ಬ್ಯಾಡಗಿ: ನಿರಂತರ ಓದು ಹಾಗೂ ಶಿಸ್ತು ವಿದ್ಯಾರ್ಥಿಗಳಲ್ಲಿ ಸಾಧನೆಯ ತುಡಿತ ಹೆಚ್ಚಿಸುತ್ತದೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಲ್ಲಿ ಜಿಲ್ಲೆಯ ವಿವಿಧ ಮಾಧ್ಯಮಗಳ ವಿದ್ಯಾರ್ಥಿಗಳು ಸಾಧಿಸಿರುವ ಉತ್ತಮ ಫಲಿತಾಂಶವೇ ಅದಕ್ಕೆ ಸಾಕ್ಷಿಯಾಗಿದೆ ಎಂದು ಡಯಟ್ ಉಪನಿರ್ದೇಶಕ ಝಡ್.ಎಂ. ಖಾಜಿ ಅಭಿಪ್ರಾಯಪಟ್ಟರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ತಾಲೂಕಿನ ಕದರಮಂಡಲಗಿ ಗ್ರಾಮದ ಸ್ಪಂದನ ಪ್ರೌಢಶಾಲೆಯ ವಿದ್ಯಾರ್ಥಿನಿ ನಿವೇದಿತಾ ಪರಶುರಾಮ ಅಜ್ಜಮ್ಮನವರ ಸೇರಿದಂತೆ ಕನ್ನಡ, ಉರ್ದು ಮತ್ತು ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಿ ಅವರು ಮಾತನಾಡಿದರು.ವೈದ್ಯೆಯಾಗಬೇಕು ಎಂಬ ಮಹದಾಸೆಯನ್ನು ಹೊಂದಿರುವ ನಿವೇದಿತಾ ಅಜ್ಜಮ್ಮನವರು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶ್ರದ್ಧೆಯಿಂದ ತಯಾರಿ ನಡೆಸಿದ್ದರು. ಪ್ರತಿದಿನ ಶಾಲೆಯಲ್ಲಿ ಪಾಠಗಳನ್ನು ಏಕಾಗ್ರತೆಯಿಂದ ಆಲಿಸಿ, ಬೆಳಗ್ಗೆ 5 ಗಂಟೆಗೆ ಎದ್ದು ಓದಿನಲ್ಲಿ ತೊಡಗಿಸಿಕೊಂಡು, ಶಾಲೆಯ ನಂತರ ಮನೆಯ ಕೆಲಸಗಳಲ್ಲಿ ಸಹಾಯ ಮಾಡುತ್ತಾ, ರಾತ್ರಿ 1 ಗಂಟೆಯವರೆಗೆ ಅಧ್ಯಯನ ಮಾಡುತ್ತಿದ್ದಳು. ಇಂತಹ ನಿರಂತರ ಪರಿಶ್ರಮ, ಶಿಸ್ತು ಹಾಗೂ ಗುಣಮಟ್ಟದ ಶಿಕ್ಷಣದ ಫಲವಾಗಿ ಇಂದು ಉತ್ತಮ ಫಲಿತಾಂಶ ಸಾಧಿಸಿದ್ದಾಳೆ ಎಂದು ಹೇಳಿದರು. ಇದೇ ವೇಳೆ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಮಲ್ಲೂರು ಗ್ರಾಮದ ವಿದ್ಯಾರ್ಥಿ ಭುವನ್ ಮೋರೆ, ತೃತೀಯ ಸ್ಥಾನ ಪಡೆದ ಕೆರವಡಿ ಗ್ರಾಮದ ವಿದ್ಯಾರ್ಥಿನಿ ನಿತಾ ಇಂಡುವಳ್ಳಿ, ಉರ್ದು ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಹಿರೇಕೇರೂರ ಗ್ರಾಮದ ವಿದ್ಯಾರ್ಥಿ ಫೈಜ್ ಅಹಮ್ಮದ ಕಮಲ್ ಸೇರಿದಂತೆ ಇತರ ವಿದ್ಯಾರ್ಥಿಗಳೂ ಶಿಸ್ತು ಮತ್ತು ಪರಿಶ್ರಮದ ಮೂಲಕ ರಾಜ್ಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಹೇಳಿದರು. ಇನ್ನೂ ಕಾರಡಗಿ ಗ್ರಾಮದ ಗೌಂಡಿ ಕೆಲಸ ಮಾಡುವ ಕುಟುಂಬದ ಮಗಳು ಉರ್ದು ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿರುವುದು ಗಮನಾರ್ಹವಾಗಿದೆ, ಬಡತನ ವಿದ್ಯೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ, ಗುತ್ತಲ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಕೂಡ ಬಡತನದಲ್ಲೇ ಉತ್ತಮ ಸಾಧನೆ ಮಾಡಿದ್ದಾಳೆ ಎಂದರು. ಈ ಸಂದರ್ಭದಲ್ಲಿ ಮೌನೇಶ ಬಡಿಗೇರ, ಶೇಖರ ಹಂಚಿನಮನಿ, ಮಹಾಂತೇಶ ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.