ವ್ಯಕ್ತಿತ್ವ ವಿಕಸನಕ್ಕೆ ಅಧ್ಯಾತ್ಮದ ಕೊಡುಗೆ ಅಪಾರ: ಜಗದ್ಗುರು

| Published : Mar 28 2025, 12:34 AM IST

ಸಾರಾಂಶ

Contribution of spirituality to personality development is immense: Jagadguru

-ರೇಣುಕಾಚಾರ್ಯ ಜಯಂತಿ, ಜಾತ್ರಾ ಮಹೋತ್ಸವದಂಗ ಧರ್ಮ ಜಾಗೃತಿ ಸಮಾರಂಭ

-----

ಕನ್ನಡಪ್ರಭ ವಾರ್ತೆ ಸೊರಬ

ಮನುಷ್ಯ ಯಂತ್ರದಂತೆ ದುಡಿದರೂ ಜೀವನದಲ್ಲಿ ಶಾಂತಿ ನೆಮ್ಮದಿಯಿಲ್ಲ. ವ್ಯಕ್ತಿ ವಿಕಸನಕ್ಕೆ ಧರ್ಮ ಆಧ್ಯಾತ್ಮಗಳ ಕೊಡುಗೆ ಅಪಾರ. ಅರಿವಿನ ಕಣ್ಣು ತೆರೆಸಲು ಗುರು ಮತ್ತು ಗುರು ಕಾರುಣ್ಯ ಮುಖ್ಯವೆಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ಶಾಂತಪುರ ಸಂಸ್ಥಾನ ಹಿರೇಮಠದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ೨೩ನೇ ವರ್ಷದ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ. ನಿರಂತರ ಸಾಧನೆ ಮತ್ತು ಪ್ರಯತ್ನದಿಂದ ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯ. ಜೀವನದಲ್ಲಿ ನಂಬಿಕೆ ವಿಶ್ವಾಸ ಕಳೆದು ಹೋದರೆ ಬಾಳುವುದು ಬಲು ಕಷ್ಟ. ಸುಖ ಸಮೃದ್ಧಿ ಬೆಳೆದಂತೆ ಸಂಸ್ಕೃತಿ ಸತ್ಕೃತಿ ಬೆಳೆಯುತ್ತಿಲ್ಲ. ವಿದ್ಯಾ ಬುದ್ಧಿ ಬೆಳೆದ ಪ್ರಮಾಣದಲ್ಲಿ ಹೃದಯ ಪರಿವರ್ತನೆಯಾಗದಿರುವುದೇ ಇಂದಿನ ಗೊಂದಲಗಳಿಗೆ ಕಾರಣ ಎಂದು ಅಭಿಪ್ರಾಯಪಟ್ಟರು.

ಅಶಾಂತಿ ಅಜ್ಞಾನದ ತಾಕಲಾಟದಲ್ಲಿ ಸಮಾಜ ಬಡವಾಗಬಾರದೆಂದು ಶ್ರೀಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ನಾಗರಿಕತೆಯ ನೆಪದಲ್ಲಿ ನಿಜವಾದ ಮೌಲ್ಯಗಳು ಕಣ್ಮರೆಯಾಗಬಾರದು. ಮನುಷ್ಯನಲ್ಲಿ ದೈವೀ ಗುಣಗಳು ಬೆಳೆದು ಬಂದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಇತಿಹಾಸ ಪರಂಪರೆವುಳ್ಳ ಶಾಂತಪುರ ಸಂಸ್ಥಾನ ಹಿರೇಮಠ ಶ್ರೀರಂಭಾಪುರಿ ಪೀಠದ ಶಾಖಾ ಮಠವಾಗಿದ್ದು, ಮಲೆನಾಡಿನ ಪ್ರಾಂತದಲ್ಲಿ ಭಕ್ತ ಸಮುದಾಯಕ್ಕೆ ಸಂಸ್ಕಾರ ಮತ್ತು ಧರ್ಮದ ಅರಿವು ಮೂಡಿಸುವ ಕೆಲಸವನ್ನು ಶಿವಾನಂದ ಶಿವಾಚಾರ್ಯ ಸ್ವಾಮಿಗಳು ನಿರಂತರ ಮಾಡುತ್ತಾ ಬಂದಿದ್ದಾರೆ ಎಂದರು.

