ಸಾರಾಂಶ
ಶಿರಸಿ: ಅರಣ್ಯವಾಸಿಗಳಿಂದ ಆರೋಪಿಸಿದ ದೌರ್ಜನ್ಯ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು. ಅಲ್ಲದೇ, ಅರಣ್ಯವಾಸಿಗಳಿಂದ ಹೊಸ ಅರಣ್ಯ ಭೂಮಿ ಅತಿಕ್ರಮಣ ನಿಯಂತ್ರಿಸಲಾಗುವುದೆಂದು ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ತಿಳಿಸಿದರು.ಗುರುವಾರ ನಗರದ ಗಾಣಿಗರ ಕಲ್ಯಾಣಮಂಟಪದಲ್ಲಿ ಅರಣ್ಯ ಅಧಿಕಾರಿಯೊಂದಿಗೆ ಅರಣ್ಯವಾಸಿಗಳ ಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಜಿಪಿಎಸ್ ಮಂಜೂರಿ ಪ್ರಕ್ರಿಯೆಯಾಗಿದ್ದು, ಜಿಪಿಎಸ್ ಮಾನದಂಡದ ಅಡಿಯಲ್ಲಿಯೇ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸಲಾಗದು. ಅರಣ್ಯ ಸಿಬ್ಬಂದಿಯಿಂದ ಕರ್ತವ್ಯ ಚ್ಯುತಿ ಪ್ರಕರಣಗಳನ್ನು ಗಮನಕ್ಕೆ ತಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. 1978ರ ಏ. ೨೭ರ ಪೂರ್ವದ ಜಿಲ್ಲೆಯಲ್ಲಿನ ೨೪೪೯ ಪ್ರಕರಣಗಳಲ್ಲಿ ೧೯೦೦ರಷ್ಟು ಹೆಕ್ಟೇರ್ ಪ್ರದೇಶ ಅರಣ್ಯೇತರ ಚಟುವಟಿಕೆಗೆ ಬಿಡುಗಡೆ ಮಾಡಲು ಪ್ರಕ್ರಿಯೆ ಜರುಗುತ್ತಿದೆ. ಅರಣ್ಯ ಸಿಬ್ಬಂದಿ ಕಾನೂನುಬಾಹಿರ ನಡತೆ ಮತ್ತು ಕೃತ್ಯ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅರಣ್ಯವಾಸಿಗಳ ಸಮಸ್ಯೆಗಳ ಪ್ರಶ್ನೆಗಳಿಗೆ ಉತ್ತರಿಸಿದರು.ಅರಣ್ಯ ಸಿಬ್ಬಂದಿಗೆ ಎಚ್ಚರಿಕೆ: ಅರಣ್ಯ ಕಾಯ್ದೆಗೆ ವ್ಯತಿರಿಕ್ತವಾಗಿ ಅರಣ್ಯ ಸಿಬ್ಬಂದಿ ಅರಣ್ಯವಾಸಿಗಳ ಮೇಲೆ ದೌರ್ಜನ್ಯ, ಕಿರುಕುಳ ಮತ್ತು ಮಾನಸಿಕ ಹಿಂಸೆ ಪ್ರಕರಣಗಳು ಮರುಕಳಿಸಿದ್ದಲ್ಲಿ ಅರಣ್ಯವಾಸಿಗಳಿಂದ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಅರಣ್ಯ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. ಅರಣ್ಯವಾಸಿಗಳು ಎರಡನೇ ದರ್ಜೆಯ ಪ್ರಜೆಗಳಲ್ಲ. ಅವರೊಂದಿಗೆ ಗೌರವಯುತವಾಗಿ ವರ್ತಿಸುವಂತೆ ಅರಣ್ಯ ಸಿಬ್ಬಂದಿಗೆ ಸೂಚನೆ ನೀಡಬೇಕೆಂದು ಸಭೆಯಲ್ಲಿ ಅಧ್ಯಕ್ಷ ರವೀಂದ್ರ ನಾಯ್ಕ ಅಧಿಕಾರಿಗಳಿಗೆ ಕೋರಿದರು.ಸಭೆಯಲ್ಲಿ ಡಿಎಫ್ಒ ಅಜ್ಜಯ್ಯ, ಡಿವೈಎಸ್ಪಿ ಗಣೇಶ ಕೆ.ಎಲ್. ಎಸಿಎಫ್ ಎಸ್.ಎಸ್. ನಿಂಗಾಣಿ, ಎಸಿಎಫ್ ಹರೀಶ ಜಾನ್ಮನೆ, ಎಸಿಎಫ್ ಲೋಕೇಶ ಹೊನ್ನಾವರ, ಸಿಪಿಐ ಸೀತರಾಮ, ಆರ್ಎಫ್ಒ ಶಿವಾನಂದ ನಿಂಗಾಣಿ, ಪಿಎಸ್ಐ ರತ್ನಾ ಉಪಸ್ಥಿತರಿದ್ದರು.ಹೋರಾಟಗಾರರ ವೇದಿಕೆ ಪರವಾಗಿ ವಿವಿಧ ತಾಲೂಕಿನ ಅಧ್ಯಕ್ಷರಾದ ರಮಾನಂದ ನಾಯ್ಕ ಅಚವೆ ಅಂಕೋಲಾ, ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ಮಂಜುನಾಥ ಮರಾಠಿ ಕುಮಟಾ, ಭೀಮಶಿ ವಾಲ್ಮಿಕಿ ಯಲ್ಲಾಪುರ, ಶಿವಾನಂದ ಜೋಗಿ ಮುಂಡಗೋಡ, ಮಹೇಶ ನಾಯ್ಕ ಸಾಲ್ಕೋಡ, ಕಿರಣ ಮರಾಠಿ, ನೆಹರು ನಾಯ್ಕ, ಶಂಕರ ಕೊಡಿಯಾ ಪಾಲ್ಗೊಂಡಿದ್ದರು.ಮುಕ್ತ ಚರ್ಚೆಗೆ ತೀವ್ರ ಆಕ್ರೋಶಅರಣ್ಯ ಅಧಿಕಾರಿಗಳು ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಮುಕ್ತ ಚರ್ಚೆಗೆ ಅವಕಾಶ ನಿರಾಕರಿಸಿದಾಗ, ಅರಣ್ಯವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಎಲ್ಲ ಅರಣ್ಯವಾಸಿಗಳ ಸಮಕ್ಷಮ ಮುಕ್ತವಾಗಿ ಚರ್ಚಿಸಬೇಕು ಮತ್ತು ಅರಣ್ಯವಾಸಿಗಳ ಸಮಸ್ಯೆಗಳಿಗೆ ಸೂಕ್ತ ಉತ್ತರಿಸಬೇಕೆಂದು ಒಂದು ತಾಸಿಗೂ ಮಿಕ್ಕಿ ಅರಣ್ಯವಾಸಿಗಳು ಬಿಗಿಪಟ್ಟು ಹಿಡಿದ ಹಿನ್ನೆಲೆ ಸಹಸ್ರಾರು ಅರಣ್ಯವಾಸಿಗಳ ಸಮ್ಮುಖದಲ್ಲಿ ಗಾಣಿಗರ ಸಭಾ ಕಲ್ಯಾಣಮಂಟದಲ್ಲಿ ಸಭೆ ಜರುಗಿರುವುದು ವಿಶೇಷವಾಗಿತ್ತು.