ರಚನಾತ್ಮಕ ಜೀವನಕ್ಕೆ ಸಂವಿಧಾನ ಮುಖ್ಯ: ಡಾ. ಹೊನ್ನೂರಾಲಿ

| Published : Mar 09 2024, 01:37 AM IST

ರಚನಾತ್ಮಕ ಜೀವನಕ್ಕೆ ಸಂವಿಧಾನ ಮುಖ್ಯ: ಡಾ. ಹೊನ್ನೂರಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ಜಾರಿಗೆ ಬಂದು ಏಳು ದಶಕಗಳು ಕಳೆದರೂ ಭಾರತೀಯರಿಗೆ ಸಂವಿಧಾನ ಪ್ರಜ್ಞೆಯ ಭಾಗವಾಗಿಲ್ಲದಿರುವುದು ಅತ್ಯಂತ ಕಳವಳಕಾರಿ ಸಂಗತಿ.

ಬಳ್ಳಾರಿ: ನಾಗರಿಕರ ಹಕ್ಕುಗಳು, ಕರ್ತವ್ಯಗಳು ಸರ್ಕಾರದ ರಚನೆ ಮತ್ತು ಜನಪ್ರತಿನಿಧಿಗಳ ಕಾರ್ಯಕ್ಷಮತೆ ಅರ್ಥ ಮಾಡಿಕೊಳ್ಳಲು ಸಂವಿಧಾನದ ಜ್ಞಾನ ಮುಖ್ಯ ಎಂದು ಸರಳಾದೇವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಹೊನ್ನೂರಾಲಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನ ಜಾರಿಗೆ ಬಂದು ಏಳು ದಶಕಗಳು ಕಳೆದರೂ ಭಾರತೀಯರಿಗೆ ಸಂವಿಧಾನ ಪ್ರಜ್ಞೆಯ ಭಾಗವಾಗಿಲ್ಲದಿರುವುದು ಅತ್ಯಂತ ಕಳವಳಕಾರಿ ಸಂಗತಿ. ಸಂವಿಧಾನದ ಆಶಯಗಳು, ಧ್ಯೇಯೋದ್ದೇಶಗಳು ಪ್ರತಿಯೊಬ್ಬ ನಾಗರಿಕನ ಪ್ರಜ್ಞೆಯ ಭಾಗವಾಗದಿದ್ದಲ್ಲಿ ನಮ್ಮ ಹಿತಾಸಕ್ತಿಗೆ ವಿರುದ್ಧವಾದ ಸರ್ಕಾರಗಳು ನಮ್ಮನ್ನು ಆಳುತ್ತವೆ ಎಂದು ಮಾರ್ಮಿಕವಾಗಿ ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಿಲಯಪಾಲಕರಾದ ಅರುಣಕುಮಾರ, ವಿದ್ಯಾರ್ಥಿಗಳಿಗೆ ಸಂವಿಧಾನದ ಸ್ವರೂಪ ಮತ್ತು ಆಶಯಗಳನ್ನು ಮನದಟ್ಟು ಮಾಡಿ ಕೊಡುವ ಒತ್ತಾಸೆ ಈ ಕಾರ್ಯಕ್ರಮದ ಹಿಂದೆ ಇದೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ದಸ್ತಗೀರಸಾಬ್ ದಿನ್ನಿ ಸಂವಿಧಾನ ನಮಗೆ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಮತದಾನ ಮುಂತಾದ ಹಕ್ಕುಗಳನ್ನು ನೀಡಿದೆ. ಜಾತ್ಯತೀತ ಮನೋಭಾವವನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸಾಗಬೇಕೆಂದು ಅಭಿಪ್ರಾಯಪಟ್ಟರು.

ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ. ದುರುಗಪ್ಪ, ಅತ್ಯಂತ ಮಹತ್ವದ ನಿಲುವುಗಳನ್ನು ಹೊಂದಿರುವ ಸಂವಿಧಾನವನ್ನು ಗೌರವಿಸುವ, ಅರಿತುಕೊಳ್ಳುವ ಕೆಲಸ ಇಂದು ಜರೂರಾಗಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್.ಕೆ. ಮಂಜುನಾಥ ರೆಡ್ಡಿ ಸಂವಿಧಾನದ ಪೀಠಿಕೆಯು ಅದರ ಕನ್ನಡಿಯಂತಿದೆ. ಸಂವಿಧಾನವನ್ನು ಸರಿಯಾದ ನೆಲೆಯಲ್ಲಿ ಗ್ರಹಿಸಿಕೊಂಡು ಬದುಕಿದಾಗ ಪ್ರಬುದ್ಧ ಭಾರತವನ್ನು ಕಾಣಲು ಸಾಧ್ಯ ಎಂದರು.

ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಶಶಿಕಾಂತ ಬಿಲ್ಲವ, ಕೆ. ಬಸಪ್ಪ, ಪ್ರವೀಣಕುಮಾರ್, ಲಿಂಗಪ್ಪ, ರಾಮಸ್ವಾಮಿ, ಡಾ. ಹೇಮೇಗೌಡ, ಡಾ. ಸುಜಾತ, ರಫಿ, ಶ್ರೀನಿವಾಸ ಮತ್ತಿತರರಿದ್ದರು.