ಮೇಲ್ಮನೆ: ಕೊನೆಗೂ 20 ಕಾಂಗ್ರೆಸ್‌ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್‌ ಅಂತಿಮ

| Published : May 30 2024, 12:56 AM IST / Updated: May 30 2024, 05:11 AM IST

ಮೇಲ್ಮನೆ: ಕೊನೆಗೂ 20 ಕಾಂಗ್ರೆಸ್‌ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್‌ ಅಂತಿಮ
Share this Article
  • FB
  • TW
  • Linkdin
  • Email

ಸಾರಾಂಶ

ಖರ್ಗೆ ಜೊತೆ ದಿಲ್ಲಿಯಲ್ಲಿ ಸಿದ್ದು, ಡಿಕೆಶಿ ಸಭೆ ಮಾಡಿ 300 ಆಕಾಂಕ್ಷಿಗಳ ಪಟ್ಟಿಗೆ ಭರ್ಜರಿ ಕತ್ತರಿ ಹಾಕಿದ್ದು, ನಾಡಿದ್ದು ಅಂತಿಮ ಪಟ್ಟಿ ಪ್ರಕಟ ಮಾಡುವ ಸಾಧ್ಯತೆ ದಟ್ಟವಾಗಿದೆ.

 ಬೆಂಗಳೂರು :  ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಶತಕ ದಾಟಿದ್ದ ಆಕಾಂಕ್ಷಿಗಳ ಪಟ್ಟಿ ಬುಧವಾರ ತಡರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ರಾಜ್ಯ ನಾಯಕರು ಚರ್ಚೆ ನಡೆಸುವ ವೇಳೆಗೆ ಇಪ್ಪತ್ತಕ್ಕಿಂತ ಕಡಿಮೆಯಾಗಿದೆ.

ಈ ಪೈಕಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಖಚಿತ. ಉಳಿದಂತೆ ಸಚಿವ ಬೋಸರಾಜು ಸೇರಿದಂತೆ ಉಳಿದ ಎಲ್ಲರೂ ಪೈಪೋಟಿ ಎದುರಿಸಬೇಕಿದೆ. ಅಂತಿಮ ಹಂತದಲ್ಲಿರುವ ಸುಮಾರು 20 ಮಂದಿಯಲ್ಲಿ ಯಾರು ಬೇಕಾದರೂ ಸ್ಥಾನ ಗಿಟ್ಟಿಸಬಹುದು ಅಥವಾ ಯಾರಿಗೆ ಬೇಕಾದರೂ ಸ್ಥಾನ ತಪ್ಪಬಹುದು ಎಂಬಂತಹ ಸ್ಥಿತಿ ಇದೆ.

ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಚರ್ಚೆ ನಡೆಸಿ ತಮ್ಮ ಮನಸ್ಸಿನಲ್ಲಿರುವ ಹೆಸರುಗಳನ್ನು ತಿಳಿಸಿದ್ದಾರೆ.

ಈ ಎಲ್ಲ ಪ್ರಕ್ರಿಯೆಯ ನಂತರ ಸುಮಾರು 20 ಹೆಸರುಳ್ಳ ಪಟ್ಟಿಯೊಂದಿಗೆ ಉಭಯ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಬುಧವಾರ ತಡರಾತ್ರಿ ಚರ್ಚೆ ನಡೆಸಿದರು. ಈ ವೇಳೆ ಹೈಕಮಾಂಡ್‌ನಿಂದಲೂ ಒಂದೆರಡು ಹೆಸರು ಸೇರ್ಪಡೆಯಾಗುವ ಸಾಧ್ಯತೆಯಿದೆ. ಇದಾದ ನಂತರ ಪಟ್ಟಿಯು ಮುಖಂಡ ರಾಹುಲ್ ಗಾಂಧಿ ಅವರ ಗಮನಕ್ಕೆ ಹೋಗಲಿದ್ದು, ಬಹುತೇಕ ಜೂ.1ರ ಸುಮಾರಿಗೆ ಪ್ರಕಟಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಬೋಸರಾಜುಗೂ ಖಚಿತವಿಲ್ಲ:

