ಕಾಂಗ್ರೆಸ್‌ಗೆ ದಲಿತರ ಕುರಿತು ಕಾಳಜಿ ಇಲ್ಲ: ಸದಾನಂದ

| Published : Apr 24 2024, 02:16 AM IST

ಕಾಂಗ್ರೆಸ್‌ಗೆ ದಲಿತರ ಕುರಿತು ಕಾಳಜಿ ಇಲ್ಲ: ಸದಾನಂದ
Share this Article
  • FB
  • TW
  • Linkdin
  • Email

ಸಾರಾಂಶ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತದೆ ಎಂದು ಹೇಳಿರುವುದು ಸುಳ್ಳು. ಸಂವಿಧಾನ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಗೌರವ ತೋರಿಸಿದ್ದೇ ಕಾಂಗ್ರೆಸ್. ದೇಶದಲ್ಲಿ ಬಹುಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸಂವಿಧಾನವನ್ನು ಸಾಕಷ್ಟು ಬಾರಿ ತಿದ್ದುಪಡಿ ಮಾಡಿ ಅಗೌರವ ತೋರಿದೆ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಕಾಂಗ್ರೆಸ್‌ಗೆ ದಲಿತರ ಪರ ನೈಜ ಕಾಳಜಿಯಿಲ್ಲ. ದಲಿತರನ್ನು ಚುನಾವಣೆ ಸಮಯದಲ್ಲಿ ಬಳಸಿಕೊಳ್ಳುವ ಕಾಂಗ್ರೆಸ್ ಇದುವರೆಗೂ ಅವರಿಗೆ ಸರಿಯಾದ ಅಧಿಕಾರ ನೀಡಿಲ್ಲ ಎಂದು ಜಿಪಂ ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ಸದಾನಂದ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕೆಲವು ದಲಿತ ಸಂಘಟನೆಗಳ ಮುಖಂಡರು ‘ತಾಲೂಕಿನ ದಲಿತರ ನಡೆ ಕಾಂಗ್ರೆಸ್ ಕಡೆಗೆ’ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಇದು ಶುದ್ಧ ಸುಳ್ಳು, ನಮ್ಮ ಸಮುದಾಯದ ಬಹುತೇಕ ಜನ ಎನ್‌ಡಿಎ ಅಭ್ಯರ್ಥಿ ಡಾ. ಮಂಜುನಾಥ್ ಪರ ಒಲವು ತೋರುತ್ತಿದ್ದಾರೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತದೆ ಎಂದು ಹೇಳಿರುವುದು ಸುಳ್ಳು. ಸಂವಿಧಾನ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಗೌರವ ತೋರಿಸಿದ್ದೇ ಕಾಂಗ್ರೆಸ್. ದೇಶದಲ್ಲಿ ಬಹುಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸಂವಿಧಾನವನ್ನು ಸಾಕಷ್ಟು ಬಾರಿ ತಿದ್ದುಪಡಿ ಮಾಡಿ ಅಗೌರವ ತೋರಿದೆ. ಬಾಬಾ ಸಾಹೇಬರಿಗೆ ಭಾರತ್ನರತ್ನವನ್ನು ಸಹ ನೀಡಲಿಲ್ಲ. ದೇಶದಲ್ಲಿ ದಲಿತ ಸಮುದಾಯಕ್ಕೆ ನಿಜವಾಗಿಯೂ ವಂಚನೆಯಾಗಿರುವುದೇ ಕಾಂಗ್ರೆಸ್‌ನಿಂದ ಎಂದು ಆರೋಪಿಸಿದರು.

ದಲಿತರಿಗೆ ಮೀಸಲಾದ ಅನುದಾನವನ್ನು ಕಾಂಗ್ರೆಸ್‌ನವರು ಬೇರೆ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನವರು ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ್ ಅವರನ್ನು ಸಿಎಂ ಮಾಡಲಿಲ್ಲ. ಕೇವಲ ಮತಕ್ಕಾಗಿ ಅವರು ಬಿಜೆಪಿ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಇದನ್ನು ತಾಲೂಕಿನ ದಲಿತ ಸಮುದಾಯ ಒಪ್ಪುವುದಿಲ್ಲ ಎಂದರು.

ಜೆಡಿಎಸ್ ವಕ್ತಾರ ದ್ಯಾವಪಟ್ಟಣ ಡಾ.ಮಲ್ಲೇಶ್ ಮಾತನಾಡಿ, ಕಾಂಗ್ರೆಸ್ ನಿಂದ ದಲಿತ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಡಾ.ಮಂಜುನಾಥ್ ಗೆ ಮತ ನೀಡುವ ಮೂಲಕ ತಾಲೂಕಿನ ದಲಿತ ಸಮುದಾಯ ಈ ಬಾರಿ ಕಾಂಗ್ರೆಸ್ ಗೆ ಬುದ್ಧಿ ಕಲಿಸಲಿದೆ ಎಂದರು.

ಮೈತ್ರಿ ಪಕ್ಷದ ಮುಖಂಡರಾದ ಕೂಡ್ಲೂರು ಸಿದ್ದರಾಮು, ವೆಂಕಟೇಶ್, ಕೋಟೆ ಶ್ರೀನಿವಾಸ್, ಶಿವಲಿಂಗಯ್ಯ, ಕೆಂಗಲಮೂರ್ತಿ, ವಕೀಲ ದೇವರಾಜು, ಪಾರ್ಥ, ಶ್ರೀನಿವಾಸ್, ಪುರುಷೋತ್ತಮ, ಚಕ್ಕಲೂರು ಚೌಡಪ್ಪ, ಪ್ರಸನ್ನ, ಪ್ರದೀಪ್, ಕಿರಣ್ ಸೇರಿ ಹಲವರು ಇದ್ದರು.