ದಕ್ಷಿಣ ಕನ್ನಡದಲ್ಲಿ ಮುಂದುವರಿದ ಉತ್ತಮ ಮಳೆ

| Published : Jul 07 2024, 01:26 AM IST

ಸಾರಾಂಶ

ಅಡ್ಯಾರ್‌ನ ದೋಟದಲ್ಲಿ ಮಳೆ ನೀರು ನಿಂತು ಸಮಸ್ಯೆಯಾದರೆ, ಬಜಾಲ್‌ ಅಂಡರ್‌ ಪಾಸ್‌ ಸೇರಿದಂತೆ ಪಡೀಲ್‌, ಪಂಪ್‌ವೆಲ್‌ ಭಾಗದಲ್ಲಿ ಮಳೆ ನೀರು ಸರಾಗವಾಗಿ ಸಾಗದೆ ಕೃತಕ ಪ್ರವಾಹ ಉಂಟಾಗಿತ್ತು. ಜಿಲ್ಲೆಯಲ್ಲಿ 106 ವಿದ್ಯುತ್‌ ಕಂಬಗಳು ಮುರಿದುಬಿದ್ದಿವೆ.
ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಜಿಲ್ಲಾದ್ಯಂತ ಶನಿವಾರ ಉತ್ತಮ ಮಳೆ ಸುರಿದಿದೆ. ಭಾರೀ ಮಳೆಯ ಮುನ್ಸೂಚನೆ ಇದ್ದುದರಿಂದ ಜಿಲ್ಲೆಯ ಶಾಲೆಗಳು, ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮುಂದಿನ ನಾಲ್ಕು ದಿನಗಳ ಕಾಲ ಉತ್ತಮ ಮಳೆ ಸುರಿಯುವ ಸಾಧ್ಯತೆಯನ್ನು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ 3 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.

ಮಂಗಳೂರು ನಗರದಲ್ಲಿ ಬೆಳಗ್ಗಿನಿಂದಲೇ ಗುಡುಗು, ಸಿಡಿಲಿನೊಂದಿಗೆ ಭಾರೀ ಮಳೆ ಸುರಿಯುವುದರೊಂದಿಗೆ ಚುರುಕುಗೊಂಡ ಮುಂಗಾರು ಇಡೀ ದಿನ ಬಿಟ್ಟೂ ಬಿಟ್ಟು ಸುರಿಯುತ್ತಲೇ ಇತ್ತು. ಅಡ್ಯಾರ್‌ನ ದೋಟದಲ್ಲಿ ಮಳೆ ನೀರು ನಿಂತು ಸಮಸ್ಯೆಯಾದರೆ, ಬಜಾಲ್‌ ಅಂಡರ್‌ ಪಾಸ್‌ ಸೇರಿದಂತೆ ಪಡೀಲ್‌, ಪಂಪ್‌ವೆಲ್‌ ಭಾಗದಲ್ಲಿ ಮಳೆ ನೀರು ಸರಾಗವಾಗಿ ಸಾಗದೆ ಕೃತಕ ಪ್ರವಾಹ ಉಂಟಾಗಿತ್ತು. ಜಿಲ್ಲೆಯಲ್ಲಿ 106 ವಿದ್ಯುತ್‌ ಕಂಬಗಳು ಮುರಿದುಬಿದ್ದಿವೆ.ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗಿನಿಂದ ಶನಿವಾರ ಬೆಳಗ್ಗಿನವರೆಗೆ ಸರಾಸರಿ 50.6 ಮಿ.ಮೀ ಮಳೆ ದಾಖಲಾಗಿದೆ. ಮೂಲ್ಕಿಯಲ್ಲಿ 84.6 ಮಿ.ಮೀ, ಉಳ್ಳಾಲದಲ್ಲಿ 32.7 ಮಿ.ಮೀ, ಕಡಬ 44.5 ಮಿ.ಮೀ, ಮೂಡುಬಿದಿರೆ 79.4 ಮಿ.ಮೀ, ಸುಳ್ಯ 18.5 ಮಿ.ಮೀ, ಪುತ್ತೂರಿನಲ್ಲಿ 24 ಮಿ.ಮೀ, ಮಂಗಳೂರು 49 ಮಿ.ಮೀ, ಬಂಟ್ವಾಳ 34.3 ಮಿ.ಮೀ ಮಳೆ ಸುರಿದಿದೆ.

ಮೂಲ್ಕಿ ತಾಲೂಕಿನಲ್ಲಿ ಮಳೆ ಹಾನಿ

ಮೂಲ್ಕಿ: ಮೂಲ್ಕಿ ತಾಲೂಕಿನಲ್ಲಿ ಶುಕ್ರವಾರ ರಾತ್ರಿಯಿಂದ ನಿರಂತರ ಗಾಳಿ ಸಹಿತ ಬಿರುಸಿನ ಮಳೆಯಾಗಿದ್ದು ಕೆಲವೆಡೆ ಹಾನಿ ಸಂಭವಿಸಿದೆ. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆನ್ನಬೆಟ್ಟು ಗ್ರಾಮದಲ್ಲಿ ರುಪಮಾ ಎಂಬವರ ಮನೆಗೆ ಆವರಣ ಗೋಡೆ ಕುಸಿದು ಭಾಗಶಃ ಹಾನಿ ಸಂಭವಿಸಿದೆ. ಮೂಲ್ಕಿ ತಾಲೂಕು ಉಪ ತಹಸೀಲ್ದಾರ್‌ ದಿಲೀಪ್‌ ರೋಡ್ಕರ್‌, ಕಂದಾಯ ನಿರೀಕ್ಷಕ ದಿನೇಶ್‌, ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹಳೆಯಂಗಡಿ ಗ್ರಾಮ ಪಂಚಾಯಿತಿ, ಮೆಸ್ಕಾಂ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಕಾರದಿಂದ ಹಳೆಯಂಗಡಿ ಕಿನ್ನಿಗೋಳಿ ಪ್ರಧಾನ ರಸ್ತೆಯ ಇಂದಿರಾ ನಗರ ಹಾಗೂ ರೈಲ್ವೆ ಗೇಟ್ ಬಳಿ ಅಪಾಯಕಾರಿ ಮರಗಳ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.

ಈ ಸಂದರ್ಭ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರು ಮೂಲ್ಕಿ ಪೊಲೀಸರ ಸಹಕಾರದೊಂದಿಗೆ ಸಂಚಾರ ನಿಯಂತ್ರಿಸಿದರು. ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಅಬ್ದುಲ್ ಅಜೀಜ್, ಅಬ್ದುಲ್ ಖಾದರ್, ಪಿಡಿಒ ದೀಪ್ತಿ, ಅರಣ್ಯ ಇಲಾಖೆ ಅಧಿಕಾರಿ ನಾಗೇಶ್ ಬಿಲ್ಲವ, ಹಳೆಯಂಗಡಿ ಮೆಸ್ಕಾಂ ಇಲಾಖೆ ಅಧಿಕಾರಿ ಶೇಖರ ಆಚಾರ್ಯ, ಸಾಮಾಜಿಕ ಕಾರ್ಯಕರ್ತ ಮನೋಜ್ ಮತ್ತಿತರರು ಉಪಸ್ಥಿತರಿದ್ದರು.