ಸಂವಿಧಾನ ಬರೀ ಪುಸ್ತಕ ಅಲ್ಲ; ಜೀವನ ವಿಧಾನ: ನಟರಾಜ್‌

| Published : Apr 15 2024, 01:17 AM IST

ಸಾರಾಂಶ

ಸಂವಿಧಾನ ಬರೀ ಪುಸ್ತಕ ಅಲ್ಲ, ಜೀವನ ವಿಧಾನ. ಸಾಂಸ್ಕೃತಿಕ ರಾಜಕಾರಣ ಸರಿಯಾಗಿ ನಿಭಾಯಿಸುವುದೇ ಅಧಿಕಾರ, ನಾವುಗಳು ಅಧೀನದಿಂದ ಬಿಡುಗಡೆ ಆಗಬೇಕು ಎಂದು ಚಿಂತಕ ನಟರಾಜ್ ಬೂದಾಳ್ ಕರೆ ನೀಡಿದರು.

- ತೇಗೂರಿನ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ । ಪುತ್ಥಳಿ ಅನಾವರಣ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಂವಿಧಾನ ಬರೀ ಪುಸ್ತಕ ಅಲ್ಲ, ಜೀವನ ವಿಧಾನ. ಸಾಂಸ್ಕೃತಿಕ ರಾಜಕಾರಣ ಸರಿಯಾಗಿ ನಿಭಾಯಿಸುವುದೇ ಅಧಿಕಾರ, ನಾವುಗಳು ಅಧೀನದಿಂದ ಬಿಡುಗಡೆ ಆಗಬೇಕು ಎಂದು ಚಿಂತಕ ನಟರಾಜ್ ಬೂದಾಳ್ ಕರೆ ನೀಡಿದರು.ನಗರದ ಹೊರ ವಲಯದ ತೇಗೂರು ಬಳಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಸಂಸ್ಥೆ, ಭಾರತೀಯ ಬೌದ್ಧ ಮಹಾ ಸಭಾ, ಭೀಮ್ ಆರ್ಮಿ ಹಾಗೂ ವಿವಿಧ ದಲಿತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ 133ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ರಾಜಕೀಯ ಸಂವಿಧಾನ ನೀಡಿದ್ದರೆ, ಬುದ್ಧ ಅವರು ಬದುಕಿಗೆ ಬೇಕಾದ ಸಂವಿಧಾನ ನೀಡಿದ್ದಾರೆ. ನಿನ್ನ ಬದುಕಿಗೆ ನೀನೇ ಬೆಳಕು ಎಂದಿದ್ದಾರೆ ಎಂದು ಪ್ರತಿಪಾದಿಸಿದರು.ಭಾಷೆಯಲ್ಲಿ ಕಟ್ಟಿಕೊಂಡ ಸುಳ್ಳು, ದೇಶದ 130 ಕೋಟಿ ಜನ ಅದನ್ನು ಅನುಸರಿಸಿ ನಿಜ ಮಾಡಲು ಪ್ರತಿ ಕ್ಷಣ ಪ್ರಯತ್ನಿಸು ತ್ತಾರೆ. ಪ್ರತಿ ನಡೆ ನುಡಿ ಪ್ರತಿಕ್ರಿಯೆ ಒಳಗಿ ಪ್ರಜ್ಞೆಯನ್ನು ನೋಡಬೇಕು. ಓದುವುದರಿಂದ ಕೇಳುವುದರಿಂದ ಭಕ್ತಿಯಿಂದ ನಮಸ್ಕಾರ ಮಾಡುವುದರಿಂದ ಏನೂ ಪ್ರಯೋಜನ ಇಲ್ಲ. ಅದನ್ನು ಅನ್ವಯಿಸಿಕೊಂಡರೆ ಮಾತ್ರ ಬುದ್ಧ, ಅಂಬೇಡ್ಕರ್ ನಮ್ಮವರಾಗುತ್ತಾರೆ ಎಂದು ಹೇಳಿದರು. ನಮ್ಮಯೊಳಗೆ ಇರುವ ಎಚ್ಚರದ ಪ್ರಜ್ಞೆಯೇ ಬುದ್ಧ, ತಮ್ಮ ವಿವೇಕವನ್ನು ಯಾರ್ಯಾರು ಎಚ್ಚರಿಸಿಕೊಂಡಿದ್ದಾರೋ ಅವರು ಬುದ್ಧ. ಎಲ್ಲರ ಜತೆಗೆ ಬಾಳಬೇಕು ಎಂದರು.ನಿವೃತ್ತ ಡಿಡಿಪಿಐ ರುದ್ರಸ್ವಾಮಿ ಮಾತನಾಡಿ, ಸಾಂಸ್ಕೃತಿಕ ಗುಲಾಮಗಿರಿಯಿಂದ ನಾವುಗಳು ಹೊರಗೆ ಬರಬೇಕು, ನಮ್ಮಲ್ಲಿ ರುವ ಆಸ್ಪೃಶ್ಯತೆ ಕಳಂಕ ಇನ್ನೂ ಬಿಡುಗಡೆಯಾಗಿಲ್ಲ. ಇದನ್ನು ಹೋಗಲಾಡಿಸುವ ಕಾಳಜಿ ಹಿಂದು ಸಂಘಟನೆ ಗಳಿಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ನಮಗೆ ಮತದಾನದ ಹಕ್ಕಿದೆ. ಆದರೆ, ಧಾರ್ಮಿಕ ಸ್ಥಾನಮಾನ ಸಿಕ್ಕಿಲ್ಲ. ಶೂದ್ರರಿಗೆ, ಮಹಿಳೆಯರಿಗೆ ಸಮಾನತೆ ಸಿಗ ಬೇಕೆಂದು 12ನೇ ಶತಮಾನದಲ್ಲಿ ಬಸವಣ್ಣನವರು ಕರೆ ನೀಡಿದರು. ಆಧ್ಯಾತ್ಮಿಕ ಸ್ವಾತಂತ್ರ್ಯ ಸಿಗಬೇಕೆಂಬುದು ಅವರ ಆಶಯವಾಗಿತ್ತು ಎಂದರು.