ರಾಜ್ಯದ ಮಟ್ಟದಲ್ಲಿ ನಾಯಕರ ಆಕಾಂಕ್ಷಿಗಳ ಬಗ್ಗೆ ಮಾತುಕತೆ ನಡೆದಿದ್ದಾಗ ಕಳೆದ ಚುನಾವಣೆಯಲ್ಲಿ ತಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ವರುಣ ಕ್ಷೇತ್ರ ಬಿಟ್ಟುಕೊಟ್ಟಿದ್ದ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸ್ಥಾನ ದೊರೆಯುವುದು ಖಚಿತ ಎಂಬುದು ನಿರ್ಧಾರವಾಗಿತ್ತು.

ಇದೇ ವೇಳೆ ಸಚಿವರಾಗಿರುವ ಬೋಸರಾಜು ಹಾಗೂ ಪ್ರಭಾವಿ ಕೆ.ಗೋವಿಂದರಾಜು ಅವರ ಹೆಸರು ಬಹುತೇಕ ಖಚಿತ ಎನ್ನಲಾಗಿತ್ತು. ಉಳಿದ ಸ್ಥಾನಗಳ ಬಗ್ಗೆ ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿತ್ತು.

ಆದರೆ, ದೆಹಲಿಯಲ್ಲಿ ಚರ್ಚೆಯ ವೇಳೆಗೆ ಈ ಚಿತ್ರಣ ಸಂಪೂರ್ಣ ಬದಲಾಗಿದೆ. ಸಚಿವ ಬೋಸರಾಜು ಅವರನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡಿ ಸಚಿವ ಸ್ಥಾನದಲ್ಲೇ ಮುಂದುವರೆಸಬೇಕು ಎಂದು ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ದಿನೇಶ್‌ ಗುಂಡೂರಾವ್‌ ಮೊದಲಾದದವರು ನಾಯಕತ್ವದ ಮೇಲೆ ಒತ್ತಡ ನಿರ್ಮಾಣ ಮಾಡಿದ್ದಾರೆ. ಆದರೆ, ಬೋಸರಾಜು ಅವರಿಗೆ ಜಿಲ್ಲೆಯ ಶಾಸಕರಿಂದ ತೀವ್ರ ವಿರೋಧವಿದೆ. ಅಲ್ಲದೆ, ರಾಯಚೂರಿನವರಾದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು ಆಗಿರುವ ವಸಂತಕುಮಾರ್ ಅವರನ್ನು ವಿಧಾನಪರಿಷತ್ತಿಗೆ ಪರಿಶಿಷ್ಟರ ಕೋಟಾದಡಿ ಆಯ್ಕೆ ಮಾಡಬೇಕು ಎಂಬ ಇರಾದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೆ ಎನ್ನಲಾಗುತ್ತಿದೆ.

ಒಂದು ವೇಳೆ ವಸಂತಕುಮಾರ್ ಅವರಿಗೆ ಅವಕಾಶ ನೀಡಬೇಕು ಎಂದು ಖರ್ಗೆ ಅವರು ಪಟ್ಟು ಹಿಡಿದರೆ ಆಗ ಒಂದೇ ಜಿಲ್ಲೆಗೆ ಎರಡು ಸ್ಥಾನ ನೀಡುವುದು ಕಷ್ಟವಾಗುತ್ತದೆ. ಹೀಗಾಗಿ ಖಚಿತ ಎನ್ನಲಾಗಿದ್ದ ಬೋಸರಾಜು ಅವರಿಗೆ ಅವಕಾಶ ಸಿಗುವುದೇ ಎಂಬುದನ್ನು ಕಾದು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ವೇಳೆ ಬೋಸರಾಜು ಅವರಿಗೆ ಅವಕಾಶ ತಪ್ಪಿದರೆ ಆಗ ಹಿಂದುಳಿದ ಕೋಟಾದಡಿ ಬೆಂಗಳೂರಿನ ವೇಣುಗೋಪಾಲ್‌ ಅಥವಾ ಪಿ.ಆರ್.ರಮೇಶ್‌ ಅಂತಹವರು ಅವಕಾಶ ಪಡೆಯಬಹುದು.

