ಆಹಾರಗಳ ಲಾಭ, ಉಪಯಕ್ತತೆ ಮತ್ತು ಬಳಕೆ ಕುರಿತಂತೆ ಹೆಚ್ಚಿನ ರೀತಿಯಲ್ಲಿ ವ್ಯಾಪಕ ಅರಿವು ಮೂಡಿಸುವ ದಿಶೆಯಲ್ಲಿ ಈ ರೀತಿಯ ಸ್ಪರ್ಧೆಗಳು ಬಹಳಷ್ಟು ಉಪಯೋಗಕಾರಿ. ಪಾರಂಪರಿಕ ಆಹಾರ ಪದ್ಧತಿಗಳು ನಶಿಸಿ ಹೋಗುತ್ತಿವೆ.

ಧಾರವಾಡ

ಜನರ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಿರಿಧಾನ್ಯಗಳ ಬಳಕೆ ಮತ್ತು ಖಾದ್ಯಗಳ ತಯಾರಿಕೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಲು ಕೃಷಿ ವಿವಿ ಡೀನ್ ಡಾ. ಹೇಮಲತಾ ಎಸ್, ತಿಳಿಸಿದರು.

ನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ್ ಸ್ಪರ್ಧೆ ಉದ್ಘಾಟಿಸಿದ ಅವರು, ಸಿರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಹೃದಯ ಆರೋಗ್ಯ, ಮಧುಮೇಹ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಬಹಳ ಸಹಾಯಕವಾಗಿದೆ ಎಂದು ಹೇಳಿದರು.

ಆಹಾರಗಳ ಲಾಭ, ಉಪಯಕ್ತತೆ ಮತ್ತು ಬಳಕೆ ಕುರಿತಂತೆ ಹೆಚ್ಚಿನ ರೀತಿಯಲ್ಲಿ ವ್ಯಾಪಕ ಅರಿವು ಮೂಡಿಸುವ ದಿಶೆಯಲ್ಲಿ ಈ ರೀತಿಯ ಸ್ಪರ್ಧೆಗಳು ಬಹಳಷ್ಟು ಉಪಯೋಗಕಾರಿ. ಪಾರಂಪರಿಕ ಆಹಾರ ಪದ್ಧತಿಗಳು ನಶಿಸಿ ಹೋಗುತ್ತಿದ್ದು, ಅಳಿವಿನಂಚಿನಲ್ಲಿವೆ. ಪಾರಂಪರಿಕ ಆಹಾರ ಪದ್ಧತಿಗಳ ಪೌಷ್ಟಿಕಾಂಶದ ಮಹತ್ವ ಮತ್ತು ಅವುಗಳ ಪ್ರಯೋಜನಗಳನ್ನು ಮುಂದಿನ ಪೀಳಿಗೆಗೆ ತಿಳಿಪಡಿಸಿ, ಸಾಂಪ್ರದಾಯಿಕತೆಯನ್ನು ಮುಂದೆ ಕೊಂಡೊಯ್ಯುವುದು, ಪ್ರಚಲಿತ ಕಾಲಘಟ್ಟದಲ್ಲಿ ಅತೀ ಅವಶ್ಯಕವಾಗಿದೆ. ಸಾರ್ವಜನಿಕರಲ್ಲಿ ಪ್ರಾಚೀನ ಆಹಾರ ಪದ್ಧತಿಗಳ ಬಗ್ಗೆ ಸದಾಭಿಪ್ರಾಯ ಮೂಡಿಸುವಲ್ಲಿ ಸ್ಪರ್ಧೆಗಳು ನಿರಂತರವಾಗಿ ನಡೆಯಬೇಕಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಸಿರಿಧಾನ್ಯಗಳ ಸಂಸ್ಕರಣೆ, ಬ್ರಾಂಡಿಂಗ್ ಮತ್ತು ಪ್ಯಾಕಿಂಗ್ ಗಳಿಗೆ ಸರ್ಕಾರದಿಂದ ದೊರೆಯುವ ಸವಲತ್ತು ಮತ್ತು ಸಹಾಯಧನಗಳ ಕುರಿತಂತೆ ವಿವರ ನೀಡಿದರು. ಸ್ಪರ್ಧೆಯಲ್ಲಿ ಹುಬ್ಬಳ್ಳಿ, ಧಾರವಾಡ ಮತ್ತು ಕಲಘಟಗಿ ತಾಲೂಕುಗಳಿಂದ 20 ಸ್ಪರ್ಧಾರ್ಥಿಗಳು ಭಾಗವಹಿಸಿ ನವಣೆ, ಸಜ್ಜೆ, ಹಾರಕ, ಬರಗು, ಸಾವೆ ಹಾಗೂ ಜೋಳದ ಧಾನ್ಯಗಳಿಂದ ತಯಾರಿಸಿದ ಒಟ್ಟು 20 ವಿವಿಧ ಬಗೆಯ ಖಾದ್ಯಗಳನ್ನು ಪ್ರದರ್ಶಿಸಿದರು.

