ಕನ್ನಡಪ್ರಭ ವಾರ್ತೆ ಬೆಂಗಳೂರು

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಹಾಗೂ ಇಡೀ ದೇಶದಲ್ಲಿ ಪರೀಕ್ಷೆ ರದ್ದು ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಮೇ 21 ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಾಗೂ ರಾಜಭವನ ಚಲೋ ನಡೆಸಲಾಗುವುದು ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ರಾಜ್ಯಾಧ್ಯಕ್ಷ ಎಚ್‌.ಎನ್‌.ಮಂಜುನಾಥ್‌ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯ ಉದ್ದೇಶಿಸಿ ಮಾತನಾಡಿದ ಅವರು, ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಕ್ರಿಕೆಟ್‌ ಪಂದ್ಯಾವಳಿಗೆ ಹೆಸರಾಗಿದ್ದ ಭಾರತದಲ್ಲಿ ಈಗ ಬಿಜೆಪಿ ನೇತೃತ್ವದ ಸರ್ಕಾರದಿಂದ ಇಂಡಿಯನ್‌ ಪೇಪರ್‌ ಲೀಕ್‌ ನಡೆದಿದೆ. ಇದು ದೇಶಕ್ಕೆ ಕೆಟ್ಟ ಹೆಸರು ತಂದಿದೆ. ಇದರ ವಿರುದ್ಧ ಸಾವಿರಾರು ಯುವ ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಮೇ 21ರಂದು ಪ್ರೀಡಂ ಪಾರ್ಕ್‌ನಲ್ಲಿ ಸಮಾವೇಶಗೊಂಡು ತನಿಖೆಗೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ನೀಟ್‌ ರದ್ದು ಕೈಬಿಡಲು ಆಗ್ರಹಿಸಿ ರಾಭವನ ಚಲೋ ನಡೆಸಲಾಗುವುದು ಎಂದರು.

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಗೆ ಬಿಜೆಪಿಯವರು ಅವರ ಚೇಲಾಗಳನ್ನೇ ಬಿಟ್ಟಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಿಗಳಲ್ಲಿ ಒಬ್ಬನಾದ ದಿನೇಶ್ ಬಿವಾಲ್‌ ರಾಜಸ್ಥಾನದ ಸಚಿವರೊಬ್ಬರ ಸ್ನೇಹಿತ ಎನ್ನಲಾಗುತ್ತಿದೆ. ಬೇಕಾದವರಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದು, ಲಕ್ಷಾಂತರ ರು.ಗಳಿಗೆ ಮಾರಾಟ ಮಾಡುವಂತಹ ದೊಡ್ಡ ಅಕ್ರಮ ನಡೆದಿರುವ ಆರೋಪಗಳು ಕೇಳಿಬಂದಿವೆ. ಇಡೀ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಪೇಪರ್ ಲೀಕ್ ಮಾಡಿದವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಆಗ್ರಹಿಸಿದರು.

ಯಾವ ರಾಜ್ಯದಲ್ಲಿ ಸೋರಿಕೆ ಆಗಿದೆ ಅಲ್ಲಿ ಪರೀಕ್ಷೆ ರದ್ದು ಮಾಡಲಿ. ಅದನ್ನು ಬಿಟ್ಟು ಇಡೀ ದೇಶದಲ್ಲಿ ನೀಟ್‌ ಪರೀಕ್ಷೆ ರದ್ದು ಮಾಡಿ 23 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ದ್ರೋಹ ಬಗೆಯಲಾಗಿದೆ. ಪರೀಕ್ಷೆ ವೇಳೆ ಕೆಲ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದರ ಬಗ್ಗೆ ಧನಿ ಎತ್ತಿದ ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿಯ ಸಂಸದರು, ಶಾಸಕರಿಗೆ ಲಕ್ಷಾಂತರ ಮಕ್ಕಳಿಗೆ ಆಗಿರುವ ಅನ್ಯಾಯ ಕಾಣುತ್ತಿಲ್ಲವೇ? ಅವರ ಗಂಟಲಲ್ಲಿ ಈಗೇಕೆ ದನಿ ಮೂಡುತ್ತಿಲ್ಲ. ಕೇಂದ್ರ ಶಿಕ್ಷಣ ಮಂತ್ರಿ ಧಮೇಂದ್ರ ಪ್ರಧಾನ್‌ ಉತ್ತರ ಕೊಡದೆ ಫಲಾಯನ ಮಾಡುತ್ತಿರುವುದೇಕೆ? ಎಂದು ತರಾಟೆಗೆ ತೆಗೆದುಕೊಂಡರು.


ಬಿಜೆಪಿ ಅವಧಿಯಲ್ಲೇ ಪೇಪರ್‌ ಲೀಕ್‌:

ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಂ ಭಂಡಾರಿ ಮಾತನಾಡಿ, ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಇದೇ ಮೊದಲಲ್ಲ. ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ನಡೆದಿರುವುದೆಲ್ಲಾ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲೇ. ಇದರಿಂದ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಮೋದಿ ಸರ್ಕಾರ ಏನು ನ್ಯಾಯ ಕೊಡಿಸಲು ಸಾಧ್ಯ ಎಂದು ಕೊಡಿಕಾರಿದರು. ಯುವ ಕಾಂಗ್ರೆಸ್‌ನ ವಿವಿಧ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.