ಚಂದ್ರಪ್ಪನವರ ಬಗ್ಗೆ ಪಿತೂರಿ ನಡೆಸಿದರೆ ಪರಿಣಾಮ ನೆಟ್ಟಗಿರಲ್ಲ

| Published : Dec 07 2024, 12:31 AM IST

ಸಾರಾಂಶ

ಚಿತ್ರದುರ್ಗ : ಅಭಿವೃದ್ಧಿಯ ಹರಿಕಾರ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪನವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಹೇಳುವುದಕ್ಕೆ ಜಯಸಿಂಹ ಖಾಟ್ರೋತ್ ಹಾಗೂ ಅವರ ಗುಂಪಿಗೆ ನೈತಿತಕೆಯಿಲ್ಲ. ಗುಂಪುಗಾರಿಕೆ ಬಿಟ್ಟು ತೆಪ್ಪಗಿದ್ದರೆ ಸರಿ. ಕಾರ್ಯಕರ್ತರು ರೊಚ್ಚಿಗೆದ್ದರೆ ಉಳಿಗಾಲವಿಲ್ಲ ಎಂದು ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಬಿ.ಎಂ.ಸಿದ್ದೇಶ್ ಎಚ್ಚರಿಸಿದರು.

ಚಿತ್ರದುರ್ಗ : ಅಭಿವೃದ್ಧಿಯ ಹರಿಕಾರ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪನವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಹೇಳುವುದಕ್ಕೆ ಜಯಸಿಂಹ ಖಾಟ್ರೋತ್ ಹಾಗೂ ಅವರ ಗುಂಪಿಗೆ ನೈತಿತಕೆಯಿಲ್ಲ. ಗುಂಪುಗಾರಿಕೆ ಬಿಟ್ಟು ತೆಪ್ಪಗಿದ್ದರೆ ಸರಿ. ಕಾರ್ಯಕರ್ತರು ರೊಚ್ಚಿಗೆದ್ದರೆ ಉಳಿಗಾಲವಿಲ್ಲ ಎಂದು ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಬಿ.ಎಂ.ಸಿದ್ದೇಶ್ ಎಚ್ಚರಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಎಂ.ಚಂದ್ರಪ್ಪನವರಿಂದ ಭ್ರಷ್ಟಾಚಾರವಾಗಿದೆ ಎಂದು ಖಾಟ್ರೋತ್ ಅಪಪ್ರಚಾರದಲ್ಲಿ ತೊಡಗಿರುವುದರಲ್ಲಿ ಅರ್ಥವಿಲ್ಲ. 2018ರಲ್ಲಿ ಎಂ.ಚಂದ್ರಪ್ಪನವರಿಗೆ ಟಿಕೆಟ್ ಕೊಟ್ಟಾಗ ಹನುಮಕ್ಕನನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ಬೀದಿಗೆ ತಂದರು. 2023 ರಲ್ಲಿಯೂ ಎಂ.ಚಂದ್ರಪ್ಪನವರ ವಿರುದ್ಧ ಡಾ.ಜಯಸಿಂಹರನ್ನು ಹುಡುಕಿ ವಿಧಾನಸಭೆ ಚುನಾವಣೆಗೆ ನಿಲ್ಲಿಸಿ ಬೀದಿಗೆ ತಂದರು. ಮೂಲ ಬಿಜೆಪಿ ಎಂದು ಹೇಳಿಕೊಳ್ಳುವ ಯೋಗ್ಯತೆ ಖಾಟ್ರೋತ್‍ಗೆ ಇಲ್ಲ ಎಂದರು.

ನಾಲ್ಕು ವಿಧಾನಸಭೆ ಚುನಾವಣೆಯಲ್ಲಿಯೂ ಎಂ.ಚಂದ್ರಪ್ಪನವರ ವಿರುದ್ಧ ಪಿತೂರಿ ನಡೆಸಿದ ಖಾಟ್ರೋತ್ ಯಾವ ಪಕ್ಷದಲ್ಲಿದ್ದಾರೆನ್ನುವುದೇ ಗೊತ್ತಿಲ್ಲ. ಜೈಲಿಗೆ ಹೋಗಿ ಬಂದು ರೌಡಿ ಶೀಟರ್ ಎನಿಸಿಕೊಂಡಿರುವ ಇವರು, ನಮ್ಮ ಶಾಸಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ನಾವುಗಳು ಸಹಿಸುವುದಿಲ್ಲ. ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಡಾ.ಎಂ.ಚಂದ್ರಪ್ಪನವರು ಮೊದಲಿನಿಂದಲೂ ಬಿ.ಎಸ್.ಯಡಿಯೂರಪ್ಪನವರ ಪರವಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅವರ ಪುತ್ರ ಎಂ.ಸಿ.ರಘುಚಂದನ್‍ಗೆ ಬಿಜೆಪಿಯಿಂದ ಟಿಕೆಟ್ ಸಿಗಲಿಲ್ಲವೆಂದು ಮುನಿಸಿಕೊಂಡಿದ್ದು ನಿಜ. ಯಾರಿಗಾದರೂ ಅಂತಹ ಸಂದರ್ಭದಲ್ಲಿ ಮನಸ್ತಾಪವಿರುತ್ತದೆ. ಈಗ ಎಲ್ಲವೂ ಸರಿ ಹೋಗಿದೆ. ಹೊಳಲ್ಕೆರೆ ಕ್ಷೇತ್ರದಲ್ಲಿ ಕೆರೆ ಕಟ್ಟೆ, ಚೆಕ್‍ಡ್ಯಾಂ, ಶಾಲಾ-ಕಾಲೇಜು, ಉತ್ತಮ ಗುಣಮಟ್ಟದ ರಸ್ತೆ, ಹೈಟೆಕ್ ಆಸ್ಪತ್ರೆಗಳಾಗಿವೆ. ಇಂತಹ ಕೆಲಸ ಆಗಿಲ್ಲವೆಂದು ಯಾರೂ ಟೀಕಿಸುವಂತಿಲ್ಲ. ಜಯಸಿಂಹ ಖಾಟ್ರೋತ್ ಪಕ್ಷೇತರರಿಂದ ಹಿಡಿದು ಎಲ್ಲಾ ಪಕ್ಷ ಸುತ್ತಾಡಿದ್ದಾರೆ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಆರ್.ಅಶೋಕ್, ಹೊಳಲ್ಕೆರೆ ತಾಲೂಕು ಪಂಚಾಯಿತಿಯ ಶಿವು, ಎಪಿಎಂಸಿ ಮಾಜಿ ಅಧ್ಯಕ್ಷ ಅಂಕಳಪ್ಪ, ಪ್ರವೀಣ್, ಶಂಕರ ನಾಯ್ಕ, ರುದ್ರೇಶ್, ಭದ್ರಾನಾಯ್ಕ, ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಗಿರೀಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಯಾನಾಯ್ಕ ಮುಂತಾದವರು ಹಾಜರಿದ್ದರು.