ಕಾಮಗಾರಿ ಪೂರ್ಣಗೊಳಿಸಲು ನಿರಂತರ ಕೆಲಸ ಅಗತ್ಯ: ಸಚಿವ ಎನ್.ಎಸ್. ಬೋಸರಾಜು

| Published : Jan 04 2025, 12:33 AM IST

ಕಾಮಗಾರಿ ಪೂರ್ಣಗೊಳಿಸಲು ನಿರಂತರ ಕೆಲಸ ಅಗತ್ಯ: ಸಚಿವ ಎನ್.ಎಸ್. ಬೋಸರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ತಾಲೂಕಿನ ನಾರಾಯಣಪೇಟೆ ಗ್ರಾಮದ ಕೊಪ್ಪಳ-ಯಲಬುರ್ಗಾ ಕೆರೆ ತುಂಬಿಸುವ ಯೋಜನೆಯ ಮೊದಲ ಹಂತದ ಕಾಮಗಾರಿಯನ್ನು ಸಚಿವ ಎನ್.ಎಸ್. ಬೋಸರಾಜು ವೀಕ್ಷಿಸಿದರು.

ಕೊಪ್ಪಳ: ನಿರಂತರವಾಗಿ ಕೆಲಸ ಮಾಡಿದಾಗ ಕಾಮಗಾರಿಗಳು ಮುಗಿಯುತ್ತವೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ವಿಪ ಸಭಾನಾಯಕ ಎನ್.ಎಸ್. ಬೋಸರಾಜು ಹೇಳಿದರು.

ತಾಲೂಕಿನ ನಾರಾಯಣಪೇಟೆ ಗ್ರಾಮದ ಕೊಪ್ಪಳ-ಯಲಬುರ್ಗಾ ಕೆರೆ ತುಂಬಿಸುವ ಯೋಜನೆಯ ಮೊದಲ ಹಂತದ ಕಾಮಗಾರಿಯ ಜಾಕ್‌ವೆಲ್ ಮತ್ತು ಪಂಪ್‌ಹೌಸ್ ವೀಕ್ಷಣೆ ಮಾಡಿ ಮಾತನಾಡಿದರು.ಯಾವುದೇ ಕೆಲಸ ಮತ್ತು ಕಾಮಗಾರಿಗಳು ಕಾಲಮಿತಿಯಲ್ಲಿ ಮುಗಿಯಬೇಕಾದರೆ ನಿರಂತರವಾಗಿ ಕೆಲಸ ಮಾಡಬೇಕು. ಅಂದಾಗ ಮಾತ್ರ ಅವುಗಳು ಬೇಗನೆ ಮುಗಿಯುತ್ತವೆ. ಕೊಪ್ಪಳ-ಯಲಬುರ್ಗಾ ಕೆರೆ ತುಂಬಿಸುವ ಯೋಜನೆಯ ಮೊದಲ ಹಂತದ ಕಾಮಗಾರಿ ಇದಾಗಿದ್ದು, 6 ಕೆರೆಗಳನ್ನು ₹2.83 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ. ಈಗಾಗಲೇ ಈ ಭಾಗದಲ್ಲಿನ ಸಮಸ್ಯೆಗಳನ್ನು ಪರಿಶೀಲನೆ ಮಾಡಲು ಎರಡು ಸಲ ಸಭೆಗಳನ್ನು ಮಾಡಲಾಗಿದೆ. ಇದರ ಜೊತೆಗೆ ಕೊಪ್ಪಳ ಜಿಲ್ಲೆಯ ಹುಲಗಿ ಗ್ರಾಮದ ಹತ್ತಿರ ಇರುವ ಹಿರೇಹಳ್ಳ ಏತ ನೀರಾವರಿ ಯೋಜನೆ ಹಾಗೂ ಕೆರೆ ತುಂಬಿಸುವ ಕಾಮಗಾರಿಗಳು, ಭಾನಾಪೂರ ಗ್ರಾಮದಲ್ಲಿ ಕೊಪ್ಪಳ-ಯಲಬುರ್ಗಾ ಕೆರೆ ತುಂಬಿಸುವ ಏತ ನೀರಾವರಿ ಯೋಜನೆ, ಕಡೆಕೊಪ್ಪ ಗ್ರಾಮದಲ್ಲಿ ಕುಷ್ಟಗಿ ಏತ ನೀರಾವರಿ ಯೋಜನೆ ಕಾಮಗಾರಿಗಳ ವೀಕ್ಷಣೆ ನಂತರ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದೇನೆ ಎಂದು ಹೇಳಿದರು.

