ಸಾರಾಂಶ
ಸಂಡೂರು: ಸಂಡೂರು ಕ್ಷೇತ್ರದಲ್ಲಿ ಸೋಲು ನಿಶ್ಚಿತವೆಂದು ಅರಿತು ಸಿಎಂ ಸಿದ್ದರಾಮಯ್ಯ ಕಳೆದ ನಾಲ್ಕು ದಿನದಿಂದ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದಾರೆ. ಸಿದ್ದರಾಮಯ್ಯ ಚುನಾವಣೆ ಮುಗಿಯುವವರೆಗೂ ಇಲ್ಲೇ ಇದ್ದರೂ ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಗೆಲ್ಲಿಸಲು ತೀರ್ಮಾನಿಸಿದ್ದಾರೆ. ಜನಶಕ್ತಿಯ ಮುಂದೆ ಕಾಂಗ್ರೆಸ್ಸಿನವರ ದೊಂಬರಾಟ ನಡೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತಾಲೂಕಿನ ತಾರಾನಗರ, ಬನ್ನಿಹಟ್ಟಿ, ತಾಳೂರು, ಯು. ರಾಜಾಪುರ, ಡಿ. ಅಂತಾಪುರ ಹಾಗೂ ತೋರಣಗಲ್ಲು ಗ್ರಾಮಗಳಲ್ಲಿ ಶನಿವಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರ ಪರ ಪ್ರಚಾರ ಕಾರ್ಯ ಕೈಗೊಂಡು, ಮತಯಾಚಿಸಿ ಅವರು ಮಾತನಾಡಿದರು.ದೇಶದಲ್ಲಿ ಮೊದಲ ಬಾರಿಗೆ ಭಾಗ್ಯಲಕ್ಷ್ಮಿ ಯೋಜನೆ ತಂದು ಮಹಿಳೆಯರಿಗೆ ಲಕ್ಷಾಂತರ ಹಣ ದೊರೆಯುವಂತೆ ಮಾಡಿದ್ದು ಯಡಿಯೂರಪ್ಪ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಗೆ ನೀಡುತ್ತಿದ್ದ ₹೬ ಸಾವಿರಕ್ಕೆ ರಾಜ್ಯ ಸರ್ಕಾರದ ₹೪ ಸಾವಿರ ಸೇರಿಸಿ ಒಟ್ಟು ₹10 ಸಾವಿರ ಸಹಾಯಧನ ನೀಡಿದ್ದು ಯಡಿಯೂರಪ್ಪ. ಈಗಿನ ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ ₹4 ಸಾವಿರ ಸಹಾಯಧನ ನಿಲ್ಲಿಸಿ ಅನ್ಯಾಯ ಮಾಡಿದೆ. ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಶಾಸಕರಾದ ಭೈರತಿ ಬಸವರಾಜ, ಜನಾರ್ದನ ರೆಡ್ಡಿ, ಕರೆಮ್ಮ ನಾಯಕ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಮಾಜಿ ಸಂಸದ ಅನಿಲ್ ಲಾಡ್ ಬಂಗಾರು ಹನುಮಂತು ಅವರ ಪರವಾಗಿ ಪ್ರಚಾರ ನಡೆಸಿ, ಮತಯಾಚಿಸಿದರು.ಶಾಸಕ ಶೈಲೇಂದ್ರ ಬೆಲ್ದಾಳೆ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ದಿವಾಕರ, ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಹಲವು ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.