ತಾಲೂಕು ಕಚೇರಿ ಆವರಣದಲ್ಲಿ ತಹಸೀಲ್ದಾರ್ ಶರತ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂವಿಧಾನ ದಿನಾಚರಣೆ ಪೂರ್ವಭಾವಿಯ ಸಭೆಯಲ್ಲಿ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದ ಘಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಾಗಡಿ
ನ. 26ರಂದು ಬುಧವಾರ ಸಂವಿಧಾನ ದಿನಾಚರಣೆ ಆಚರಿಸಲು 24 ರಂದು ತುರ್ತು ಪೂರ್ವಭಾವಿ ಸಭೆ ಕರೆದಿದ್ದು, ಇಲ್ಲಿ ಯಾವುದೇ ಅಧಿಕಾರಿಗಳು ಭಾಗವಹಿಸಿಲ್ಲ. ಸಂವಿಧಾನ ದಿನಾಚರಣೆಯನ್ನು ಕಾಟಾಚಾರಕ್ಕೆ ತಾಲೂಕು ಆಡಳಿತ ಮಾಡುತ್ತಿದೆ ಎಂದು ದಲಿತ ಮುಖಂಡರು ತಹಸೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಹಸೀಲ್ದಾರ್ ಶರತ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂವಿಧಾನ ದಿನಾಚರಣೆ ಪೂರ್ವಭಾವಿಯ ಸಭೆಯಲ್ಲಿ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದ ಘಟನೆ ನಡೆಯಿತು. ಕಾಟಾಚಾರಕ್ಕಾಗಿ ಸಂವಿಧಾನ ದಿನಾಚರಣೆ ಮಾಡುವುದು ಬೇಡ. ಅಂಬೇಡ್ಕರ್ ಅವರಿಗೆ ದಲಿತ ನಾಯಕರಿಗೆ, ಸಂವಿಧಾನಕ್ಕೆ ಅಗೌರವ ತರುವ ಕೆಲಸವನ್ನು ತಾಲೂಕು ಆಡಳಿತ ಮಾಡುತ್ತಿದೆ. ಒಂದು ದಿನ ಇರುವಾಗ ಪೂರ್ವಭಾವಿ ಸಭೆ ಕರೆದರೆ ತಯಾರಿ ಮಾಡಿಕೊಳ್ಳುವುದು ಹೇಗೆ? ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಮಾಡಬೇಕೆಂದು ಹೇಳುತ್ತೀರಾ ಒಂದು ದಿನದಲ್ಲಿ ಸಿದ್ಧತೆ ಹೇಗೆ ಮಾಡಿಕೊಳ್ಳಲು ಸಾಧ್ಯ. ಈ ರೀತಿ ಕಾಟಾಚಾರವಾಗಿ ಸಭೆ ಮಾಡುವ ಬದಲು ದಲಿತ ಮುಖಂಡರೇ ಸೇರಿ ರಸ್ತೆಯಲ್ಲೇ ಸಂವಿಧಾನ ದಿನಾಚರಣೆಯನ್ನು ಮಾಡುವ ಮೂಲಕ ತಾಲೂಕು ಆಡಳಿತ ವಿರುದ್ಧ ಹೋರಾಟ ಕೆಲಸ ಮಾಡುತ್ತೇವೆ.ಇದು ಸರ್ಕಾರಕ್ಕೆ ತಲುಪವ ಕೆಲಸವಾಗಲಿ ಈ ಪೂರ್ವಭಾವಿ ಸಭೆಗೆ ಯಾವ ಅಧಿಕಾರಿಗಳು ಸರಿಯಾಗಿ ಬಂದಿಲ್ಲ. ಅವರ ವಿರುದ್ಧ ಯಾವುದೇ ಕ್ರಮ ಆಗುವುದಿಲ್ಲ. ಈ ರೀತಿ ತಹಸೀಲ್ದಾರ್ ಅವರು ಮಾಡುತ್ತಿರುವುದು ಸರಿಯಲ್ಲ. ಈ ಕಾರ್ಯಕ್ರಮ ಬಹಿಷ್ಕರಿಸುತ್ತೇವೆ ಎಂದು ದಲಿತ ಮುಖಂಡ, ತಾಪಂ ಮಾಜಿ ಅಧ್ಯಕ್ಷ ಚಂದುರಾಯನಹಳ್ಳಿ ಕೃಷ್ಣ ಹಾಗೂ ಮಾಡಬಾಳ್ ಜಯರಾಂ ಆಕ್ರೋಶ ವ್ಯಕ್ತಪಡಿಸಿದರು.
ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಸಸ್ಪೆಂಡ್ ಮಾಡುವಂತೆ ಪತ್ರ ಬರೆಯಲಾಗುತ್ತದೆ ನಮಗೂ ಕೂಡ ಆದೇಶ ತಡವಾಗಿ ಬಂದಿರುವುದರಿಂದ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಆಚರಿಸೋಣ ಎಂದು ತಹಸೀಲ್ದಾರ್ ಹಾಗೂ ದಲಿತ ಮುಖಂಡರಾದ ಮಂಜೇಶ್ ಕಲ್ಕೆರೆ ಶಿವಣ್ಣ ನರಸಿಂಹಮೂರ್ತಿ ಮನವಿ ಹಿನ್ನೆಲೆಯಲ್ಲಿ ಸಂವಿಧಾನ ದಿನಾಚರಣೆ ಆಚರಿಸಲು ತೀರ್ಮಾನ ಮಾಡಲಾಯಿತು.ತಹಸೀಲ್ದಾರ್ ಶರತ್ ಕುಮಾರ್ ಮಾತನಾಡಿ, ನ. 26ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಕಲ್ಯಾಗೇಟ್ ವೃತ್ತದಿಂದ ಪುರಸಭೆ ಅಂಬೇಡ್ಕರ್ ಪ್ರತಿಮೆ ವರೆಗೂ ಜಾಥಾ ಮೆರವಣಿಗೆ ಮಾಡಿಸಿ ನಂತರ ಡಾ.ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ಪ್ರಬಂಧ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಗಣ್ಯರಿಂದ ಸಂವಿಧಾನ ಬಗ್ಗೆ ಸಂದೇಶ ಕೊಡುವ ಕೆಲಸ ಮಾಡಲಾಗುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಕಲ್ಕೆರೆ ಶಿವಣ್ಣ, ದಲಿತ ಮುಖಂಡರಾದ ನರಸಿಂಹಮೂರ್ತಿ, ಕುದೂರು ಮಂಜೇಶ್, ಮಾಡಬಾಳ್ ಜಯರಾಂ, ಕೃಷ್ಣ, ಜೀವಿಕ ಗಂಗಹನುಮಯ್ಯ, ತಾ.ಪಂ. ಇಒ ಜೈಪಾಲ್ ಸೇರಿದಂತೆ ಇತರರು ಭಾಗವಹಿಸಿದರು.