ಅಕ್ರಮಕ್ಕೆ ಕಡಿವಾಣ ಹಾಕುವ ಜತೆಗೆ ಜನರ ತೆರಿಗೆ ಹಣ ಪೋಲಾಗುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೆ ತಂದಿದೆ.
ಹೂವಿನಹಡಗಲಿ: ನರೇಗಾ ಯೋಜನೆಯಲ್ಲಿ ನಡೆಯುತ್ತಿದ್ದ ಅಕ್ರಮಕ್ಕೆ ಕಡಿವಾಣ ಹಾಕುವ ಜತೆಗೆ ಜನರ ತೆರಿಗೆ ಹಣ ಪೋಲಾಗುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೆ ತಂದಿದೆ. ಯೋಜನೆಯಿಂದ ಪ್ರಧಾನಿ ನರೇಂದ್ರ ಮೋದಿಗೆ ಹೆಸರು ಬರುತ್ತದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಶಾಸಕ ಕೃಷ್ಣನಾಯ್ಕ ದೂರಿದರು.ಇಲ್ಲಿನ ಶಾಸಕರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಗಾಂಧೀಜಿಯವರ ಹೆಸರನ್ನು ತೆಗೆದು ಹಾಕಿ ಅವಮಾನ ಮಾಡುತ್ತಿದೆ ಎಂದು ಕಾಂಗ್ರೆಸ್ ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. 1980ರಿಂದ 1983ರಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮ ಜಾರಿಯಲ್ಲಿತ್ತು. 1983 ರಿಂದ 1989ರವರೆಗೂ ಭೂ ರಹಿತರಿಗೆ ಗ್ರಾಮೀಣ ಭೂ ರಹಿತ ಉದ್ಯೋಗ ಖಾತ್ರಿ ಕಾರ್ಯಕ್ರಮ ಪರಿಚಯಿಸಲಾಗಿತ್ತು. 1989 ರಿಂದ 1993 ರವರೆಗೂ ಜವಾಹರ್ ರೋಜ್ಗಾರ್ ಯೋಜನೆ ಎಂದು ಹೆಸರು ಇಡಲಾಗಿತ್ತು. 1993 ರಿಂದ 1999 ರಲ್ಲಿ ಉದ್ಯೋಗ ಭರವಸೆ ಯೋಜನೆ ಜಾರಿಯಲ್ಲಿತ್ತು. 1999 ರಿಂದ 2002 ರ ವರೆಗೂ ಜವಾಹರ್ ಗ್ರಾಮ ಸಮೃದ್ಧಿ ಯೋಜನೆ ಎಂದು ಬದಲಾವಣೆಯಾಗಿತ್ತು. 2001 ರಿಂದ ಸಂಪೂರ್ಣ ಗ್ರಾಮೀಣ ರೋಜ್ಗಾರ್ ಯೋಜನೆ ಎಂದು ಹೆಸರು ಪಡೆಯಿತು. 2004 ರಲ್ಲಿ ರಾಷ್ಟ್ರೀಯ ಕೆಲಸಕ್ಕಾಗಿ ಆಹಾರ ಕಾರ್ಯಕ್ರಮ ಆರಂಭಿಸಲಾಯಿತು. ಅಂತಿಮವಾಗಿ 2005 ರಲ್ಲಿ ಮನರೇಗಾ ಯೋಜನೆ ಯೋಜನೆ ರೂಪಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ನಿಲ್ಲಿಸುತ್ತಿದೆ ಎಂದು ಕಾಂಗ್ರೆಸ್ ಸರ್ಕಾರ ಜನರಿಗೆ ಹಸಿ ಸುಳ್ಳು ಹೇಳಿ ಅಪ್ರಚಾರ ಮಾಡುತ್ತಿದ್ದಾರೆಂದು ಆರೋಪಿಸಿದರು.ಬಿಜೆಪಿ ತಾಲೂಕು ಅಧ್ಯಕ್ಷ ಪಿ.ಮಲ್ಲಿಕಾರ್ಜುನ, ಈಟಿ ಲಿಂಗರಾಜ, ಎನ್.ಕೋಟೆಪ್ಪ, ಹಣ್ಣಿ ಶಶಿಧರ, ಡಿ.ಪುನೀತ್, ಲಕ್ಷ್ಮಣನಾಯ್ಕ, ಎಸ್.ಗೋಣೆಪ್ಪ, ಆಂಜನೇಯ ಧಾರವಾಡ, ಪತ್ರೇಶ, ಹನುಮಂತಪ್ಪ ಇದ್ದರು.