ಇನ್ನು ಒಕ್ಕಲಿಗ ಕೋಟಾದಡಿಯಲ್ಲಿ ಪ್ರಭಾವಿ ಕೆ.ಗೋವಿಂದರಾಜು ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಆದರೆ, ಸತತ ಎರಡು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿರುವ ಗೋವಿಂದರಾಜು ಅವರನ್ನು ಮೂರನೇ ಬಾರಿಗೂ ಆಯ್ಕೆ ಮಾಡಲು ಹೈಕಮಾಂಡ್‌ ಒಪ್ಪುವುದೇ ಎಂಬುದು ಕಾದುನೋಡುವ ವಿಚಾರವಾಗಿ ಪರಿಣಮಿಸಿದೆ.

ಹೀಗಾಗಿ, ಒಕ್ಕಲಿಗ ಕೋಟಾದಡಿ ಅಚ್ಚರಿಯೆಂಬಂತೆ ಚಿಕ್ಕಮಗಳೂರಿನವರಾದ ಹಾಗೂ ಎಐಸಿಸಿ ಕಾರ್ಯದರ್ಶಿ ಸಂದೀಪ್‌ ಹೆಸರು ಕೇಳಿ ಬಂದಿದೆ. ಇದೇ ವೇಳೆ ಉಪಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತರಾದ ವಿನಯಕಾರ್ತಿಕ್ ಅವರ ಹೆಸರು ಕೂಡ ಪ್ರಬಲವಾಗಿದೆ.

ಮುಸ್ಲಿಮರಿಂದ ಹುಬ್ಬಳ್ಳಿಯ ಮಹಮ್ಮದ್‌ ಇಸ್ಮಾಯಿಲ್‌ ತಮಟಗಾರ ಹೆಸರು ಪ್ರಬಲವಾಗಿದ್ದು, ಅವರ ಪರವಾಗಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ತೀವ್ರ ಲಾಬಿ ನಡೆಸಿದ್ದಾರೆ. ಇವರಲ್ಲದೆ, ಬಾಗಲಕೋಟೆಯ ಮಹಮ್ಮದ್‌ ಸೌದಾಗರ್‌ ಹಾಗೂ ಹುಬ್ಬಳ್ಳಿಯ ಆಲ್ತಾಫ್‌ ಆಲೂರ್‌ ಹೆಸರು ಇದೆ.

ಇನ್ನು ಮಹಿಳೆಯರಿಗೆ ಈ ಬಾರಿ ಅವಕಾಶ ನೀಡಬೇಕು ಎಂಬ ಇರಾದೆ ಹೈಕಮಾಂಡ್‌ಗೆ ಇದೆ. ಈ ಸ್ಥಾನಕ್ಕಾಗಿ ಒಕ್ಕಲಿಗರಾದ ಮಾಜಿ ಮೇಯರ್‌ ಪದ್ಮಾವತಿ ಹಾಗೂ ಪರಿಶಿಷ್ಟರಾದ ಕಮಲಾಕ್ಷಿ ರಾಮಣ್ಣ ಮತ್ತು ಕ್ರಿಶ್ಚಿಯನ್‌ ಸಮುದಾಯದ ಮೆಟಿಲ್ಡಾ ಡಿಸೋಜಾ ತೀವ್ರ ಪೈಪೋಟಿ ನಡೆಸಿದ್ದಾರೆ. ಆದರೆ, ಈ ಕೋಟಾಗಳಡಿ (ಒಕ್ಕಲಿಗ, ಪರಿಶಿಷ್ಟ) ಪುರುಷರಿಗೆ ಅವಕಾಶ ದೊರಕಿದರೆ ಇವರಿಗೆ ಅವಕಾಶ ತಪ್ಪುತ್ತದೆ.

