರ ಸಂಘಗಳಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಅವರ ಹಿಡಿತವಿದೆ. ಗ್ರಾಮಾಂತರ ಭಾಗಗಳಲ್ಲಿ ವಿಶೇಷವಾಗಿ ರೈತ ವರ್ಗದಲ್ಲಿ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸಹಕಾರ ಸಂಘಗಳಲ್ಲಿರುವ ಘೋಟ್ನೇಕರ ಅವರ ಪ್ರಾಬಲ್ಯವನ್ನು ಮುರಿದು ತಮ್ಮ ಕೈಗೆ ಸಹಕಾರ ಸೊಸೈಟಿಗಳನ್ನು ಪಡೆಯುವ ಗುರಿಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಹೊಂದಿವೆ. ಆ ಮೂಲಕ ಘೋಟ್ನೇಕರ ಹೊಂದಿರುವ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಲಗ್ಗೆ ಇಡುವ ಇರಾದೆಯನ್ನು ಎರಡೂ ಪಕ್ಷಗಳು ಹೊಂದಿವೆ. ಅದಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡೂ ಪಕ್ಷಗಳ ಮೂಲ ಗುರಿ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.ರಾಜಕೀಯವಾಗಿ ಘೋಟ್ನೇಕರ ಅವರನ್ನು ಹೈರಾಣು ಮಾಡಲು ಎರಡೂ ರಾಷ್ಟ್ರೀಯ ಪಕ್ಷ(ಬಿಜೆಪಿ, ಕಾಂಗ್ರೆಸ್)ಗಳು ಮುಂದಾಗಿದ್ದು, ಕಾಂಗ್ರೆಸ್ ಸಾರಥ್ಯವನ್ನು ಕೆಪಿಸಿಸಿ ಸದಸ್ಯ ಸುಭಾಸ್ ಕೊರ್ವೆಕರ ವಹಿಸಿದ್ದರೇ, ಬಿಜೆಪಿ ಸಾರಥ್ಯವನ್ನು ಮಾಜಿ ಶಾಸಕ ಸುನೀಲ ಹೆಗಡೆ ವಹಿಸಿಕೊಂಡಿದ್ದಾರೆ.ಈಗ ಇವರಿಬ್ಬರೂ ಘೋಟ್ನೇಕರ ಅವರನ್ನು ಶಕ್ತಿಹೀನರನ್ನಾಗಿಸಲು ಸಹಕಾರ ಸಂಘಗಳ ಮೇಲೆ ಕಣ್ಣು ಹಾಕಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡು ರಾಜಕೀಯ ಚದುರಂಗದಾಟವನ್ನು ಆರಂಭಿಸಿದ್ದು, ಮೊದಲ ದಾಳವಾಗಿ ಘೋಟ್ನೇಕರ ಅವರ ಪರಮಾಪ್ತ ಶಿಷ್ಯ, ಹಳಿಯಾಳ ರೈತ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಸಂಜು ಪಾಟೀಲ ಹೊರಹೊಮ್ಮಿದ್ದಾರೆ.ಘೋಟ್ನೇಕರ ದೊಸ್ತಿ ಬೇಡ: ಕಳೆದ ಅ. 19ರಂದು ದೇಶಪಾಂಡೆಯವರ ಕಾರ್ಯಾಲಯದಲ್ಲಿ ರೈತ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಸಂಜು ಪಾಟೀಲ ಕಾಂಗ್ರೆಸ್ ಮುಖಂಡರೊಂದಿಗೆ ಸೇರಿಕೊಂಡು ಸುದ್ದಿಗೋಷ್ಠಿ ನಡೆಸಿ, ಘೋಟ್ನೇಕರ ಅವರನ್ನು ಮನಬಂದಂತೆ ಟೀಕಿಸಿದ್ದರು. ಅಲ್ಲದೇ ಶಾಸಕ ದೇಶಪಾಂಡೆಯವರೇ ಶ್ರೇಷ್ಠ ನಾಯಕರು, ಅವರಿಂದಲೇ ಹಳಿಯಾಳದ ಅಭಿವೃದ್ಧಿ ಸಾಧ್ಯ, ಅದಕ್ಕಾಗಿ ನಾವು ಮತ್ತೆ ಕಾಂಗ್ರೆಸ್ ಸೇರಲು ಬಯಸಿದ್ದು, ನಮ್ಮ ಮಿತ್ರರೂ ಅ. 28ರಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಘೋಷಿಸಿದ್ದರು.
ಬಿಜೆಪಿ ಸೇರ್ಪಡೆ: ಸಂಜು ಪಾಟೀಲರು ಘೋಟ್ನೇಕರ ಪುತ್ರನೊಂದಿಗೆ ಜತೆಗೂಡಿ ಸಂಸದರೊಂದಿಗೆ ನಿಂತಿರುವ ಪೋಟೋವನ್ನು ಘೋಟ್ನೇಕರ ಅವರ ಪುತ್ರ ಶ್ರೀನಿವಾಸ ಹಾಗೂ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಜು ಪಾಟೀಲರು ಬಿಜೆಪಿ ಸೇರ್ಪಡೆಯಾಗಲು ಮುಂದಾಗಿದ್ದಾರೆಂದು ಬಿಂಬಿಸಲು ಪ್ರಯತ್ನಿಸಿದ್ದಾರೆಂದು ಹೇಳಲಾಗುತ್ತಿದೆ. ಪ್ರಸ್ತಾಪವಾಗಿಲ್ಲ: ರೈತ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಸಂಜು ಪಾಟೀಲ ಅವರು ಬಿಜೆಪಿ ಸೇರ್ಪಡೆಯಾಗಿಲ್ಲ. ಪಕ್ಷ ಸೇರ್ಪಡೆಯಾಗಬೇಕಾದರೆ ಪಕ್ಷದ ನಿಯಾಮಾವಳಿಯಂತೆ ಮಂಡಲ ಅಧ್ಯಕ್ಷರಿಗೆ ಮೊದಲು ಅರ್ಜಿಯನ್ನು ಸಲ್ಲಿಸಬೇಕು. ಆದರೆ ಅವರಿಂದ ಅರ್ಜಿ ಬಂದಿಲ್ಲ. ಕೋರ್ ಕಮಿಟಿಯಲ್ಲೂ ಈ ವಿಷಯವು ಪ್ರಸ್ತಾಪವಾಗಿಲ್ಲ ಎಂದು ಮಾಜಿ ಶಾಸಕ ಸುನೀಲ ಹೆಗಡೆ ತಿಳಿಸಿದರು.ಕಾದು ನೋಡ್ತೇವೆ: ಈ ಮೊದಲೇ ನಿಗದಿಪಡಿಸಿದಂತೆ ಅ. 28ರಂದು ಶಾಸಕ ಆರ್.ವಿ. ದೇಶಪಾಂಡೆಯವರ ಉಪಸ್ಥಿತಿಯಲ್ಲಿ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ನಡೆಯಲಿದೆ. ಅಲ್ಲಿಯವರೆಗೂ ಕ್ಷೇತ್ರದ ರಾಜಕೀಯ ಬೆಳವಣಿಗೆಗಳನ್ನು ಕಾದು ನೋಡಲಾಗುವುದು ಎಂದು ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ತಿಳಿಸಿದರು.