ಕೃಷ್ಣ-ಕಾವೇರಿ ಬೇಸ್‌ ಕಾಮಗಾರಿಗಳನ್ನು ಒಂದು ವರ್ಷದಲ್ಲಿ ಮುಗಿಸುವಂತೆ ಹಾಗೂ ಕೆಲಸದ ವೇಗ ಹೆಚ್ಚಿಸುವಂತೆ ಮಾಡಲಾಗುತ್ತಿದೆ. ನಮ್ಮ ಭಾಗದಲ್ಲಿಯ ಕಾಮಗಾರಿಗಳೂ ಕಾಲಮಿತಿಯಲ್ಲಿ ನಡೆಯಬೇಕು ಎಂಬ ಉದ್ದೇಶಕ್ಕಾಗಿ ವಿವಿಧ ಕಾಮಗಾರಿಗಳ ಪರಿವೀಕ್ಷಣೆಗೆ ಬಂದಿದ್ದೇನೆ. ಕಾಲಮಿತಿಯಲ್ಲಿ ಕೆಲಸ ಮಾಡದ ಗುತ್ತಿಗೆದಾರರಿಗೆ ಪೆನಾಲ್ಟಿ ಹಾಕಲಾಗುತ್ತದೆ. ಗುತ್ತಿಗೆದಾರರು ಕೆಲಸವನ್ನು ಕಾಲಮಿತಿಯಲ್ಲಿ ಮುಗಿಸಿದಾಗ ಯಾವುದೇ ಸಮಸ್ಯೆಗಳಾಗುವುದಿಲ್ಲ. ವಿಳಂಬವಾದರೆ ಬೇರೆ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಿದರು.

ಕೊಪ್ಪಳ-ಯಲಬುರ್ಗಾ ಕೆರೆ ತುಂಬಿಸುವ ಯೋಜನೆಯ ಮೊದಲ ಹಂತದ ಕಾಮಗಾರಿಯ ಜಾಕವೆಲ್ ಮತ್ತು ಪಂಪ್‌ಹೌಸ್ ವೀಕ್ಷಣೆ ಸಂದರ್ಭದಲ್ಲಿ ಸಚಿವರು ಯಾವ ತಿಂಗಳಲ್ಲಿ ಎಷ್ಟು ಕೆಲಸ ಮುಗಿಸಬೇಕು ಎಂದು ಮುಂಚಿತವಾಗಿ ತಮಲ್ಲಿ ಒಂದು ಯೋಜನೆ ಇರಬೇಕು. 18 ತಿಂಗಳಲ್ಲಿ ಮುಗಿಸುವ ಕೆಲಸವನ್ನು 6 ವರ್ಷ ಮಾಡಿದರೆ ಹೇಗೆ? ಇದನ್ನು ಆದಷ್ಟು ಬೇಗನೆ ಮುಗಿಸಿ ವರದಿ ನೀಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಸಂಸದ ಕೆ. ರಾಜಶೇಖರ ಬಸವರಾಜ ಹಿಟ್ನಾಳ, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ರಾಘವನ್, ಮುಖ್ಯ ಎಂಜಿನಿಯರ್ ಜಗದೀಶ್ ರಾಥೋಡ್, ಅಧೀಕ್ಷಕ ಎಂಜಿನಿಯರ್ ಲಿಂಗರಾಜ್, ಇಇ ಬಿ.ಎಸ್. ಪಾಟೀಲ್, ಇಇ ಶ್ರವಣಕುಮಾರ, ಎಇಇಗಳಾದ ಜೆ.ಎನ್. ಜೋಳಗೊಂಡ, ದೇವೇಂದ್ರಪ್ಪ ಹಾಗೂ ರಷ್ಮೀ, ಜೂನಿಯರ್ ಎಂಜಿನಿಯರ್ ಪ್ರಕಾಶ ಪಾಟೀಲ್ ಸೇರಿದಂತೆ ಇತರೆ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳು ಇತರರಿದ್ದರು.