ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಜಿಲ್ಲೆಯ ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕಿನಲ್ಲಿ ನಿರಂತರ ಮಳೆ ಸುರಿದಿದೆ.ಸಾಗರ ತಾಲೂಕಿನ ಕಾಂಡಿಕೆ, ಕಲ್ಮನೆ, ಕೋಳೂರು, ಭೀಮನಕೋಣೆ, ಭೀಮನೇರಿ, ಮಾಲ್ವೆ, ಕೆಳದಿ ಭಾಗದಲ್ಲಿ ವಿಪರೀತ ಮಳೆಯಾಗುತ್ತಿದೆ. ಇತ್ತ ಹೊಸನಗರ ತಾಲೂಕಿನ ಮಾರುತಿಪುರ, ಕೋಡೂರು, ಮುಂಬಾರು, ಮೇಲಿನಬೆಸಿಗೆ, ಹೊಸೂರು ಸಂಪೆಕಟ್ಟೆ ಭಾಗದಲ್ಲಿಯು ಭಾರಿ ಸುರಿಯುತ್ತಿದೆ.ತೀರ್ಥಹಳ್ಳಿ ತಾಲೂಕಿನ ದೇಮ್ಲಾಪುರ, ಆರಗ, ನೆರಟೂರು, ಹೊಸಹಳ್ಳಿ, ಅರೆಹಳ್ಳಿ, ಹೊನ್ನೇತಾಳು, ಬಿದರಗೋಡು, ಆಗುಂಬೆ ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಭಾಂಡ್ಯ ಕುಕ್ಕೆ, ತ್ರಯಂಬಕಪುರ, ತೂದೂರು ಭಾಗದಲ್ಲಿ ಜೋರು ಮಳೆ ಸುರಿದಿದೆ.ಇದರಿಂದ ಜಿಲ್ಲೆಯ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೆಚ್ಚಾಗಿದೆ. ಭದ್ರಾ ಜಲಾಶಯದ ಒಳ ಹರಿವು ತುಸು ಏರಿಕೆಯಾಗಿದೆ. ಇಂದು ಜಲಾಶಯಕ್ಕೆ 5417 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಜಲಾಶಯದ ನೀರಿನ ಮಟ್ಟ 144.9 (ಗರಿಷ್ಠ 186 ಅಡಿ) ಅಡಿಯಷ್ಟು ನೀರಿನ ಸಂಗ್ರಹವಿದೆ. ಒಟ್ಟು 30.26 ಟಿಎಂಸಿ ನೀರಿದೆ. 1170 ಕ್ಯೂಸೆಕ್ ಹೊರಹರಿವು ಇದೆ. ಕಳೆದ ವರ್ಷ ಈ ಅವಧಿಯಲ್ಲಿ ನೀರಿನ ಮಟ್ಟ 118.11 ಅಡಿಯಷ್ಟಿತ್ತು.ಲಿಂಗನಮಕ್ಕಿ ಒಳಹರಿವು ಹೆಚ್ಚಳ:ಜಲನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಳವಾಗಿರುವ ಹಿನ್ನೆಲೆ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಏರಿಕೆಯಾಗಿದೆ. ಸೋಮವಾರ 39,961 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ.ಕಳೆದ 24 ಗಂಟೆಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 2.65 ಅಡಿಯಷ್ಟು ಏರಿಕೆಯಾಗಿತ್ತು. ಪ್ರಸ್ತುತ ಜಲಾಶಯದಲ್ಲಿ ನೀರಿನ ಮಟ್ಟ 1766.40 (1819 ಅಡಿ) ಅಡಿಗೆ ಏರಿಕೆಯಾಗಿದೆ. ನೀರಿನ ಸಂಗ್ರಹ ಸಾಮರ್ಥ್ಯ 151.64 ಟಿಎಂಸಿ. ಸದ್ಯ 35.01 ಟಿಎಂಸಿಯಷ್ಟು ನೀರಿನ ಸಂಗ್ರಹವಿದೆ. ಶೇ.23ರಷ್ಟು ಮಾತ್ರ ಜಲಾಯಶ ಭರ್ತಿಯಾಗಿದೆ.ತುಂಗಾನದಿಯಿಂದ ನೀರು ಬಿಡುಗಡೆ: ಕಳೆದ ಎರಡ್ಮೂರು ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು, ಇದರಿಂದಾಗಿ ತುಂಗಾ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ತುಂಗಾ ಜಲಾಶಯದಲ್ಲಿ ಸೋಮವಾರ 31 ಸಾವಿರ ಕ್ಯೂಸೆಕ್ ಒಳ ಹರಿವು ಇದ್ದು, 27 ಸಾವಿರ ಕೂಸೆಕ್ ನೀರನ್ನು ಹೊರಗೆ ಬಿಡಲಾಗಿದೆ. ತುಂಗಾ ನದಿ ನೀರಿನ ಮಟ್ಟ ಹೆಚ್ಚಳವಾಗಿದೆ. ಶಿವಮೊಗ್ಗ ನಗರದ ಕೊರ್ಪಾಲಯ್ಯನ ಮಂಟಪ ಮುಕ್ಕಾಲು ಭಾಗ ಮುಳುಗಿದ್ದು, ಅದನ್ನು ನೋಡಲು ಜನರು ಆಗಮಿಸುತ್ತಿದ್ದಾರೆ.
