ಸಾರಾಂಶ
ಹಾರೋಹಳ್ಳಿ: ದುರ್ಗಾಷ್ಟಮಿ ದಿನ ಪ್ರಸನ್ನ ಪಾರ್ವತಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿಯ ನವದುರ್ಗಾ ಮಾತೆಯರ ಪ್ರತಿಷ್ಠಾಪನೆ ಶ್ರದ್ಧಾ ಭಕ್ತಿಯಿಂದ ಆರಂಭವಾಯಿತು. ಪಟ್ಟಣದ ಅರುಣಾಚಲೇಶ್ವರ ದೇವಾಲಯ ಸಮಿತಿ ಮತ್ತು ಚಾಮುಂಡೇಶ್ವರಿ ಅಮ್ಮನವರ ದಸರಾ ಮಹೋತ್ಸವ ಸಮಿತಿಯಿಂದ ನಡೆಯುವ 8ನೇ ವರ್ಷದ ದಸರಾ ಮಹೋತ್ಸವ ಅಂಗವಾಗಿ ಗುರುವಾರ ಮೊದಲನೆಯ ದಿನದಂದು ದೇವಿಯ ಶೈಲಪುತ್ರಿ ರೂಪವವನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಶೈಲಪುತ್ರಿ ದೇವಿಯನ್ನು ಶುಭ ಮುಹೂರ್ತದಲ್ಲಿ ಪ್ರತಿಷ್ಠಾಪಿಸಿ ಆರಾಧನೆ ಮತ್ತು ಭಜನೆ ನಡೆಸಲಾಯಿತು. ಶುಕ್ರವಾರ 2ನೇ ದಿನ ಬ್ರಹ್ಮಚಾರಿಣಿ ಮಾತೆ ದೇವಿಯನ್ನು ಬೆಳಿಗ್ಗೆ 7.30 ರಿಂದಲೇ ಪ್ರತಿಷ್ಠಾಪಿಸಿ ಪೂಜೆ, ಪುನಸ್ಕಾರಗಳನ್ನು ನೆರವೇರಿಸಲಾಯಿತು. ನಂತರ ತೀರ್ಥ ಪ್ರಸಾದಗಳನ್ನು ವಿನಯೋಗಿಸಲಾಯಿತು.ಅರುಣಾಚಲೇಶ್ವರ ದೇವಾಲಯದ ಲಲಿತಾ ಮಂಡಳಿಯ ಅಧ್ಯಕ್ಷೆ ಕಮಲಮ್ಮ ಮಾತನಾಡಿ, ಹಾರೋಹಳ್ಳಿಯಲ್ಲಿ ಸಮಿತಿಯಿಂದ ಚಾಮುಂಡೇಶ್ವರಿ ಅಮ್ಮನವರ ಅದ್ಧೂರಿ ದಸರಾ ಮಹೋತ್ಸವ ವೈಭವಯುತವಾಗಿ ನಡೆಸಲಾಗುತ್ತಿದೆ. ನವರಾತ್ರಿ ಅಂಗವಾಗಿ 9 ದಿನಗಳ ಕಾಲ ನವದುರ್ಗೆಯ 9 ಅವತಾರಗಳಿಗೆ ನಿತ್ಯ ಪೂಜೆ ಪುನಸ್ಕಾರ ನಡೆಸಲಾಗುವುದು ಎಂದು ತಿಳಿಸಿದರು.
ದೇಶದಲ್ಲೆಡೆ ಸಾಂಪ್ರದಾಯಿಕವಾಗಿ ನವರಾತ್ರಿಯ ಉತ್ಸವವನ್ನು ಆಚರಿಸುವುದು ವಾಡಿಕೆಯಾಗಿದೆ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಲು ದೇವಿ 9 ಅವತಾರ ತಾಳಿ ನಾಡನ್ನು ರಕ್ಷಿಸಿದ್ದಾಳೆ. ಆದ್ದರಿಂದ ನಿರ್ಮಲ ಮನಸ್ಸಿನಿಂದ ಪೂಜಿಸಿ, ಭಕ್ತಿಯಿಂದ ದೇವಿಯ ಭಜನೆ, ಧ್ಯಾನ ಮಾಡಿದರೆ, ಸಕಲ ಸೌಭಾಗ್ಯ ದೊರೆಯುತ್ತದೆ ಎನ್ನುವ ಪ್ರತೀತಿಯಂತೆ ದೇವಾಲಯದಲ್ಲಿ ನವದುರ್ಗೆಯರ ಪೂಜೆ ನಿತ್ಯ ವಿಶೇಷವಾಗಿ ನಡೆಯುತ್ತಿದೆ ಎಂದರು.ಮಹಿಳಾ ಸದಸ್ಯರಾದ ಪದ್ಮಮ್ಮ, ಗಾಯಿತ್ರಿ, ಅನುಸೂಯ, ಪ್ರೇಮ, ರತ್ನ, ಶಶಿಕಲಾ ಹಾಜರಿದ್ದರು.