ಸಾರಾಂಶ
ವಿದ್ಯಾರ್ಥಿಗಳು ಅಪರಾಧ ಕೃತ್ಯಗಳಿಂದ ದೂರವಿರಬೇಕು. ಯುವಕರು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಹಕರಿಸಬೇಕು.
ಕನ್ನಡಪ್ರಭ ವಾರ್ತೆ ಲೋಕಾಪುರ
ಇಂದಿನ ತಂತ್ರಜ್ಞಾನಯುಗದಲ್ಲಿ ಯುವಕರೇ ಹೆಚ್ಚಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿರುವುದು ಕಂಡು ಬರುತ್ತಿದೆ. ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಲು ಅಧ್ಯಯನಶೀಲರಾಗಿ ಅಪರಾಧ ಕೃತ್ಯಗಳಿಂದ ದೂರು ಉಳಿಯಬೇಕೆಂದು ಪಿಎಸೈ ಕಾಡಪ್ಪ ಜಕ್ಕನ್ನವರ ಹೇಳಿದರು.ಪಟ್ಟಣದ ಪ್ರಮುಖ ವಾರ್ಡಗಳಲ್ಲಿ ಅಪರಾಧ ತಡೆ ಮಾಸಾಚರಣೆ ನಿಮಿತ್ತ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಅಪರಾಧ ಕೃತ್ಯಗಳಿಂದ ದೂರವಿರಬೇಕು. ಯುವಕರು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಹಕರಿಸಬೇಕು. ತಾವು ನೆಲೆಸಿರುವ ಪ್ರದೇಶದಲ್ಲಿ ತಮ್ಮ ನೆರೆಹೊರೆಯವರಿಗೆ, ಕುಟುಂಬದವರಿಗೆ ಹಾಗೂ ಸಮಾಜದ ಇತರೆ ಜನರಿಗೆ ಅಪರಾಧ ತಡೆಗಳ ಕುರಿತು ತಿಳುವಳಿಕೆ ಹೇಳಬೇಕು. ಅಪರಾಧಗಳು ತಮ್ಮಿಂದ ನಡೆಯದ ಹಾಗೆ ಜೀವನ ಕ್ರಮ ರೂಪಿಸಿಕೊಳ್ಳಬೇಕೆಂದರು.
ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸದಂತೆ ಪಾಲಕರು ಸಲಹೆ ನೀಡಬೇಕು. ಮಕ್ಕಳಿಗೆ ಸರಿಯಾಗಿ ವಾಹನ ಓಡಿಸಲು ಕಲಿತ ನಂತರ ಚಾಲನಾ ಪ್ರಮಾಣ ಪತ್ರ ಪಡೆದ ನಂತರವಷ್ಟೇ ರಸ್ತೆಗಳಲ್ಲಿ ವಾಹನ ಚಲಾವಣೆ ಮಾಡಲು ಅವಕಾಶ ನೀಡಬೇಕು. ಮಾರುಕಟ್ಟೆ, ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ದಟ್ಟನೆ ಹೆಚ್ಚಾಗಿದ್ದು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ವಾಹನ ನಿಲುಗಡೆಗಾಗಿ ಆಯ್ಕೆ ಮಾಡಿದ ರಸ್ತೆಗಳಲ್ಲಿಯೇ ವಾಹನ ನಿಲ್ಲಿಸಬೇಕು ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.ಜಿಲ್ಲೆಯಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸೈಬರ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖೆಯು ೧೯೩೦ ಎನ್ನುವ ಸಹಾಯವಾಣಿ ಪ್ರಾರಂಭಿಸಿದೆ. ಸಾರ್ವಜನಿಕರ ಹಿತದೃಷ್ಠಿಯಿಂದ ದಿನದ ೨೪ ಗಂಟೆಗಳ ಕಾಲ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದ್ದು ಜನರ ಸಹಕಾರ ಅವಶ್ಯವಾಗಿ ಬೇಕೆಂದರು. ಈ ವೇಳೆ ಇಲಾಖೆ ಸಿಬ್ಬಂದಿ ನಿಂಗರಾಜ ಕೂಡ್ಲಿ, ಅಟೋಚಾಲಕರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.