ವಿಶ್ವಶಾಂತಿಗೆ ಜಿನೇವಾ ಒಪ್ಪಂದದ ಕೊಡುಗೆ ಅಪಾರ: ಡಾ. ಪ್ರಸಾದ್ ರಾವ್

| Published : Aug 14 2024, 01:02 AM IST

ಸಾರಾಂಶ

ಉಡುಪಿಯ ಬ್ರಹ್ಮಗಿರಿಯ ರೆಡ್‌ಕ್ರಾಸ್ ಭವನದಲ್ಲಿ ವಿಶ್ವಶಾಂತಿಗಾಗಿ ಜಿನೇವಾ ಒಪ್ಪಂದದ ಸ್ಮರಣೆ ಎಂಬ ವಿಷಯದ ಬಗ್ಗೆ ನಡೆದ ವಿಚಾರ ಸಂಕಿರಣ ನಡೆಯಿತು. ಚಿಂತಕ ಮತ್ತು ರಂಗತಜ್ಞ ಡಾ. ಪ್ರಸಾದ್ ರಾವ್ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

1864ರ ಜಿನೇವಾ ಒಪ್ಪಂದವು ವಿಶ್ವ ಶಾಂತಿಗೆ ನೀಡಿದ ಕೊಡುಗೆ ಮಹತ್ವದ್ದಾಗಿದೆ. ಎಲ್ಲ ದೇಶಗಳ ಸೈನಿಕರಿಗೆ ಆರೈಕೆ ಹಾಗೂ ಮೃತ ಸೈನಿಕರಿಗೆ ಗೌರವಯುತವಾದ ಅಂತ್ಯ ಸಂಸ್ಕಾರಕ್ಕೆ ದೇಶಗಳು ಒಡಂಬಡಿಕೆಗೆ ಬಂದ ಮಹತ್ವದ ಒಪ್ಪಂದ ಜಿನೇವಾ ಒಪ್ಪಂದವಾಗಿದೆ. ಸೆರೆಯಾದ ಸೈನಿಕರನ್ನು ಸಂಬಂಧಿಸಿದ ದೇಶಗಳಿಗೆ ಒಪ್ಪಿಸಲು ಈ ಒಪ್ಪಂದವು ಕಾರಣವಾಗಿದೆ. ರೆಡ್ ಕ್ರಾಸ್‌ನ ಉದಯಕ್ಕೆ ಈ ಒಪ್ಪಂದವು ಮೂಲ ಕಾರಣವಾಗಿದೆ ಎಂದು ಚಿಂತಕ ಮತ್ತು ರಂಗತಜ್ಞ ಡಾ. ಪ್ರಸಾದ್ ರಾವ್ ಹೇಳಿದರು.

ಅವರು ಸೋಮವಾರ ನಗರದ ಬ್ರಹ್ಮಗಿರಿಯ ರೆಡ್‌ಕ್ರಾಸ್ ಭವನದಲ್ಲಿ ವಿಶ್ವಶಾಂತಿಗಾಗಿ ಜಿನೇವಾ ಒಪ್ಪಂದದ ಸ್ಮರಣೆ ಎಂಬ ವಿಷಯದ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಕಾರ್ಯಕ್ರಮವನ್ನು ರೆಡ್‌ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ್, ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರೆಡ್‌ಕ್ರಾಸ್ ಸಂಯೋಜಕಿ ಡಾ. ದಿವ್ಯಾ ಎಂ.ಎಸ್., ರೆಡ್‌ಕ್ರಾಸ್ ಅಧಿಕಾರಿಗಳಾದ ರೇಖಾ ಮತ್ತು ಡಾ. ರಾಘವೇಂದ್ರ ಎಲ್. ಹಾಗೂ ಜಿಲ್ಲೆಯ ವಿವಿಧ ಕಾಲೇಜುಗಳ ರೆಡ್‌ಕ್ರಾಸ್ ಸ್ವಯಂ ಸೇವಕ - ಸೇವಕಿಯರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಖಜಾಂಚಿ ರಮಾದೇವಿ ವಂದಿಸಿದರು.