ಜೋಗದಲ್ಲಿ ರಾಜ-ರಾಣಿ ವೈಭವ: ಮಲೆನಾಡಿನಲ್ಲಿ ಮುಂಗಾರು ಮಳೆ ಬಿರುಸುಗೊಂಡಿದ್ದು, ವಿಶ್ವವಿಖ್ಯಾತ ಜೋಗ ಜಲಪಾತ ಜೀವಕಳೆ ಪಡೆದು ಮೈದುಂಬಿಕೊಳ್ಳುತ್ತಿದೆ. ಶರಾವತಿ ನದಿಯ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 138 ಮಿ.ಮೀ. ಮಳೆ ಬಿದ್ದಿರುವುದರಿಂದ ಜಲಪಾತ ಮೈದುಂಬಿಕೊಂಡಿದೆ.ಲಿಂಗನಮಕ್ಕಿ ಡ್ಯಾಂನಲ್ಲಿ ನೀರಿನ ಒಳ ಹರಿವು ಹೆಚ್ಚಾಗಿರುವುದರಿಂದ ರಾಜ, ರಾಣಿ, ರೋರರ್ ಮತ್ತು ರಾಕೆಟ್ ಜಲಪಾತಗಳು ಹಾಲ್ನೊರೆಯಂತೆ ದುಮ್ಮಿಕ್ಕುತ್ತಿವೆ. ಹಾಲ್ನೋರೆಯ ಜಲಧಾರೆಯ ಜೊತೆಗೆ ಮಂಜಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿದೆಡೆಯಿಂದ ಮತ್ತು ಹೊರರಾಜ್ಯಗಳಿಂದ ಪ್ರವಾಸಿಗರ ದಂಡು ದೌಡಾಯಿಸುತ್ತಿದ್ದು, ಮಳೆಯ ಹಿತ ಅನುಭವವನ್ನು ಸವಿಯುತ್ತಿದ್ದಾರೆ.ಮನೆ-ಕೊಟ್ಟಿಗೆ ಕುಸಿತಶಿವಮೊಗ್ಗ: ಹೊಸನಗರ ತಾಲೂಕಿನ ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಗಿ ನಿವಾಸಿ ವಿಶ್ವನಾಥ್ ಅವರ ಮನೆ ಮತ್ತು ಕೊಟ್ಟಿಗೆ ಕುಸಿದು ಹಾನಿಯಾಗಿದೆ.ಭಾನುವಾರ ರಾತ್ರಿ ಹೊಸನಗರ ಭಾಗದಲ್ಲಿ ಸುರಿದ ಬಾರಿ ಮಳೆಗೆ ಈ ಹಾನಿ ಸಂಭವಿಸಿದೆ.ಮನೆಯಲ್ಲಿದ್ದ ವಿಶ್ವನಾಥ್,ಪತ್ನಿ ಮತ್ತು ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಅವರಿಗೆ ಸಣ್ಣ ಪುಟ್ಟ ಗಾಯಳಾಗಿವೆ ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಸತ್ತೀಶ್ ಸೊನಲೆ ಗ್ರಾಮಸ್ಥರೊಂದಿಗೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.ಮಳೆ ಎದುರಿಸಲು ಜಿಲ್ಲಾಡಳಿತ ಸಿದ್ಧವಿದೆ: ಗುರುದತ್ತ ಹೆಗಡೆಶಿವಮೊಗ್ಗ: ಮಲೆನಾಡಲ್ಲಿ ಮಳೆಯ ಪ್ರಮಾಣ ಹೆಚ್ಚಿದೆ. ಮಳೆಯಿಂದ 14 ಮನೆಗಳು ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸನಗರ, ಸಾಗರ ತಾಲೂಕಿನಲ್ಲಿ ಹೆಚ್ಚು ಮಳೆ ಆಗುತ್ತಿದೆ. ಈ ಹಿನ್ನೆಲೆ ಎರಡು ತಾಲೂಕಿನಲ್ಲಿ ಶಾಲಾ - ಕಾಲೇಜಿಗೆ ರಜೆ ಘೋಷಣೆ ಮಾಡಿದ್ದೇವೆ. ಆಯನೂರು ಹೋಬಳಿಯಲ್ಲಿ ಮನೆ ಕುಸಿದು ಓರ್ವ ವೃದ್ಧೆ ಸಾವನಪ್ಪಿದ್ದಾರೆ, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದೇವೆ. ಎಲ್ಲಾ ತಾಲೂಕಿನಲ್ಲಿ ಅಧಿಕಾರಿಗಳಿಗೆ ಅಲರ್ಟ್ ಅಗಿರುವಂತೆ ಸೂಚನೆ ನೀಡಿದ್ದೇವೆ. ಜಿಲ್ಲಾಡಳಿತ ಮಳೆ ಎದುರಿಸಲು ಸನ್ನದ್ಧವಾಗಿದೆ ಎಂದರು. ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟುಹೋಗದಂತೆ ಸೂಚನೆ ನೀಡಲಾಗಿದೆ.ಪಂಚಾಯಿತಿ ಮಟ್ಟದಲ್ಲೆ ಟಾಸ್ಕ-ರ್ಸ್ ರಚನೆ ಮಾಡಲಾಗಿದೆ.ಘಟನೆ ನಡೆದ ಸ್ಥಳಕ್ಕೆ ದಾವಿಸಿ ನೆರವು ನೀಡಬೇಕು.ಬೀಳುವ ಮರಗಳು ಇದ್ದರೆ ತೆರವು ಮಾಡಲು ಅರಣ್ಯ ಇಲಾಖೆಯವರಿಗೆ ತೆರವು ಮಾಡಲು ಸೂಚನೆ ನೀಡಲಾಗಿದೆ.ಕಾಲುಸಂಕ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.ಮನೆ ಗೋಡೆ ಕುಸಿದು ವೃದ್ಧೆ ಸಾವು ಶಿವಮೊಗ್ಗ: ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆ ಗೋಡೆ ಕುಸಿದು ವೃದ್ದೆ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ತಾಲೂಕಿನ ಆಯನೂರು ಸಮೀಪದ ಆಡಗಡಿ ಗ್ರಾಮದಲ್ಲಿ ನಡೆದಿದೆ.
ಸಿದ್ದಮ್ಮ(100) ಮೃತಪಟ್ಟ ವೃದ್ದೆ. ಆಡಗಡಿ ಗ್ರಾಮದ ಹೇಮಾವತಿ ಕೋಂ ನಾಗರಾಜ್ (45) ಎಂಬುವವರ ಮಣ್ಣಿನ ಮನೆ ಕುಸಿದಿದೆ. ಇವರ ಮನೆಯಲ್ಲಿದ್ದ ಸಿದ್ದಮ್ಮ ಸಾವನ್ನಪ್ಪಿದ್ದಾರೆ.ಸಿದ್ದಮ್ಮ ಹೇಮಾವತಿಯವರ ಸಂಬಂಧಿಯಾಗಿದ್ದು, ಹೊನ್ನಾಳಿ ತಾಲೂಕಿನ ಕುಂಕೋವ ಗ್ರಾಮದವರಾಗಿದ್ದಾರೆ. ಮನೆಯಲ್ಲಿ ಹೇಮಾವತಿ ಅವರ ಮಗಳು ಪಲ್ಲವಿ, ಅಳಿಯ ಪರಶುರಾಮ್ ಮೊಮ್ಮಗ ಚೇತನ್( 2) ಇದ್ದು ಇವರಿಗೆ ಸಣ್ಣ ಪುಟ್ಟ ಗಾಯವಾಗಿವೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸ್ ಠಾಣೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.