ಸಾರಾಂಶ
ಚಾಮರಾಜನಗರ ನಗರಸಭಾ ವ್ಯಾಪ್ತಿಯ ೧೦ನೇ ವಾರ್ಡಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಪೋಷಣ ಅಭಿಯಾನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪ್ರೊಟೀನ್ಯುಕ್ತ ಆಹಾರವನ್ನು ಗರ್ಭಿಣಿ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸದ್ಬಳಕೆ ಮಾಡಿ ಆರೋಗ್ಯವಂತ ಸಮಾಜಕ್ಕೆ ಸಹಕರಿಸಬೇಕು ಎಂದು ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹದೇವ್ ತಿಳಿಸಿದರು.ನಗರಸಭಾ ವ್ಯಾಪ್ತಿಯ ೧೦ನೇ ವಾರ್ಡಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗರ್ಭಿಣಿ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗೋಸ್ಕರವಾಗಿಯೇ ಸರ್ಕಾರ ಪೋಷಣ ಅಭಿಯಾನ ಮೂಲಕ ಪ್ರೊಟೀನ್ಯುಕ್ತ ಆಹಾರವನ್ನು ವಿತರಣೆ ಮಾಡಲು ಅಂಗನವಾಡಿಗಳಿಗೆ ವಹಿಸಿದ್ದು ಕಾರ್ಯಕರ್ತೆಯರು ಗರ್ಭಿಣಿ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇದನ್ನು ಸದ್ಬಳಕೆ ಮಾಡಬೇಕೆಂದು ತಿಳಿಸಿದರು.ಶಿಶು ಅಭಿವೃದ್ದಿ ಯೋಜನಾಧಿಕಾರಿ ನಾಗೇಶ್ ಪೋಷಣ ಅಭಿಯಾನವನ್ನು ಉದ್ಘಾಟಿಸಿದರು. ಪೌಷ್ಟಿಕ ಆಹಾರಗಳ ಬಗ್ಗೆ ಮುಖ್ಯ ಶಿಕ್ಷಕ ಶಿವರಾಜು ಸವಿವರವಾಗಿ ತಿಳಿಸಿಕೊಟ್ಟರು. ಮೇಲ್ವಿಚಾರಕಿ ಕಸ್ತೂರಿ ಇಲಾಖೆಯ ಯೋಜನೆಗಳು ಮತ್ತು ಪೋಷಣ ಅಭಿಯಾನದ ಬಗ್ಗೆ ಹೇಳಿದರು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರಿಂದ ಸಿರಿ ಧಾನ್ಯಗಳ ಆಹಾರ ಮೇಳವನ್ನು ಆಯೋಜಿಸಲಾಗಿತ್ತು. ಜೊತೆಗೆ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮವನ್ನು ನಡೆಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯರಾದ ಶಾರದ, ರಾಜಮ್ಮ, ಎಂ. ಮಮತಾ, ಶಾಹೀದಬಾನು, ಶೋಭ, ಸಹಾಯಕಿಯರಾದ ಮಹದೇವಮ್ಮ, ಬಸಮ್ಮಣ್ಣಮ್ಮ, ಸುನಂದ, ಪೋಷಕರಾದ ಶಾರದ, ಮಾದಲಾಂಭಿಕೆ, ತೇಜಸ್ವಿನಿ, ನಾಗವೇಣಿ, ಸೌಮ್ಯ, ನೀಲಮ್ಮ, ಆರೋಗ್ಯ ಇಲಾಖೆಯ ದಿವ್ಯಶ್ರೀ, ಅಶ್ವಿನಿ, ಆಶಾ ಕಾರ್ಯಕರ್ತೆ ಕುಮಾರಿ ಇತರರು ಉಪಸ್ಥಿತರಿದ್ದರು.