ಚಿಕ್ಕಮಗಳೂರುಕಾಂಗ್ರೆಸ್‌ನಲ್ಲಿ ಪ್ರಾಮಾಣಿಕ, ನಿಷ್ಠೆ, ಶ್ರದ್ಧೆಯಿಂದ ಕಾಯಕ ಮಾಡುವವರಿಗೆ ಉತ್ತಮ ಅವಕಾಶ ಲಭಿಸುತ್ತವೆ ಎಂಬುದಕ್ಕೆ ಎಚ್.ಪಿ ಮಂಜೇಗೌಡ ಉತ್ತಮ ನಿದರ್ಶನ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಮಂಜೇಗೌಡ ಪದಗ್ರಹಣ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಂಗ್ರೆಸ್‌ನಲ್ಲಿ ಪ್ರಾಮಾಣಿಕ, ನಿಷ್ಠೆ, ಶ್ರದ್ಧೆಯಿಂದ ಕಾಯಕ ಮಾಡುವವರಿಗೆ ಉತ್ತಮ ಅವಕಾಶ ಲಭಿಸುತ್ತವೆ ಎಂಬುದಕ್ಕೆ ಎಚ್.ಪಿ ಮಂಜೇಗೌಡ ಉತ್ತಮ ನಿದರ್ಶನ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾಂಗ್ರೆಸ್‌ ಮುಖಂಡ ಎಚ್‌.ಪಿ.ಮಂಜೇಗೌಡ ಶುಕ್ರವಾರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅಭಿನಂಧಿಸಿ ಮಾತನಾಡಿ ಕಳೆದ 8 ವರ್ಷಗಳಿಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಶ್ರದ್ಧೆಯಿಂದ ಕೆಲಸ ಮಾಡಿದ ಮಂಜೇಗೌಡರು, ಬೀಕನಹಳ್ಳಿ ಗ್ರಾಪಂನಲ್ಲಿ ಸತತ ನಾಲ್ಕು ಬಾರಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಜವಾಬ್ದಾರಿ ನಿರ್ವಹಿಸಿದ್ದಾರೆ. ಹಲವಾರು ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಪ್ರಾಮಾಣಿಕತೆಯಿಂದ ದುಡಿದ ಫಲ ಇಂದು ಮಂಜೇಗೌಡರನ್ನು ಸಿಡಿಎ ಅಧ್ಯಕ್ಷರನ್ನಾಗಿ ಮಾಡಿದೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಸಿಡಿಎ ಅಧ್ಯಕ್ಷ ಎಚ್‌.ಪಿ ಮಂಜೇಗೌಡ, 2000ರಲ್ಲಿ ಮೊದಲ ಬಾರಿ ಗ್ರಾಪಂ ಸದಸ್ಯನಾಗಿ ಆಯ್ಕೆಯಾಗಿ ರಾಜಕೀಯ ಪ್ರವೇಶ ಮಾಡಿ, 4 ಬಾರಿ ಸದಸ್ಯನಾಗಿ ಆಯ್ಕೆಯಾಗಲು ಸಮಾಜದ ಜನರ ಆಶೀರ್ವಾದ ಹಾಗೂ ಸ್ನೇಹಿತರ ಸಹಕಾರ ಕಾರಣ ಎಂದರು.

ಬಿಜೆಪಿ ಭದ್ರಕೋಟೆಯಾಗಿದ್ದ ಬೀಕನಹಳ್ಳಿ ಗ್ರಾಪಂಗೆ ಮೊದಲ ಬಾರಿ ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ಆಯ್ಕೆಯಾಗುವ ಮೂಲಕ ಪಕ್ಷದ ಖಾತೆ ತೆರೆಯಲಾಗಿತ್ತು. 2013ರಲ್ಲಿ ಕೆ.ಎಸ್ ಶಾಂತೇಗೌಡರು ಸ್ಪರ್ಧಿಸಿದ್ದ ವಿಧಾನ ಸಭಾ ಚುನಾವಣೆಯಲ್ಲಿ ಬೂತ್ ಮಟ್ಟದ ಅಧ್ಯಕ್ಷನಾಗಿ ಮಾಡಿದ್ದ ಕೆಲಸ ಪರಿಗಣಿಸಿದ ಪಕ್ಷ ಬ್ಲಾಕ್‌ ಕಾಂಗ್ರೆಸ್ ಹುದ್ದೆಗೆ ನೇಮಕ ಮಾಡಿತ್ತು. ಇಂದು ಸಿಡಿಎ ಅಧ್ಯಕ್ಷನಾಗಿ ಸಂತೋಷವಾಗುತ್ತಿದೆ ಎಂದರು.

ಬಡವರ, ಶೋಷಿತ ವರ್ಗದ ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಕೆಲಸವನ್ನು ಮಾಡುವ ಜೊತೆಗೆ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಕಲ್ಯಾಣ ನಗರ ಮಾದರಿಯಲ್ಲಿ ನಗರದ ಸುತ್ತಮುತ್ತ ಅಭಿವೃದ್ಧಿ ಗುರಿ ಹೊಂದಿದ್ದು, ಯಾರಿಗೂ ನೋವಾಗದಂತೆ ನಡೆದುಕೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ, ಡಾ. ಡಿ.ಎಲ್ ವಿಜಯಕುಮಾರ್, ಎಐಸಿಸಿ ಕಾರ್ಯದರ್ಶಿ ಬಿ.ಎಂ ಸಂದೀಪ್, ಎಂ.ಸಿ. ಶಿವಾನಂದಸ್ವಾಮಿ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ಮುಖಂಡರಾದ ಎಚ್.ಎಚ್‌.ದೇವರಾಜ್, ನಯಾಜ್‌ ಅಹಮದ್, ಸೈಯದ್ ಹನೀಫ್, ಮಲ್ಲೇಶ್ ಸ್ವಾಮಿ, ರಾಜೇಗೌಡ, ಚಂದ್ರಪ್ಪ, ಬಿ.ಎಲ್‌ಬೆಟ್ಟಗೆರೆ ಪ್ರವೀಣ್, ನಾರಾಯಣಗೌಡ, ಲಕ್ಷ್ಮಣ್‌, ಹಿರೇಮಗಳೂರು ರಾಮಚಂದ್ರ, ಗಂಗಾಧರ್‌ ಉಪಸ್ಥಿತರಿದ್ದರು.ಫೋಟೋ

ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾಂಗ್ರೆಸ್‌ ಮುಖಂಡ ಎಚ್‌.ಪಿ.ಮಂಜೇಗೌಡ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಸಮಾರಂಭದಲ್ಲಿ ಶಾಸಕ ತಮ್ಮಯ್ಯ ಇತರರು ಇದ್ದರು.