ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಕೃಷಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ರೂಪಿಸುವ ಉದ್ದೇಶದಿಂದ ಇಬ್ಭಾಗವಾಗಿರುವ ರೈತ ಸಂಘಟನೆಗಳನ್ನು ಏಕೀಕರಣಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ರೈತ ಮುಖಂಡರು ಶುಕ್ರವಾರ ಹೇಳಿದರು.ತಾಲೂಕಿನ ಬೆಸಗರಹಳ್ಳಿ ವೃತ್ತದ ರೈತ ಸಂಘದ ವತಿಯಿಂದ ನಡೆದ ರೈತ ಹುತಾತ್ಮರ ದಿನಾಚರಣೆಯಲ್ಲಿ ಕಬ್ಬಿನ ಚಳುವಳಿ ಸಂದರ್ಭದಲ್ಲಿ ಗೆಜ್ಜಲಗೆರೆ ಗ್ರಾಮದಲ್ಲಿ ನಡೆದ ಪೊಲೀಸ್ ಗೋಲಿಬಾರ್ ನಿಂದ ಮೃತಪಟ್ಟ ರೈತ ಕುಟುಂಬಗಳನ್ನು ಅಭಿನಂದಿಸಿ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.
ರೈತ ಮುಖಂಡರಾದ ಪಚ್ಚೆ ನಂಜುಂಡಸ್ವಾಮಿ, ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಮನು ಸೋಮ ಕುಮಾರ್, ಮೈಸೂರು ಘಟಕದ ಅಧ್ಯಕ್ಷ ವಿದ್ಯಾಸಾಗರ್, ಮಂಡ್ಯ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಸೇರಿದಂತೆ ಹಲವು ಮುಖಂಡರು ರೈತ ಸಂಘದ ಹಿಂದಿನ ಹೋರಾಟದ ಶಕ್ತಿ ಕುರಿತು ಮೆಲುಕು ಹಾಕಿದರು.ಕೀರ್ತಿಶೇಷರಾದ ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಸುಂದರೇಶನ್, ಕೆ.ಎಸ್.ಪುಟ್ಟಣ್ಣಯ್ಯ, ಬಾಬಾ ಗೌಡ ಪಾಟೀಲ್ ಸೇರಿದಂತೆ ಹಲವು ಮುಖಂಡರು ರೈತ ಸಂಘವನ್ನು ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ರೈತರ ಸಂಘದ ನಾಯಕರೇ ಹೋರಾಟದ ಹೆಸರಿನಲ್ಲಿ ರಾಜಕೀಯ ಪಕ್ಷಗಳು ಮತ್ತು ನಾಯಕರಲ್ಲಿ ಸಂಘದ ಹೋರಾಟದ ಸಂಕೇತವಾದ ಹಸಿರು ಟವೆಲ್ ಗಳನ್ನು ಒತ್ತೆ ಇಡುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದರು.ಕೆಲವು ರೈತ ನಾಯಕರ ಇಂತಹ ಕೆಲಸಗಳಿಗೆ ಕಡಿವಾಣ ಹಾಕಬೇಕಾದರೆ. ರೈತ ಶಕ್ತಿ ಒಗ್ಗೂಡುವ ಕಾರ್ಯ ಅನಿವಾರ್ಯವಾಗಿದೆ. ಬಂಡವಾಳಶಾಹಿಗಳು ಕೃಷಿಕರ ಜಮೀನುಗಳನ್ನು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ. ರೈತರು ಹಣದಾಸೆಗೆ ಬಲಿಯಾಗಿ ತಮ್ಮ ಜಮೀನುಗಳನ್ನು ಮಾರಾಟ ಮಾಡುವ ಪ್ರವೃತ್ತಿ ಮುಂದುವರಿಸಿದ್ದೆ ಆದಲ್ಲಿ ರೈತರು ಬೀದಿಗೆ ಬೀಳುವ ದಿನ ದೂರವಿಲ್ಲ ಎಂದು ಎಚ್ಚರಿಸಿದರು.
ಪ್ರತಿ ಹಳ್ಳಿಗಳಲ್ಲಿ ರೈತ ಸಂಘ ಏಕೀಕರಣಗೊಳ್ಳಬೇಕು. ಯುವಕರು ಸಂಘದ ಸಂಘಟನೆಯ ಜವಾಬ್ದಾರಿ ಹೊತ್ತು ಹೋರಾಟಕ್ಕೆ ಅಣಿಗೊಳ್ಳಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಅಣ್ಣೂರು ಮಹೇಂದ್ರ, ಕೀಲಾರ ಸೋಮಣ್ಣ. ಬನ್ನೂರು ನಾರಾಯಣ, ಮಂಜೇಶ್ ಗೌಡ, ಕೀಳಘಟ್ಟ ನಂಜುಂಡಯ್ಯ, ಕುದರಗುಂಡಿ ನಾಗರಾಜು, ಬೆಸಗರಹಳ್ಳಿ ವೃತ್ತ ರೈತ ಸಂಘದ ಅಧ್ಯಕ್ಷ ಪಣ್ಣೆದೊಡ್ಡಿ ವೆಂಕಟೇಶ, ಉಪಾಧ್ಯಕ್ಷ ಕೋಣಸಾಲೆ ಕೃಷ್ಣ, ಮರಳಿಗ ರಾಜೇಶ್, ಲೋಕೇಶ, ಕುಂಟನಹಳ್ಳಿ ಮಧು, ಮುಖಂಡರಾದ ರಾಮಕೃಷ್ಣಯ್ಯ, ಹೊಸಕೆರೆ ಜೈರಾಮು, ಶಿವರಾಮು, ಚೆನ್ನಪ್ಪ ಹಾಗೂ ಸಂಚಲನಾ ಸಮಿತಿ ಸದಸ್ಯರು ಭಾಗವಹಿಸಿದ್ದರು.