ಶಾಂತಪುರ ಸಂಸ್ಥಾನ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಧರ್ಮಸಭೆಯ ನೇತೃತ್ವವಹಿಸಿ ಮಾತನಾಡಿ, ಮನುಷ್ಯ ಒಳ್ಳೆಯವನಾಗಲು ಕೆಟ್ಟವನಾಗಲು ಅವನ ನಡವಳಿಕೆಯೇ ಮೂಲ ಕಾರಣ. ಮನುಷ್ಯ ಮನುಷ್ಯರ ಮಧ್ಯ ಬೆಳೆದು ಬಂದ ಕಂದಕ ಮುಚ್ಚಿ ಸಾಮರಸ್ಯ ಸೌಹಾರ್ದತೆ ಬೆಳೆಸುವುದೇ ಧರ್ಮದ ಗುರಿ. ಶ್ರೀರಂಭಾಪುರಿ ಜಗದ್ಗುರು ಕೃಪಾಶೀರ್ವಾದದಿಂದ ಪ್ರತಿವರ್ಷ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗುತ್ತಿರುವುದು ಸಂತೋಷದ ಸಂಗತಿ ಎಂದರು.

ಬಂಕಾಪುರ ಅರಳೆಲೆಮಠದ ರೇವಣಸಿದ್ದ ಶಿವಾಚಾರ್ಯಸ್ವಾಮಿ ಮಾತನಾಡಿ, ಬೆಟ್ಟದಷ್ಟು ಕಷ್ಟಗಳು ಬಂದರೂ ಅಚಲವಾಗಿರುವ ಗಟ್ಟಿತನ ಬೇಕು. ಮನಸ್ಸು ಮಾತು ಕೃತಿ ಒಂದಾಗಿ ನಡೆಯುವವನ ಜೀವನ ಉಜ್ವಲಗೊಳ್ಳುತ್ತದೆ. ದುಡಿಯುವ ಕೈಗೆ ಬಡತನವಿಲ್ಲ. ಆಲಸ್ಯದ ಬದುಕಿಗೆ ನೆಮ್ಮದಿಯಿಲ್ಲ. ಉರಿಯುವ ದೀಪ ಮತ್ತೊಂದು ದೀಪ ಬೆಳಗಿಸುತ್ತದೆ. ಆದರೆ, ಉರಿಯದಿರುವ ಹಣತೆ ಮತ್ತೊಂದು ದೀಪ ಬೆಳಗಲು ಸಾಧ್ಯವಾಗದು. ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಜೀವನದ ಮೌಲ್ಯದ ದಶಧರ್ಮ ಸೂತ್ರಗಳ ಪರಿಪಾಲನೆಯಿಂದ ಬದುಕು ವಿಕಾಸಗೊಳ್ಳುತ್ತದೆ. ಶಾಂತಪುರ ಮಠದ ಶ್ರೀಗಳವರ ಶ್ರಮ ಸಾಧನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ ಎಂದರು.

ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಗುರುಕುಮಾರ್ ಪಾಟೀಲ್ ಧರ್ಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಳಲಿ ಸಂಸ್ಥಾನ ಮಠದ ನಾಗಭೂಷಣ ಶ್ರೀಗಳು, ಜಡೆಮಠದ ಮಹಾಂತ ಸ್ವಾಮಿಗಳು, ಸಂಗೊಳ್ಳಿ ಗುರುಲಿಂಗ ಶ್ರೀಗಳು, ಕುರವತ್ತಿ ನಂದೀಶ್ವರ ಶ್ರೀಗಳು, ಹಾರನಹಳ್ಳಿ ಶಿವಯೋಗಿ ಶ್ರೀಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದಗೌಡ್ರು ಬಿಳಗಲಿ, ಅ.ಭಾ.ವೀ. ಮಹಾಸಭಾ ಜಡೆ ಹೋಬಳಿ ಘಟಕದ ಅಧ್ಯಕ್ಷ ಕೆ.ಬಂಗಾರಪ್ಪಗೌಡ್ರು ಪಾಲ್ಗೊಂಡಿದ್ದರು.

------

ಫೋಟೊ: ಸೊರಬ ತಾಲೂಕಿನ ಶಾಂತಪುರ ಸಂಸ್ಥಾನ ಹಿರೇಮಠದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ೨೩ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದಲ್ಲಿ ಡಾ.ವೀರಸೋಮೇಶ್ವರ ಜಗದ್ಗುರು ಆಶೀರ್ವಚನ ನೀಡಿದರು.

೨೭ಕೆಪಿಸೊರಬ-೦೧