ಮುಂಡಗೋಡ: ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮಪಡಿಸುವ ದೃಷ್ಟಿಯಿಂದ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ನಿರಂತರವಾಗಿ ತರಬೇತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಮಕ್ಕಳು ಇದರ ಸದುಪಯೋಗ ಪಡಿಸಿಕೊಂಡು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕು ಎಂದು ಶಿರಸಿ ಶೈಕ್ಷಣಿಕ ಇಲಾಖೆ ಉಪನಿರ್ದೇಶಕ ಡಿ.ಆರ್. ನಾಯ್ಕ ಹೇಳಿದರು.

ಬುಧವಾರ ಇಲ್ಲಿಯ ನಗರಸಭಾ ಭವನದಲ್ಲಿ ಉತ್ತರ ಕನ್ನಡ ಜಿಪಂ, ಶಿರಸಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕರ ಕಾರ್ಯಾಲಯ, ಮುಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಧಾರವಾಡದ ವಿಜೇತ ಶಿಕ್ಷಣ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆ ಮತ್ತು ಪ್ರತಿಭಾನ್ವೇಷಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಸ್ಪರ್ಧಾಯುಗದಲ್ಲಿ ಉತ್ತಮ ಅಂಕ ಗಳಿಸಿದರೆ ಮಾತ್ರ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಭವಿಷ್ಯದ ಗುರಿ ಇಟ್ಟುಕೊಂಡು ಪ್ರಯತ್ನಪಟ್ಟರೆ ಯಾವುದೂ ಕೂಡ ಅಸಾಧ್ಯವಲ್ಲ. ಮಕ್ಕಳು ಮನಸ್ಸು ಮಾಡಿದರೆ ಉತ್ತಮ ಫಲಿತಾಂಶ ಪಡೆಯುವುದು ಕಷ್ಟವಾಗುವುದಿಲ್ಲ. ಇಡೀ ವರ್ಷ ಪಾಠ ಕೇಳಿ ಸಾಕಷ್ಟು ಕಿರು ಪರೀಕ್ಷೆಗಳನ್ನು ಎದುರಿಸಿ ಬರುವ ಮಕ್ಕಳು, ಕೊನೆಯಲ್ಲಿ ಏಕೆ ಎಡವುತ್ತಾರೆ ಎಂಬುದೇ ಒಂದು ದೊಡ್ಡ ಪ್ರಶ್ನೆಯಾಗಿದೆ. ಮಕ್ಕಳು ಇದನ್ನು ಸವಾಲಾಗಿ ಸ್ವೀಕರಿಸಿ, ಉತ್ತರ ನೀಡುವ ಕಾಲಘಟ್ಟ ಇದಾಗಿದ್ದು, ಇನ್ನುಳಿದ ಕೆಲವೇ ದಿನಗಳಲ್ಲಿ ನಿರಂತರ ಅಭ್ಯಾಸ ನಡೆಸಿ ಒಳ್ಳೆಯ ಫಲಿತಾಂಶ ಪಡೆಬೇಕು ಎಂದು ಹೇಳಿದರು.

ಒಂದು ಸಾಮಾನ್ಯ ಹದ್ದು (ಪಕ್ಷಿ) ಮೋಡಕ್ಕೆ ಸವಾಲು ಹಾಕುವ ಸಾಮರ್ಥ್ಯ ಹೊಂದಿದೆ. ಆದರೆ ಇಡೀ ಜೀವರಾಶಿಗಳಲ್ಲಿಯೇ ಶ್ರೇಷ್ಠ ಹಾಗೂ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿರುವ ಮನುಷ್ಯನಿಗೆ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.

ಪ್ರಮುಖವಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿಯುವ ತನಕ ಮೊಬೈಲ್, ಕಂಪ್ಯೂಟರ್, ಟಿವಿ ತ್ಯಜಿಸುವಂತೆ ಸಲಹೆ ನೀಡಿದ ಅವರು, ಆರೋಗ್ಯದ ಕಡೆ ಕೂಡ ಗಮನಹರಿಸಿ, ಧೈರ್ಯದಿಂದ ಪರೀಕ್ಷೆ ಎದುರಿಸುವಂತೆ ಕರೆ ನೀಡಿದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಪರೀಕ್ಷಾ ಸಿದ್ಧತೆ ಉಪನ್ಯಾಸ ನೀಡಿದರು. ಮುಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ, ಧಾರವಾಡ ವಿಜೇತ ಶಿಕ್ಷಣ ಸಂಸ್ಥೆ ನಿರ್ದೇಶಕ ರಮೇಶ ಪರಿಟ್, ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಪಿ.ಎಂ. ಪೋಷಣೆ ಸಹಾಯಕ ನಿರ್ದೇಶಕ ವಾಸುದೇವ ನಾಯ್ಕ, ಶಂಕರ ಹಡಗಲಿ, ರಫೀಕ್‌ ಮಿರಾನಾಯ್ಕ, ಕುಂದಗೋಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಮಂಜುನಾಥ ಮರಿತಮ್ಮಣ್ಣವರ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸುಭಾಸ ಡೋರಿ, ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಡಿ. ಮುಡೆಣ್ಣವರ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ರಮೇಶ ಅಂಬಿಗೇರ, ಎಸ್.ಎಸ್.ಎಲ್.ಸಿ. ಪರೀಕ್ಷಾ ವಿಭಾಗದ ನೋಡಲ್ ಅಧಿಕಾರಿ ನಾಗರಾಜ ನಾಯ್ಕ ಉಪಸ್ಥಿತರಿದ್ದರು.


ಉಪನ್ಯಾಸಕ ವಿನಾಯಕ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಮಂಜುಳಾ ಹಿರೇಮಠ, ಅಂಬುಜಾ ಭಟ್, ವೈಶಾಲಿ ಗೊಬ್ಬರದವರ, ಅರ್ಚನಾ ಗುರವ ಸಂಗಡಿಗರು ಪ್ರಾರ್ಥಿಸಿದರು. ಎಸ್.ಡಿ. ಮುಡೆಣ್ಣವರ ಸ್ವಾಗತಿಸಿದರು. ಸದ್ಗುರು ಭಟ್ ವಂದಿಸಿದರು.