ಗ್ರಾಮೀಣ ಪ್ರದೇಶದ ಕೂಲಿಕಾರರ ಗುಳೆ ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ವಿಬಿಜಿ- ರಾಮ್ ಜಿ ಯೋಜನೆಯಡಿ 125 ದಿನಗಳ ಕೆಲಸ ದೊರೆಯಲಿದೆ.

ಕಾಮಗಾರಿ ಸ್ಥಳದಲ್ಲಿ ವಿಬಿ ಜಿ-ರಾಮ್ ಜಿ ಯೋಜನೆಯಡಿ ಐಇಸಿ ಚಟುವಟಿಕೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಗ್ರಾಮೀಣ ಪ್ರದೇಶದ ಕೂಲಿಕಾರರ ಗುಳೆ ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ವಿಬಿಜಿ- ರಾಮ್ ಜಿ ಯೋಜನೆಯಡಿ 125 ದಿನಗಳ ಕೆಲಸ ದೊರೆಯಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರ ಹೇಳಿದರು.

ತಾಲೂಕಿನ ನಿಡಗುಂದಿ ಗ್ರಾಮದ ಹೊಸ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗುರುವಾರ ವಿಬಿ ಜಿ-ರಾಮ್ ಜಿ ಯೋಜನೆಯಡಿ ಐಇಸಿ ಚಟುವಟಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರು ಗುಳೆ ಹೋಗದೆ ತಮ್ಮ ಊರಿನಲ್ಲಿ ಸರ್ಕಾರ ನಿಗದಿ ಪಡಿಸಿದ ದಿನಗಳ ವರೆಗೆ ಕೆಲಸ ಮಾಡಬೇಕು. ವೈಯಕ್ತಿಕ ಕಾಮಗಾರಿಗಳ ಲಾಭ ಪಡೆದುಕೊಳ್ಳಬೇಕು ಎಂದರು.

ವಿಬಿ ಜಿ-ರಾಮ್ ಜಿ ಯೋಜನೆಯಡಿ 125 ದಿನಗಳ ಕೆಲಸ ಪಡೆಯಬೇಕಾದರೆ ಕೂಲಿಕಾರರು ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ನಿಮಗೆ ನಿರಂತರ ಕೆಲಸ ನೀಡುತ್ತೇವೆ. ಅಂದಾಗ 125 ದಿನಗಳ ಕಾಲ ಕೆಲಸ ಪಡೆದುಕೊಳ್ಳಬಹುದು. ಆ ನಿಟ್ಟಿನಲ್ಲಿ ನಿಡಗುಂದಿ ಗ್ರಾಮ ಎಲ್ಲಾ ಕೂಲಿಕಾರರು ಕೆಲಸ ಮಾಡಬೇಕು ಎಂದರು.

ನಿಡಗುಂದಿ ಗ್ರಾಮದ ಹೊಸ ಕೆರೆಯು ಕೆರೆಯಂತೆ ಕಾಣುತ್ತಿಲ್ಲ. ಇದರಲ್ಲಿ ಮುಳ್ಳುಕಂಠಿ, ಗಿಡ, ಜಾಲಿಮರ ಬೆಳೆದು, ಹೂಳು ತುಂಬಿ ಕರೆಯೂ ತನ್ನ ಆಕಾರವನ್ನು ಕಳೆದುಕೊಂಡು ನೀರು ನಿಲ್ಲದಂತ್ತಾಗಿದೆ. ಕೆರೆ ಪುನಶ್ಚೇತನಕ್ಕಾಗಿ ವಿಬಿ ಜಿ-ರಾಮ್ ಜಿ ಯೋಜನೆಯಲ್ಲಿ ಅಂದಾಜು ₹90 ಲಕ್ಷ ಕಾಮಗಾರಿಗಳನ್ನು ಇಟ್ಟುಕೊಳ್ಳಲಾಗಿದೆ. ಅದರಲ್ಲಿ ಕೂಲಿಕಾರರು ಸರಿಯಾಗಿ ಕೆಲಸ ಮಾಡಿ ಕೆರೆ ಅಭಿವೃದ್ಧಿ ಮಾಡಿದರೆ ತಾಲೂಕಿಗೆ ಮಾದರಿ ಕೆರೆಯಾಗಬೇಕು ಎಂದರು.

ವಿಭಿನ್ನ ಐಇಸಿ ಚಟುವಟಿಕೆ:

ನಿಡಗುಂದಿ ಗ್ರಾಮದ ಹೊಸ ಕೆರೆಯಲ್ಲಿ ಕೂಲಿಕಾರರಿಗೆ ವಿಬಿ ಜಿ-ರಾಮ್ ಜಿ ಎಂದು ಅಕ್ಷರ ಬರೆದು ಆಕರ್ಷಣೆ ಮಾಡಿ ಕೂಲಿಕಾರರ ಗಮನ ಸೆಳೆಯುವಂತೆ ಮಾಡಲಾಯಿತು. ಜೊತೆಗೆ ಅಕ್ಷರದಲ್ಲಿ ಕೂಲಿಕಾರರ ಮಹಿಳೆಯನ್ನು ಕುಳಿಸಿ ಸುತ್ತಲೂ ಜನರನ್ನು ನಿಲ್ಲಿಸಿ ಯೋಜನೆಯ ಬಗ್ಗೆ ಅರಿವು ಮೂಡಿಸಲಾಯಿತು.

ಈ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮರೇಶ ಮೂಲಿಮನಿ, ಜಿಲ್ಲಾ ಐಇಸಿ ಸಂಯೋಜಕ ವಿ.ಎಸ್.ಸಜ್ಜನ್, ತಾಂತ್ರಿಕ ಸಹಾಯಕ ಅಜಯ್ ಹೂಗಾರ, ಮತ್ತಪ್ಪ, ಅನಿತಾ ಸಂಗನಾಳ ಸೇರಿದಂತೆ ಕಾಯಕ ಬಂಧುಗಳು, ಕೂಲಿಕಾರರು ಇದ್ದರು.