ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ತಾಲೂಕಿನ ಕೂಟಗಲ್ ಹೋಬಳಿ ದೊಡ್ಡಗಂಗವಾಡಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಡಿ.ಎಂ.ಮಹದೇವಯ್ಯ ಮತ್ತು ಉಪಾಧ್ಯಕ್ಷರಾಗಿ ಶಿವಕುಮಾರಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಂಘದ ಸಭಾಂಗಣದಲ್ಲಿ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಡಿ.ಎಂ.ಮಹದೇವಯ್ಯ ಮತ್ತು ಶಿವಕುಮಾರಸ್ವಾಮಿಯನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಪುರುಷೋತ್ತಮ್ ಅವಿರೋಧ ಆಯ್ಕೆ ಘೋಷಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ 11 ನಿರ್ದೇಶಕರು, ಒಬ್ಬರು ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿ ಪಾಲ್ಗೊಂಡಿದ್ದರು. ಸಂಘದ ಸಿಇಒ ಮುಕುಂದರಾಜು ಇತರರಿದ್ದರು.
ಕಳೆದ ಫೆ.2ರಂದು ಸಂಘದ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 11 ನಿರ್ದೇಶಕರು ಭರ್ಜರಿ ಗೆಲುವು ಸಾಧಿಸಿದ್ದರು. ಪರಿಶಿಷ್ಟ ಪಂಗಡದ ಒಂದು ಸ್ಥಾನ ಖಾಲಿ ಉಳಿದಿದೆ. ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡಿ.ಎಂ.ಮಹದೇವಯ್ಯ ಮತ್ತು ಉಪಾಧ್ಯಕ್ಷರಾಗಿ ಶಿವಕುಮಾರಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಎಚ್.ಮಂಜು ಮಾತನಾಡಿ, ಈ ಸಂಘ ರಾಜಕೀಯ ಪ್ರೇರಿತವಾಗಿ ಗುರುತಿಸಿಕೊಂಡಿತ್ತು. ಹಿಂದಿನ ಆಡಳಿತ ಮಂಡಳಿ ಅಥವಾ ಕಾರ್ಯದರ್ಶಿಯ ನಿರ್ಲಕ್ಷ್ಯವೊ ಗೊತ್ತಿಲ್ಲ. ಸಂಘವನ್ನು ಸದೃಢಗೊಳಿಸುವ ಕೆಲಸ ಮಾಡಲಿಲ್ಲ. ಇನ್ನು ಮುಂದೆ ಸಂಘವನ್ನು ಕ್ರೊಢೀಕೃತ ನಷ್ಟದಿಂದ ಲಾಭದತ್ತ ಕೊಂಡೊಯ್ಯಲು ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಹೊಸ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸಿಬ್ಬಂದಿ ಸಹಕಾರದೊಂದಿಗೆ ಕೆಸಿಸಿ ಬೆಳೆ ಸಾಲವನ್ನು 5 - 6 ಕೋಟಿ ಕೊಡಿಸುತ್ತೇವೆ. ರಸಗೊಬ್ಬರ ವಿತರಣೆ ಕಾರ್ಯ ನಡೆಯುತ್ತಿದೆ. ಕುರಿ ಸಾಕಾಣಿಕೆ ಸಾಲ, ಸ್ತ್ರೀ ಶಕ್ತಿ ಸಾಲ ಕಲ್ಪಿಸಿ ಸಂಘವನ್ನು ಸದೃಢಗೊಳಿಸುತ್ತೇವೆ. ಸಂಘದ ಹಳೆಯ ಕಟ್ಟಡವನ್ನು ಕೆಡವಿ 30 - 40 ಲಕ್ಷ ರುಪಾಯಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.ನೂತನ ಅಧ್ಯಕ್ಷ ಡಿ.ಎಂ.ಮಹದೇವಯ್ಯ ಮಾತನಾಡಿ, ಷೇರುದಾರರು 11ಕ್ಕೆ 11 ಸ್ಥಾನಗಳನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಟ್ಟಿದ್ದರು. ಈಗ ನನ್ನ ಮೇಲೆ ವಿಶ್ವಾಸವಿಟ್ಟು ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸಲು ಕಲ್ಪಿಸಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತೇನೆ. ಸಂಘವನ್ನು ಹಿರಿಯರು ಕಟ್ಟಿ ಬೆಳೆಸಿದ್ದಾರೆ. ಕೆಲ ವರ್ಷಗಳ ಕಾಲ ಅನ್ಯರ ಪಾಲಾದ ಕಾರಣ ಸಂಘದ ಬೆಳವಣಿಗೆ ಕುಂಠಿತಗೊಂಡಿತು. ಈಗ ಮೋಲ್ನೋಟಕ್ಕೆ ನಾನು ಸಂಘದ ಅಧ್ಯಕ್ಷನಾಗಿದ್ದರು ಹಿರಿಯರ ಮಾರ್ಗದರ್ಶನದಲ್ಲಿ ಸಂಘ ಮುನ್ನಡೆಯಲಿದೆ ಎಂದು ಹೇಳಿದರು.
ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಡಿ.ಎಂ.ಮರಿಚೆನ್ನಯ್ಯ, ಮುಖಂಡರಾದ ದೊಡ್ಡಗಂಗವಾಡಿ ಗೋಪಾಲ್, ನಿರ್ದೇಶಕರಾದ ಮಲ್ಲಿಕಾರ್ಜುನಯ್ಯ, ಆನಂದ, ರಾಮಯ್ಯ, ಗಿರಿಯಪ್ಪ, ಪಾರ್ವತಮ್ಮ, ಜಯಲಕ್ಷ್ಮಮ್ಮ, ಗುರುಬಸವಾಚಾರಿ, ತಿಮ್ಮಯ್ಯ, ಶಿವಸ್ವಾಮಿ, ಗ್ರಾಮದ ಪ್ರಮುಖರಾದ ಬಸವಲಿಂಗಯ್ಯ, ಚನ್ನವೀರಯ್ಯ, ಸಿದ್ದಲಿಂಗಮೂರ್ತಿ, ತಿಮ್ಮೇಗೌಡ, ಸೋಮಣ್ಣ, ರಾಜಶೇಖರ್, ಲಿಂಗರಾಜು, ರಾಜಶೇಖರ್, ನಂದೀಶ್, ಹುಚ್ಚಪ್ಪ, ಯತಿರಾಜು, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಮುಕುಂದರಾಜು ಮತ್ತಿತರರು ನೂತನ ಅಧ್ಯಕ್ಷ - ಉಪಾಧ್ಯಕ್ಷರನ್ನು ಅಭಿನಂದಿಸಿದರು.