77ನೇ ಗಣರಾಜ್ಯೋತ್ಸವ ಆಚರಣೆ ಬಲಿಷ್ಠ ಭವ್ಯ ಭಾರತವನ್ನು ಸತ್ಯದ, ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ದೇಶವನ್ನು ಮುನ್ನಡೆಸುವ ಬೃಹತ್ ದಿಕ್ಸೂಚಿಯೇ ನಮ್ಮ ಹೆಮ್ಮೆಯ ಭಾರತೀಯ ಸಂವಿಧಾನವೆಂದು ನಗರದ ಜನನಿ ಆಸ್ಪತ್ರೆಯ ಖ್ಯಾತ ಸ್ತ್ರೀರೋಗ ತಜ್ಞ ಡಾ.ಹಂಪನಗೌಡ ಪಾಟೀಲ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ವಿಜಯಪುರ

77ನೇ ಗಣರಾಜ್ಯೋತ್ಸವ ಆಚರಣೆ ಬಲಿಷ್ಠ ಭವ್ಯ ಭಾರತವನ್ನು ಸತ್ಯದ, ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ದೇಶವನ್ನು ಮುನ್ನಡೆಸುವ ಬೃಹತ್ ದಿಕ್ಸೂಚಿಯೇ ನಮ್ಮ ಹೆಮ್ಮೆಯ ಭಾರತೀಯ ಸಂವಿಧಾನವೆಂದು ನಗರದ ಜನನಿ ಆಸ್ಪತ್ರೆಯ ಖ್ಯಾತ ಸ್ತ್ರೀರೋಗ ತಜ್ಞ ಡಾ.ಹಂಪನಗೌಡ ಪಾಟೀಲ ಅಭಿಪ್ರಾಯಪಟ್ಟರು.

ನಗರದ ವಜ್ರಹನುಮಾನ ನಗರದಲ್ಲಿರುವ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಮಾನತೆ, ಸಹೋದರತೆ, ಸಹಬಾಳ್ವೆಯಿಂದ ನಾವೆಲ್ಲರೂ ಕೂಡಿ ಬಾಳಬೇಕೆಂಬುದು ನಮ್ಮ ಸಂವಿಧಾನದ ಪ್ರಮುಖ ಆಶಯವಾಗಿದೆ. ನಾವು ಈ ಗಣರಾಜ್ಯೋತ್ಸವ ಆಚರಿಸುತ್ತಿರುವಾಗ, ಸಂವಿಧಾನವನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ಮಹತ್ವವನ್ನು ನೆನಪಿಟ್ಟುಕೊಳ್ಳುವುದು ಸಹ ಮುಖ್ಯವಾಗಿದೆ ಎಂದರು.

ಆಡಳಿತ ಮಂಡಳಿ ಸದಸ್ಯ ಎಮ್.ಪಿ.ಜೋಸೆಫ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನವು ಭಾರತದ ಆಡಳಿತ ಯಂತ್ರದ ಆತ್ಮವಿದ್ದಂತೆ. ಆದ್ದರಿಂದ ಸಂವಿಧಾನ ನೀಡಿರುವ ಸಲಹೆ ಸೂಚನೆ ಮತ್ತು ಮಾರ್ಗದರ್ಶನದಡಿ ದೇಶದ ಪ್ರಗತಿ ನಡೆಯಬೇಕು. ಜಗತ್ತು ಗೌರವಿಸುವುದು ಶಕ್ತಿಯನ್ನು, ದುರ್ಬಲತೆಯನ್ನು ಅಲ್ಲ. ಆದ್ದರಿಂದ ವಿದ್ಯಾರ್ಥಿಗಳು ಆರೋಗ್ಯಪೂರ್ಣ ಸ್ವಸ್ಥ ಬದುಕನ್ನು ನಿಯಮಿತವಾಗಿ ವ್ಯಾಯಾಮ, ಗುಣಮಟ್ಟದ ಆಹಾರ ಸೇವನೆಯಿಂದ ಪರಿಪೂರ್ಣವಾದ ಶಕ್ತಿಯುತ ಆರೋಗ್ಯವನ್ನು ಪಡೆಯಲು ಸಾಧ್ಯ. ಆರೋಗ್ಯವಂತ ಪ್ರಜೆಗಳು ದೇಶದ ಸಂಪತ್ತು ಮತ್ತು ಸಂಪನ್ಮೂಲ. ವಿಶ್ವದಲ್ಲಿಯೇ ಮಾನವ ಸಂಪನ್ಮೂಲದಲ್ಲಿ ಭಾರತ ಅಗ್ರಸ್ಥಾನದಲ್ಲಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ವಿಜಯಪುರದ ಶೈಕ್ಷಣಿಕ ಕ್ಷೇತ್ರದಲ್ಲಿ ಸಂತ ಜೋಸೆಫ್ ಶಿಕ್ಷಣ ಸಂಸ್ಥೆಯ ಕೊಡುಗೆ ತುಂಬಾ ಅಪಾರವಾದದ್ದು ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ಬೆಳೆಸಿ ದೇಶದ ನಾಡಿನ ಸತ್ಪ್ರಜೆಗಳನ್ನಾಗಿ ನಿರ್ಮಿಸುವಲ್ಲಿ ಶಿಕ್ಷಣ ಸಂಸ್ಥೆ ಕಳೆದ ಅನೇಕ ದಶಕಗಳಿಂದ ಈ ಕಾರ್ಯವನ್ನು ಮಾಡುತ್ತಾ ಬಂದಿರುವುದು ಅಭಿಮಾನದ ವಿಷಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಅನಲೀಸಾ ಬಾಸ್ಕೋ, ಸೇಂಟ್ ಜೋಸೆಫ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಾಜು ಜೋಸೆಫ್, ಭಾರತಿ ಕರಡಿ, ವಿಜಯಕುಮಾರ ಹಳ್ಳದಮನಿ, ರಾಜೇಶ ನುಚ್ಚಿ, ಲೋಕೇಶ ಕಾಂಬಳೆ, ಆನಂದ ಬಿರಾದಾರ, ಶಾರದಾ ಮಾಲಗಾರ, ಜಾವೀದ ಬಾಗಲಕೋಟ, ಸುರೇಖಾ ಜೋಶಿ, ಪುರುಷೋತ್ತಮ.ಪಿ ಮತ್ತಿತರರು ಉಪಸ್ಥಿತರಿದ್ದರು.