ಸಾರಾಂಶ
ಚನ್ನಪಟ್ಟಣ : ಲೋಕಸಭಾ ಚುನಾವಣೆಯಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ)ದವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದು ಗೊತ್ತಾಗಿದೆ. ಈ ಮಾತು ನಿಜವೇ ಆಗಿದ್ದರೆ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಕರ್ನಾಟಕದ ಜನ ಸುರಕ್ಷತೆಯಿಂದಿರಲು ಸಾಧ್ಯವೇ? ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದರು.
ಚನ್ನಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಿ ನಗರದ ಗಾಂಧಿ ಭವನ ವೃತ್ತದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಎಸ್ಡಿಪಿಐ ಪಕ್ಷದ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಆ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಿರುವ ಮಾಹಿತಿ ಬಂದಿದೆ. ಈ ಬಗ್ಗೆ ಮತದಾರರೂ ಆಲೋಚನೆ ಮಾಡಬೇಕು. ಇದಕ್ಕೆ ಕಾಂಗ್ರೆಸ್ ಕೂಡ ಸ್ಪಷ್ಟನೆ ನೀಡಬೇಕೆಂದು ಪರೋಕ್ಷವಾಗಿ ಹೇಳಿದರು.
ಪ್ರಧಾನಿ ಮೋದಿಯವರು 10 ವರ್ಷಗಳಲ್ಲಿ ದೇಶವನ್ನು ಕಾಪಾಡುವ ಜೊತೆಗೆ ಭಾರತದ ಆರ್ಥಿಕತೆಯನ್ನು 11 ರಿಂದ 5 ನೇ ಸ್ಥಾನಕ್ಕೆ ತರುವ ಕೆಲಸ ಮಾಡಿದ್ದಾರೆ. ಮೋದಿ ಅವರನ್ನು 3ನೇ ಬಾರಿ ಪ್ರಧಾನಿ ಮಾಡಿದರೆ ದೇಶದ ಅರ್ಥ ವ್ಯವಸ್ಥೆಯನ್ನು 5ರಿಂದ 3ನೇ ಸ್ಥಾನಕ್ಕೆ ತರುತ್ತಾರೆ. ಇದು ಮೋದಿ ಗ್ಯಾರಂಟಿ ಎಂದು ಹೇಳಿದರು.
ಮೋದಿಯವರು 23 ವರ್ಷ ಮುಖ್ಯಮಂತ್ರಿಯಾಗಿ, 10 ವರ್ಷ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಮೇಲೆ ಒಂದು ರುಪಾಯಿಯ ಭ್ರಷ್ಟಾಚಾರದ ಆರೋಪವೂ ಇಲ್ಲ. ಆದರೆ, ಕಾಂಗ್ರೆಸ್ ಪಕ್ಷ 12 ಲಕ್ಷ ಕೋಟಿ ಭ್ರಷ್ಟಾಚಾರ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28ಕ್ಕೆ 28 ಸ್ಥಾನಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸವನ್ನು ಮತದಾರರು ಮಾಡಬೇಕು. ನೀವು ರೈತ ಮಹಿಳೆ ಅಥವಾ ಕಮಲಕ್ಕೆ ವೋಟು ಹಾಕಿದರೂ ಆ ಮತ ಮೋದಿಯವರಿಗೆ ಚಲಾಯಿಸಿದಂತೆ ಆಗುತ್ತದೆ.
ಮೋದಿಯವರು 400ಕ್ಕೂ ಹೆಚ್ಚು ಸಂಸದರನ್ನು ಗೆಲ್ಲಿಸಿ ದೇಶ ಮುನ್ನಡೆಸಲು ಅವಕಾಶ ನೀಡುವಂತೆ ಕರೆ ನೀಡಿದ್ದಾರೆ. ಇಡೀ ದೇಶ ಮೋದಿ ಪರವಾಗಿದೆ. ಮೋದಿ ಅವರಂಥ ಪ್ರಾಮಾಣಿಕ ಪ್ರಧಾನಿ, ಮಂಜುನಾಥ್ ಅವರಂಥ ಸೇವಾಮನೋಭಾವದ ಅಭ್ಯರ್ಥಿ ನಮ್ಮಲ್ಲಿದ್ದಾರೆ ಎಂದು ಹೇಳಿದರು.
ರೋಡ್ ಶೋ ದಲ್ಲಿ ವ್ಯಕ್ತವಾಗಿರುವ ಜನ ಬೆಂಬಲ ನೋಡಿದರೆ ಈ ಚುನಾವಣೆಯಲ್ಲಿ ಮಂಜುನಾಥ್ 5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಅಮಿತ್ ಶಾ ಹೇಳಿದರು.