ಕ್ರಿಶ್ಚಿಯನ್‌ ಸಮುದಾಯದಿಂದ ಈ ಬಾರಿ ಯುವಕರಿಗೆ ಅವಕಾಶ ದೊರೆಯುತ್ತದೆಯೋ ಎಂಬುದನ್ನು ಕಾದು ನೋಡಬೇಕು. ಹಿರಿಯರಿಗೆ ನೀಡಲು ಹೈಕಮಾಂಡ್‌ ಮನಸ್ಸು ಮಾಡಿದರೆ ಐವಾನ್ ಡಿಸೋಜಾಗೆ ಸಿಗಬಹುದು. ಯುವ ನಾಯಕರಿಗೆ ನೀಡಲು ನಿರ್ಧರಿಸಿದರೆ ಮೆಟಿಲ್ಡಾ ಡಿಸೋಜಾ ಅಥವಾ ನವೀನ್ ಡಿಸೋಜಾ ಅವರಿಗೆ ದೊರೆಯಬಹುದು ಎನ್ನಲಾಗುತ್ತಿದೆ.

ಇನ್ನು ಬೋವಿ ಸಮುದಾಯದಿಂದ ರಾಮಪ್ಪ ಬೋವಿ ಅವರ ಹೆಸರು ಪರಿಗಣನೆಯಲ್ಲಿದೆ.

ಇವಿಷ್ಟು ರಾಜ್ಯ ನಾಯಕರು ಚರ್ಚೆಗೆ ಒಯ್ಯಲಿರುವ ಹೆಸರುಗಳು. ಇವರಲ್ಲದೆ ಹೈಕಮಾಂಡ್‌ ಕೂಡ ಒಂದು ಅಥವಾ ಎರಡು ಅಚ್ಚರಿಯ ಹೆಸರನ್ನು ಸೂಚಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಇದೇ ವೇಳೆ, ಬಿಜೆಪಿಗೆ ಮರುಸೇರ್ಪಡೆಗೊಂಡ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಹಲವು ಲಿಂಗಾಯತ ನಾಯಕರ ಕಣ್ಣಿದ್ದು, ಆ ಪೈಕಿ ಒಬ್ಬರ ಹೆಸರು ಅಂತಿಮ ಆಗುವ ಸಾಧ್ಯತೆ ಕೂಡ ಇದೆ.

ಮೇಲ್ಮನೆ 7 ಸ್ಥಾನಕ್ಕೆ ಅಂತಿಮ ಚರ್ಚೆಯಲ್ಲಿ

ಒಬಿಸಿ- ಯತೀಂದ್ರ ಸಿದ್ದರಾಮಯ್ಯ (ಬಹುತೇಕ ಖಚಿತ)

ಸಚಿವ ಎನ್‌.ಎಸ್‌. ಬೋಸರಾಜು, ವೇಣುಗೋಪಾಲ್‌, ಪಿ.ಆರ್.ರಮೇಶ್‌, ಹರೀಶ್‌

ಒಕ್ಕಲಿಗರು - ಕೆ.ಗೋವಿಂದರಾಜು, ಸಂದೀಪ್, ವಿನಯ ಕಾರ್ತಿಕ್

ಮುಸ್ಲಿಂ- ಮಹಮ್ಮದ್‌ ಇಸ್ಮಾಯಿಲ್‌ ತಮಟಗಾರ, ಮಹಮ್ಮದ್ ಸೌದಾಗರ್, ಅಲ್ತಾಫ್‌ ಹಳ್ಳೂರ್‌

ಮಹಿಳೆ- ಪದ್ಮಾವತಿ, ಕಮಲಾಕ್ಷಿ ರಾಜಣ್ಣ ಎಸ್‌.ಸಿ.ಮೆಟಿಲ್ಡಾ ಡಿಸೋಜಾ

ಎಸ್‌.ಸಿ.- ಕಾರ್ಯಾಧ್ಯಕ್ಷ ವಸಂತಕುಮಾರ್, ರಾಮಪ್ಪ ಬೋವಿ

ಕ್ರಿಶ್ಚಿಯನ್- ಐವಾನ್ ಡಿಸೋಜಾ, ನವೀನ್ ಡಿಸೋಜಾ