ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ತಾಲೂಕಿನ ರೈತರಿಗಾಗಿ ಆಧುನಿಕ ತಂತ್ರಜ್ಞಾನದೊಂದಿಗೆ ಕುರಿ ಮೇಕೆ ಮಾರಾಟ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು. ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಗುರುವಾರ ಕುರಿ ಮೇಕೆ ಮಾರುಕಟ್ಟೆ ನಿರ್ಮಿಸಲು ಸ್ಥಳ ವೀಕ್ಷಣೆ ಮಾಡಿ ಮಾತನಾಡಿದ ಅವರು ನಮ್ಮ ತಾಲೂಕಿನಲ್ಲಿ ಬಹುತೇಕ ರೈತರು ತಮ್ಮ ಕೃಷಿ ಚಟುವಟಿಕೆಗಳ ನಡುವೆ ಕುರಿಸಾಕಣೆಯನ್ನು ಮಾಡುತ್ತಿದ್ದು ಇವರಿಗೆ ಸರಿಯಾದ ಮಾರುಕಟ್ಟೆ ಇಲ್ಲದೆ ಇರುವುದು ತೊಂದರೆಯಾಗುತ್ತಿದೆ. ಇದನ್ನು ಮನಗಂಡು ತಮ್ಮ ಕುರಿ ಮೇಕೆಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಅನುಕೂಲವಾಗುವಂತೆ ಒಂದು ಸುಸಜ್ಜಿತ ಮಾರುಕಟ್ಟೆಯನ್ನು ನಿರ್ಮಿಸಲಾಗುವುದು. ಗಣಿಬಾಧಿತ ಪ್ರದೇಶಾಭಿವೃದ್ದಿ ಯೋಜನೆಯಡಿ ೧.೬೬ ಕೋಟಿ ವೆಚ್ಚದಲ್ಲಿ 2 ಎಕರೆ ವಿಸ್ತೀರ್ಣದಲ್ಲಿ ಆಧುನಿಕ ತಂತ್ರಜ್ಞಾನದ ತೂಕದ ಯಂತ್ರಗಳು, ಅಗತ್ಯವಿರುವಂತಹ ಮೂಲಭೂತ ಸೌಲಭ್ಯಗಳೊಂದಿಗೆ ಮಾರುಕಟ್ಟೆಯನ್ನು ನಿರ್ಮಿಸಲಾಗುವುದು. ಈ ಮಾರುಕಟ್ಟೆಗೆ ಸೂಕ್ತವಾದ ಜಾಗವನ್ನು ಈ ಕೃಷಿ ಮಾರುಕಟ್ಟೆಯ ಆವರಣದಲ್ಲಿ ಗುರುತಿಸಲು ಭೇಟಿ ನೀಡಿದ್ದು ಈ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ಮಾರುಕಟ್ಟೆಯಿಂದಾಗಿ ನ್ಯಾಯಯುತ , ಪಾರದರ್ಶಕ ಬೆಲೆ ನಿಗದಿಗೆ ಅನುಕೂಲವಾಗಲಿದೆ ಎಂದರು. ಪಶುಸಂಗೋಪನಾ ಇಲಾಖೆಯ ಕಾಂತರಾಜು ಮಾತನಾಡಿ ನಮ್ಮ ತಾಲೂಕಿನಲ್ಲಿ ಹೆಚ್ಚು ಜನರು ಕುರಿ ಮೇಕೆಗಳನ್ನು ಸಾಕುವಂತಹ ಕುರಿಗಾಹಿಗಳಿದ್ದು ಅವುಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಸಾದ್ಯವಾಗುತ್ತಿರಲಿಲ್ಲ. ಇದರಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾಗಿ ರೈತರಿಗೆ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಈ ಕುರಿ ಮೇಕೆಯ ಮಾರುಕಟ್ಟೆ ಮಾಡುವುದರಿಂದ ರೈತರಿಗೆ ಉತ್ತಮ ಬೆಲೆ ಹಾಗೂ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲದೊರೆಯುತ್ತದೆ ಎಂದರು. ಈ ಸಂದರ್ಭದಲ್ಲಿ ಕೃಷಿಮಾರುಕಟ್ಟೆಯ ಕಾರ್ಯದರ್ಶಿ ಎಂ.ನಾಗೇಂದ್ರಕುಮಾರ್, ಲೋಕೊಪಯೋಗಿ ಇಲಾಖೆಯ ಎಇ ವಿನೋದ್‌ಕುಮಾರ್, ಕುರಿಗಾಹಿಗಳಾದ ಕುರುಬರಹಳ್ಳಿ ಮಹಾಲಿಂಗಯ್ಯ, ನಾಗಭೂಷಣ್, ಬಸವರಾಜು ಸೇರಿದಂತೆ ಇತರರು ಇದ್ದರು.