ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಗಳ ಜೊತೆಗೆ ಸಚಿವ ಆರ್.ಬಿ. ತಿಮ್ಮಾಪೂರ ಅವರು ನಡೆಸಿದ ಮಾತುಕತೆ ಸಫಲವಾಗಿದ್ದು, ಮೂವರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯುವ ಮೂಲಕ ಕಾಂಗ್ರೆಸ್ ನಾಯಕರು ಹಾಗೂ ಅಭ್ಯರ್ಥಿಯಲ್ಲಿ ನಿರಾಳತೆ ತಂದಿದ್ದಾರೆ.

ಬಾಗಲಕೋಟೆ ಉಪಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ನಗರಸಭೆ ಮಾಜಿ ಸದಸ್ಯ ಗೋವಿಂದರಾಜ್ ಬಳ್ಳಾರಿ ಸೇರಿ ಮೂವರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇದೀಗ ಸಚಿವ ಆರ್.ಬಿ.ತಿಮ್ಮಾಪೂರ ನೇತೃತ್ವದಲ್ಲಿ ನಡೆದ ಸಂವಿಧಾನ ಸಫಲವಾಗಿದ್ದು, ಮೂವರು ನಾಮಪತ್ರ ವಾಪಸ್ ಪಡೆದಿದ್ದಾರೆ.

ಹಿರಿಯ ನಾಯಕರ ಕರೆದು ಗೌರವದಿಂದ ಕಂಡ ಪರಿಣಾಮ ನಾವು ನಾಮಪತ್ರ ವಾಪಸ್ ಪಡೆದಿದ್ದೇವೆ ಎಂದು ಮೂವರು ಪಕ್ಷೇತರ ಅಭ್ಯರ್ಥಿಗಳು ತಿಳಿಸಿದ್ದು, ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿ, ಪಕ್ಷದ ಅಭ್ಯರ್ಥಿ ಉಮೇಶ ಮೇಟಿ ಅವರನ್ನು ಗೆಲ್ಲಿಸಲು ಶ್ರಮಿಸುತ್ತೇವೆ ಎಂದು ಗೋವಿಂದ್ ಬಳ್ಳಾರಿ, ಅಯೂಬ್ ಬಾಗೇವಾಡಿ, ಅಬ್ದುಲ್ ರಝಾಕ್ ಬಾಳಿಕಾಯಿ ತಿಳಿಸಿದರು.ಬೇಷರತ್‌ ಬೆಂಬಲ: ಸಚಿವ ತಿಮ್ಮಾಪೂರ

ನಾಮಪತ್ರ ವಾಪಸ್ ಪಡೆದ ಮೂವರು ಮುಖಂಡರು ಶಕ್ತಿವಂತರು. ಅವರದ್ದೇ ಆದ ಶಕ್ತಿ ಇದೆ. ಯಾವುದೇ ಕಂಡೀಷನ್ ಹಾಕದೇ ನಾಮಪತ್ರ ವಾಪಸ್ ಪಡೆದು, ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಕೂಡಿ ಚುನಾವಣೆ ಎದುರಿಸುತ್ತೇವೆ ಎಂದು ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದ್ದಾರೆ.


ನಾಮಪತ್ರ ವಾಪಸ್ ಪಡೆದ ಬಳಿಕ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಸಣ್ಣ ಸಮಸ್ಯೆಗಳಾಗಿದ್ವು, ಅವೆಲ್ಲವನ್ನ ಬಗೆಹರಿಸಿದ್ದೇವೆ. ನಾಮಪತ್ರ ವಾಪಸ್ ಪಡೆದ ಮೂವರು ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ ಎಂದರು.

ಸಿಎಂ ಅವರು ಚುನಾವಣೆ ಪ್ರಚಾರಕ್ಕೆ ಜಿಲ್ಲೆಗೆ ಬರುವ ಕುರಿತು ಮಾತನಾಡಿ, ಮಾ.30, 31ರಂದು ಬರಬಹುದು. ನಂತರ ಏಪ್ರಿಲ್‌ 4-5 ಅಥವಾ 6-7ರಂದು ಬರಬಹುದು. ಎರಡು ಬಾರಿ ಬರ್ತಾರೆ ಎಂದು ಹೇಳಿದರು.

ನಾಳೆ ಕ್ಯಾಬಿನೆಟ್ ಸಭೆ ಇದೆ. ಬಹುಶಃ ಮಾ.28ರಿಂದ ಬಹುತೇಕ-ನಾಯಕರು ಜಿಲ್ಲೆಗೆ ಬರಲಿದ್ದಾರೆ ಎಂದು ತಿಮ್ಮಾಪೂರ ತಿಳಿಸಿದರು.