ಸಾರಾಂಶ
ಬೆಂಗಳೂರು : \\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\ಬಾಕಿ ಪಾವತಿ ಸೇರಿದಂತೆ ಎಲ್ಲ 9 ಬೇಡಿಕೆ ಈಡೇರಿಕೆಯ ಬಗ್ಗೆ ಲಿಖಿತ ರೂಪದಲ್ಲಿ ಆದೇಶಿಸಿದ ನಂತರವಷ್ಟೇ ಕಾಮಗಾರಿ ಪುನರ್ ಆರಂಭಿಸುವ ಮತ್ತು ಪ್ರತಿಭಟನೆ ನಿರ್ಧಾರ ಹಿಂಪಡೆಯುವ ಬಗ್ಗೆ ನಿರ್ಧರಿಸಲಾಗುವುದು ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘ ಪಟ್ಟು ಹಿಡಿದಿದೆ.
ಗುತ್ತಿಗೆದಾರರಿಗೆ ಬಾಕಿ ಇರುವ ಬಿಲ್ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಬಿಎಂಪಿ ಗುತ್ತಿಗೆದಾರರ ಸಂಘ ಜುಲೈ 8 ರಿಂದ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಗುತ್ತಿಗೆದಾರರ ಸಂಘ ಪದಾಧಿಕಾರಿಗಳ ಜೊತೆ ಸಂಧಾನ ಸಭೆ ನಡೆಸಲಾಯಿತು.
ಈ ವೇಳೆ ಬಿಬಿಎಂಪಿ ಗುತ್ತಿಗೆದಾರರ ಸಂಘದ ಎಲ್ಲ ಬೇಡಿಕೆ ಈಡೇರಿಸಲಾಗುವುದು ಎಂದು ಮುಖ್ಯ ಆಯುಕ್ತರು ಭರವಸೆ ನೀಡಿದರು. ಆದರೆ ಮೌಖಿಕ ಆಶ್ವಾಸನೆ ಬೇಡ, ಲಿಖಿತ ರೂಪದಲ್ಲಿ ಆದೇಶಿಸಿದರೆ ಮಾತ್ರ ಪ್ರತಿಭಟನೆ ಹಿಂಪಡೆದು ಕಾಮಗಾರಿ ಪುನರ್ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಗುತ್ತಿಗೆದಾರ ಸಂಘದ ಪದಾಧಿಕಾರಿಗಳು ಪಟ್ಟುಹಿಡಿದರು.
ಲಿಖಿತ ರೂಪದಲ್ಲಿ ಆದೇಶ ಮಾಡಲು ಒಂದು ದಿನ ಕಾಲಾವಕಾಶ ನೀಡಿ. ಶನಿವಾರ ಆದೇಶಿಸಲಾಗುವುದು ಎಂದು ಹೇಳಿದ್ದಾರೆಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್ ತಿಳಿಸಿದ್ದಾರೆ.
ಡಿಸಿಎಂ ಮತ್ತು ಆಡಳಿತಾಧಿಕಾರಿಗೆ ಮಾಹಿತಿ:
ಸಭೆಯ ಬಳಿಕ ಬೇಡಿಕೆಗಳ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತರು, ಹಣಕಾಸು ಮತ್ತು ಆಡಳಿತ ವಿಭಾಗದ ವಿಶೇಷ ಆಯುಕ್ತರು, ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಮತ್ತು ಉಪ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದ್ದಾರೆ.
ಗುತ್ತಿಗೆದಾರರ ಬೇಡಿಕೆಗಳು:
ಗುತ್ತಿಗೆದಾರರಿಗೆ ಕಾಮಗಾರಿಗಳ ಬಿಲ್ಲು ಪಾವತಿ ಮಾಡುವ ಸಮಯದಲ್ಲಿ ತಡೆ ಹಿಡಿದಿರುವ ಶೇ.25 ಬಾಕಿ ಹಣ ಬಿಡುಗಡೆ ಮಾಡಬೇಕು. 24 ತಿಂಗಳಿಂದ ಕೈಗೊಂಡ ಕಾಮಗಾರಿಗಳಿಗೆ ಸುಮಾರು 1,600 ಕೋಟಿ ರು. ಪಾವತಿಸಬೇಕಾಗಿದ್ದು, ಅದರಲ್ಲಿ ಕನಿಷ್ಠ 12 ತಿಂಗಳ ಬಿಲ್ ಬಿಡುಗಡೆ ಮಾಡಬೇಕು. ಗುತ್ತಿಗೆದಾರರಿಗೆ ಬಿಲ್ ಸಲ್ಲಿಸಲು ಸರಳ ಮಾದರಿ ಹಾಗೂ ಟಿವಿಸಿಸಿ ರ್ಯಾಂಡಮೈಸೇಷನ್ ತನಿಖೆ ಕೈ ಬಿಡಬೇಕು. ಕೇಂದ್ರ ಕಚೇರಿಯ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಿಂದ ಬಿಲ್ ಪಾವತಿಸಬೇಕು. ಕಟ್ಟಡ ಕಾಮಗಾರಿಗಳ ಬಿಲ್ಗಳನ್ನು ‘ಎಸೆನ್ಷಿಯಲ್’ ಎಂದು ಪರಿಗಣಿಸಿ ತ್ವರಿತವಾಗಿ ಪಾವತಿಸಬೇಕು. ಹಿಂದಿನ ಪದ್ಧತಿಯಂತೆ ಟೆಂಡರ್ ಪ್ರೀಮಿಯಂ ಅಧಿಕಾರವನ್ನು ಮುಖ್ಯ ಎಂಜಿನಿಯರ್ಗೆ ನೀಡಬೇಕು. ಕೆಆರ್ಐಡಿಎಲ್ ಸಂಸ್ಥೆಯ ಬಾಕಿ ಬಿಲ್ಲುಗಳನ್ನು ಪಾವತಿಸಬೇಕು.