ರಾಜಕೀಯ ಕ್ಷೇತ್ರದಲ್ಲಿ ಶಾಸಕರು, ಸಚಿವರು, ಆಡಳಿತ ವ್ಯವಸ್ಥೆಯಲ್ಲಿ ಹಿರಿಯ ಅಧಿಕಾರಿಗಳು ಇದ್ದಾರೆ. ಅವರು ದಮನಿತರ ಏಳಿಗೆಗಾಗಿ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ.ಈ ದೇಶದಲ್ಲಿ ಮಾಯಾವಿ ರಾಜಕಾರಣ ನಡೆಯುತ್ತಿದೆ. ಜನರ ಸ್ವಾಭಿಮಾನ ಕಾಪಾಡುವುದು ನಮ್ಮ ಸಾಮಾಜಿಕ ಹೊಣೆಗಾರಿಕೆ ಆಗಬೇಕು ಎಂದು ಕರೆ ನೀಡಿದರು.ಸಂವಿಧಾನ ಅಪಾಯದಲ್ಲಿದೆ. ಸಂಘಟನೆ ಶಕ್ತಿ ಕುಗ್ಗಿಸದೆ ನಾವುಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕು. ನಮ್ಮ ಹಕ್ಕುಗಳ ರಕ್ಷಣೆಗೆ ಪ್ರಯಾಣ ಮುಂದುವರೆಸಬೇಕು. ಇಲ್ಲದೆ ಹೋದರೆ ನಮ್ಮ ಹಕ್ಕುಗಳನ್ನು ಅಪಹರಣ ಮಾಡಬಹುದು. ಸಂವಿಧಾನಕ್ಕೆ ದಕ್ಕೆ ಆಗುತ್ತಿದೆ ಎಂಬುದು ನಿಜ. ವಿವೇಚನೆಯಿಂದ ಮತದಾನ ಮಾಡಬೇಕು ಎಂದು ಕರೆ ನೀಡಿದರು.ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಸಂಸ್ಥೆ ಅಧ್ಯಕ್ಷ ಬಿ.ಬಿ. ನಿಂಗಯ್ಯ ಮಾತನಾಡಿ, ಕಾರ್ಯಕ್ರಮ ನಡೆಸಲಾಗುತ್ತಿರುವ ಜಾಗವನ್ನು ನಮ್ಮ ಸಂಸ್ಥೆಗೆ ನೀಡುವಂತೆ ಹಲವು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಜಾಗವನ್ನು ನಮ್ಮ ಸಂಸ್ಥೆಗೆ ಮಂಜೂರು ಮಾಡಲೇಬೇಕು ಎಂದು ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಹಾಗೂ ಬುದ್ಧ ಅವರ ಪ್ರತಿಮೆ ಅನಾವರಣ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಅನಂತ್ ಮೂಡಿಗೆರೆ, ಮರ್ಲೆ ಅಣ್ಣಯ್ಯ, ಅಂಗಡಿ ಚಂದ್ರು, ಪತ್ರಕರ್ತ ಚಂದ್ರಯ್ಯ, ವಕೀಲ ಅನಿಲ್‌ಕುಮಾರ್‌, ದಂಟರಮಕ್ಕಿ ಶ್ರೀನಿವಾಸ್, ವಸಂತಕುಮಾರ್, ಹೊನ್ನೇಶ್, ರಮೇಶ್, ಕೂದುವಳ್ಳಿ ಮಂಜು, ಹೊನ್ನಪ್ಪ, ನವರಾಜ್, ರಘು, ಪ್ರದೀಪ್, ಪ್ರಕಾಶ್, ಕಾಳಯ್ಯ, ಹುಣಸೇಮಕ್ಕಿ ಲಕ್ಷ್ಮಣ್, ಪರಮೇಶ್, ದೊಡ್ಡಯ್ಯ ಇದ್ದರು. ಕಾರ್ಯಕ್ರಮದ ಅಂಗವಾಗಿ ಚಿಕ್ಕಮಗಳೂರಿನ ತೊಗರಿಹಂಕಲ್‌ ವೃತ್ತದಿಂದ ತೇಗೂರುವರೆಗೆ ಬೈಕ್‌ ಜಾಥಾ ನಡೆಯಿತು.

14 ಕೆಸಿಕೆಎಂ 1ಚಿಕ್ಕಮಗಳೂರಿನ ತೇಗೂರು ಬಳಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಸಂಸ್ಥೆ ಆವರಣದಲ್ಲಿ ಭಾನುವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ 133ನೇ ಜನ್ಮ ದಿನಾಚರಣೆಯನ್ನು ಚಿಂತಕ ನಟರಾಜ್‌ ಬೂದಾಳ್ ಉದ್ಘಾಟಿಸಿದರು. ಬಿ.ಬಿ. ನಿಂಗಯ್ಯ, ರುದ್ರಸ್ವಾಮಿ, ಅನಂತ್‌ ಇದ್ದರು.