ಸ್ಪರ್ಧೆಯ ತೀರ್ಪುಗಾರರಾಗಿ ಡಾ. ಹೇಮಲತಾ ಎಸ್, ಡಾ. ರವಿ ಮತ್ತು ಡಾ. ವಿದ್ಯಾ ಸಂಗಣ್ಣವರ ಭಾಗವಹಿಸಿದ್ದರು. ಉಪ ಕೃಷಿ ನಿರ್ದೇಶಕ ನಾಗರಾಜ ಟಿ., ಡಾ. ಸಂದೀಪ ಆರ್.ಜಿ., ಸುಷ್ಮಾ ಮಳಿಮಠ, ಮಾಲತೇಶ ಪುಟ್ಟಣ್ಣವರ, ಪೃಥ್ವಿ ಟಿ.ಪಿ ಎಂ, ಹರೀಶ, ಶ್ರೀಕಾಂತ ಪಾಟೀಲ, ವಿಜಯಾ ಅಂಗಡಿ, ಕುಮಾರ ಲಮಾಣಿ, ಯಾಸ್ಮಿನ್ ಮುಕಾಸಿ, ಪೂರ್ಣಿಮಾ ಮೇಘಣ್ಣವರ ಇದ್ದರು.

ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ್ ಸ್ಪರ್ಧೆಯ ಸಿಹಿ ಖಾದ್ಯಗಳ ವಿಭಾಗದಲ್ಲಿ ರಂಜನಾ ಕುಲಕರ್ಣಿ ಪ್ರಥಮ, ವಿಜಯಾ ಕುಲಕರ್ಣಿ ದ್ವಿತೀಯ ಹಾಗೂ ಲಲಿತ ಮೇಗುಂಡಿ ತೃತೀಯ ಸ್ಥಾನ ಪಡೆದರು. ಖಾರದ ಖಾದ್ಯಗಳ ವಿಭಾಗದಲ್ಲಿ ಸಾವಿತ್ರಿ ದುದಗಿ ಪ್ರಥಮ, ರಂಜನಾ ಕುಲಕರ್ಣಿ ದ್ವಿತೀಯ ಹಾಗೂ ಅಕ್ಷತಾ ಉಪಕಾರಿ ತೃತೀಯ ಸ್ಥಾನ ಪಡೆದರು. ಮರೆತು ಹೋದ ಖಾದ್ಯಗಳ ವಿಭಾಗದಲ್ಲಿ ವೀಣಾ ಬಟ್ಟೇಪಾಟಿ ಪ್ರಥಮ, ಶಿವಲೀಲಾ ಮದ್ದಾನಿಮಠ ದ್ವಿತೀಯ ಹಾಗೂ ಸೌಮ್ಯಾ ಬೆಡಸೂರ ತೃತೀಯ ಸ್ಥಾನ ಪಡೆದರು.