ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸಾಯಿ ಗಾಂವಕರ ಮಾತನಾಡಿ, ಶುದ್ಧೀಕರಣದ ಹೆಸರಿನಲ್ಲಿ ಜಾತಿವಾದ ಬಿಜೆಪಿಯದ್ದು ಕೊಳಕು ವಾದವಾಗಿದೆ. ಅವರು ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಅಂಕೋಲಾ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ''ಶುದ್ಧೀಕರಣ'' ವಿವಾದದ ಕುರಿತು ನೀಡಿದ ಹೇಳಿಕೆಗಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿರುವುದನ್ನು ಖಂಡಿಸಿ ಅಂಕೋಲಾದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸಾಯಿ ಗಾಂವಕರ ಮಾತನಾಡಿ, ಶುದ್ಧೀಕರಣದ ಹೆಸರಿನಲ್ಲಿ ಜಾತಿವಾದ ಬಿಜೆಪಿಯದ್ದು ಕೊಳಕು ವಾದವಾಗಿದೆ. ಅವರು ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ. ದೂರುದಾರ ಕೂಡ ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದು, ಇದು ಬಿಜೆಪಿ ಮಾಡಿದ ಹುನ್ನಾರವಾಗಿದೆ. ಕೇವಲ ಶುದ್ಧೀಕರಣದ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದಕ್ಕೆ ಎಸ್ಸಿ/ಎಸ್ಟಿ(ದೌರ್ಜನ್ಯ ತಡೆ) ಕಾಯ್ದೆಯಡಿ ದೂರು ದಾಖಲಿಸಿರುವುದು ಖಂಡನೀಯ. ಇದು ಬಿಜೆಪಿ ಮಾಡುತ್ತಿರುವ ಅಸಮಾನತೆಯನ್ನು ತೋರಿಸುತ್ತಿದೆ ಎಂದರು.ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಮಾತನಾಡಿ, ಆ. 8ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾರ್ವಜನಿಕ ಸಭೆ ಮಾಡಿದ್ದರು. ಸಭೆಯ ಬಳಿಕ ಆ. 11ರಂದು ಬಲಪಂಥೀಯ ಸಂಘಟನೆಯಾದ ಶ್ರೀರಾಮಸೇನಾ, ಧರ್ಮಾರ್ಥ ಸೇವಾ ನ್ಯಾಯಾಸ ಸಂಘಟನೆಯು ಮೈದಾನದಲ್ಲಿ ''ಶುದ್ಧೀಕರಣ ಯಜ್ಞ''(ಹವನ) ನಡೆಸಿತ್ತು.
ರಾಹುಲ್ ಈ ಶುದ್ಧೀಕರಣ ಕೃತ್ಯವು ದಲಿತ ಸಮುದಾಯದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಸ್ಸಿ ಸಮುದಾಯಕ್ಕೆ ಮಾಡಿದ ಅವಮಾನ ಮತ್ತು ಅಸ್ಪೃಶ್ಯತೆಯ ಅಪರಾಧ ಎಂದು ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಟೀಕಿಸಿದ್ದರು. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಬಿಜೆಪಿಯವರು ರಾಹುಲ್ಗಾಂಧಿ ವಿರುದ್ಧ ದೂರು ದಾಖಲಾಗುವಂತೆ ವ್ಯವಸ್ಥಿತ ಸಂಚು ಮಾಡಿದ್ದಾರೆ. ನೀವು ಎಷ್ಟು ದೂರು ದಾಖಲಿಸಿದರು ಸತ್ಯಕ್ಕೆ ಯಾವತ್ತಿಗೂ ಜಯ ಸಿಗಲಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ ಸ್ವಾಗತಿಸಿದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾರದಾ ರಾಥೋಡ, ರಾಜ್ಯ ಕಾರ್ಯದರ್ಶಿ ಸುಜಾತಾ ಗಾಂವಕರ, ಮಾಜಿ ಶಾಸಕ ಕೆ.ಎಚ್. ಗೌಡ, ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಪಾಂಡರಂಗ ಗೌಡ, ಪ್ರಮುಖರಾದ, ನಾರಾಯಣ ನಾಯಕ ಸಂತೋಷ ನಾಯ್ಕ, ವಿನೋದ ಗಾಂವಕರ, ಮೋನಪ್ಪ ನಾಯ್ಕ, ರಾಮಚಂದ್ರ ನಾಯ್ಕ, ಪುರುಷೋತ್ತಮ ನಾಯ್ಕ, ಶಾಂತಿ ಆಗೇರ, ಜೀವಿತಾ ಗಾಂವಕರ, ದಾಮೋದರ ಜಿ. ನಾಯ್ಕ, ಉದಯ ವಾಮನ ನಾಯಕ,ರಾಜು ಹರಿಕಂತ್ರ, ದೇವಿದಾಸ ನಾಯ್ಕ, ಮಂಜುನಾಥ ನಾಯ್ಕ, ಜಯಪ್ರಕಾಶ ನಾಯ್ಕ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.