ಹುಬ್ಬಳ್ಳಿ:
ಮಳೆಗಾಲದಲ್ಲಿ ನಾಲೆಯ ನೀರಿನ ಹರಿವಿನಿಂದ ಉಂಟಾಗುವ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಿ, ಸಾರ್ವಜನಿಕರ ಸುರಕ್ಷತೆ ಹಾಗೂ ಪ್ರದೇಶದ ಮೂಲಸೌಲಭ್ಯ ಬಲಪಡಿಸುವ ಉದ್ದೇಶದಿಂದ ನಾಲಾ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.ಹಳೇ ಹುಬ್ಬಳ್ಳಿ ವಾರ್ಡ್ ನಂ. 60ರಲ್ಲಿ ಬರುವ ಮೈದಾರ ಓಣಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ 2 ಕೋಟಿ ಅನುದಾನದಲ್ಲಿ ರಾಜ ಕಾಲುವೆಗೆ ನಾಲಾ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಅನುದಾನ ತರುವ ಮೂಲಕ ತಡೆಗೋಡೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು. ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ರಾಜಿ ಇಲ್ಲದೆ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುವುದು. ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು.ಇದೇ ವೇಳೆ ಮೇದಾರ ಓಣಿಯಲ್ಲಿ ಲೋಕೋಪಯೋಗಿ ಇಲಾಖೆ ಅನುದಾನ ₹ 1 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಮಸ್ತಾನಸೋಪಾ ಎನ್.ಎ ನಗರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದ ₹ 1 ಕೋಟಿ ವೆಚ್ಚದಲ್ಲಿ ತೆರೆದ ಚರಂಡಿ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಪಾಲಿಕೆ ಸದಸ್ಯರಾದ ರಾಧಾಬಾಯಿ ಸಫಾರೆ, ಬಷೀರ್ ಗೂಡಮಾಲ್, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಅಂಬರೀಶ ಛಲವಾದಿ, ಬಬ್ಲು ಕಾತರಕಿ, ಮುನ್ನಾ ಮಾರಕರ, ಆರೀಫ್ ದೊಡ್ಡಮನಿ, ಅಲ್ತಾಫ್ ಕಿತ್ತೂರು, ಮುತವಲ್ಲಿಗಳಾದ ಅಬ್ದುಲ್ ಕಳಸ, ಮಹ್ಮದ ರಫೀಕ್ ಸಂದಲವಾಲೆ, ಸದ್ದಾಂ ಬೆಂಗಳೂರು, ಮುಸ್ತಾಕ ಅತ್ತಾರ, ಸಮದ್ ಸೇರಿದಂತೆ ಇತರರು ಇದ್ದರು.