ಸುಗಮ ಸಂಚಾರದ‌ ದೃಷ್ಟಿಯಿಂದ ಫ್ಲೈ ಓವರ್ ನಿರ್ಮಾಣ: ಶಾಸಕ ಸೇಠ್‌

| Published : Jan 10 2024, 01:46 AM IST

ಸುಗಮ ಸಂಚಾರದ‌ ದೃಷ್ಟಿಯಿಂದ ಫ್ಲೈ ಓವರ್ ನಿರ್ಮಾಣ: ಶಾಸಕ ಸೇಠ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಶಾಸಕ ಆಸಿಫ್(ರಾಜು) ಸೇಠ್ ಮಾಹಿತಿ ನೀಡಿ ಸುಗಮ ಸಂಚಾರದ‌ ದೃಷ್ಟಿಯಿಂದ ನಗರದಲ್ಲಿ ಫ್ಲೈಓವರ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜತೆಗೆ‌ ಸುಗಮ ಸಂಚಾರದ‌ ದೃಷ್ಟಿಯಿಂದ ನಗರದಲ್ಲಿ ಫ್ಲೈಓವರ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಆಸಿಫ್(ರಾಜು) ಸೇಠ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಗರದಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಯಿಂದ ಕಿತ್ತೂರು ಚನ್ನಮ್ಮ ವೃತ್ತದವರೆಗಿನ 4.50 ಕಿಮೀ. ಉದ್ದದ ಫ್ಲೈಓವರ್ ಮಾರ್ಗದಲ್ಲಿ ಪ್ರಮುಖ ವೃತ್ತಗಳು ಹಾಗೂ ಕೂಡು ರಸ್ತೆಗಳಿವೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಸಮರ್ಪಕ ಯೋಜನೆ ರೂಪಿಸಬೇಕು. ಮುಂಬರುವ ದಿನಗಳಲ್ಲಿ ಹೆಚ್ಚಾಗುವ ಸಂಚಾರ ದಟ್ಟಣೆಯ ಸಮರ್ಪಕ‌ ನಿರ್ವಹಣೆಗೆ ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಸಂಕೇಶ್ವರ ಕಡೆಯಿಂದ ಆಗಮಿಸುವ ವಾಹನಗಳು ಫ್ಲೈಓವರ್ ಮೂಲಕ ಮಾತ್ರವಲ್ಲದೇ ಈಗಿರುವ ಸರ್ವೀಸ್ ರಸ್ತೆಗಳ ಮೂಲಕವೂ ನಗರ ಪ್ರವೇಶಿಸಲು ಅವಕಾಶ ಕಲ್ಪಿಸಬೇಕು. ಬೃಹತ್ ವಾಹನಗಳ ಸಂಚಾರ, ಪಾದಚಾರಿಗಳು ಸೇರಿದಂತೆ ಪ್ರತಿಯೊಂದು ಸಂಗತಿಯನ್ನು ಪರಿಗಣಿಸಿ ಅತ್ಯುತ್ತಮ ಯೋಜನೆ ಜಾರಿಗೊಳಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಯೋಜನೆಯ ಅನುಷ್ಠಾನ ಹಾಗೂ ಪೂರ್ವಭಾವಿಯಾಗಿ ಮಾಡಿಕೊಳ್ಳಬೇಕಿರುವ ಸಿದ್ಧತೆಗಳನ್ನು ವಿವರಿಸಿದರು.

ಬಿಎಸ್ಎನ್ಎಲ್, ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ, ಕೆ‌ಎಸ್ಆರ್ ಟಿಸಿ, ಕುಡಿಯುವ ನೀರು ಸರಬರಾಜು ಮತ್ತಿತರ ಇಲಾಖೆಗಳು ಸಮನ್ವಯತೆಯಿಂದ ಕೆಲಸ‌ ಮಾಡಿ ಯೋಜನೆಯ ಸಮರ್ಪಕ‌ ಅನುಷ್ಠಾನಕ್ಕೆ ಶ್ರಮಿಸಬೇಕು ಎಂದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ವಿವಿಧ ಇಲಾಖೆಗಳನ್ನು ಒಳಗೊಂಡ ನೂತನ ಸಂಕೀರ್ಣದ ನೀಲನಕ್ಷೆಯನ್ನು ಶಾಸಕ ಆಸಿಫ್ ಸೇಠ್ ಪರಿಶೀಲಿಸಿದರು. ಈಗಾಗಲೇ ಇರುವ ಕಚೇರಿಗಳ ದೈನಂದಿನ‌ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಅಗತ್ಯ ಸ್ಥಳಾವಕಾಶ ಒದಗಿಸಬೇಕು. ವಿಶಾಲವಾದ ಪಾರ್ಕಿಂಗ್ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಹಾಗೂ ಸುತ್ತಮುತ್ತಲಿರುವ ವಿವಿಧ ಇಲಾಖೆಗಳ ಬೇಡಿಕೆ ಅನುಸಾರ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಇನ್ನೊಂದು ಸುತ್ತಿನ ಸಭೆಯನ್ನು ನಡೆಸಿದ ಬಳಿಕ ನೀಲನಕ್ಷೆಯನ್ನು ಅಂತಿಮಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಸಭೆಯಲ್ಲಿ ಡಿಸಿಪಿ ಸ್ನೇಹಾ, ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ರಾಜೇಂದ್ರ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಸೊಬರದ ಸೇರಿದಂತೆ ಇತರರು ಇದ್ದರು.