ಸಾರಾಂಶ
ಶಿರಸಿ: ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಕೆಂಗ್ರೆ ಪೈಪ್ ಕಳ್ಳತನ ಪ್ರಕರಣವು ಜಟಾಪಟಿ ಹಂತಕ್ಕೆ ತಿರುಗಿ, ಆಡಳಿತ ಮತ್ತು ವಿರೋಧ ಪಕ್ಷದ ಸದದ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿ ಪರಸ್ಪರ ಕೆಸರೆರಚಾಟ ಮಾಡಿಕೊಂಡ ಘಟನೆ ನಡೆಯಿತು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅಧ್ಯಕ್ಷತೆಯಲ್ಲಿ ನಗರಸಭೆಯ ಅಟಲ್ ಜೀ ಸಭಾಭವನದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಪ್ರದೀಪ ಶೆಟ್ಟಿ ಇತರರು, ದಿನವೂ ಜನರು ನಮ್ಮನ್ನು ಕಳ್ಳರಂತೆ ನೋಡುವಂತೆ ಆಗುತ್ತಿದೆ. ಜನನ ಹೆಸರು ಬಹಿರಂಗಪಡಿಸಿ ಎಂದು ಒತ್ತಾಯಿಸಿದರು.ಆಡಳಿತ ಪಕ್ಷದವರು ಬಿಜೆಪಿಯವರೇ ಇದ್ದೀರಿ. ಪ್ರಕರಣ ಎಲ್ಲವೂ ನಿಮಗೆ ಗೊತ್ತಿದೆ. ನೀವೇ ಹೋಗಿ ಶಾಸಕರು ಜವಾಬ್ದಾರಿಯಿಂದ ವರ್ತಿಸಿ ಕ್ರಮ ಕೈಗೊಳ್ಳಬೇಕು ಎನ್ನುತ್ತೀರಿ. ಇಲ್ಲಿ ಏನು ನಡೆಯುತ್ತಿದೆ ಎಂದು ಕೇಳಿದ ಪ್ರದೀಪ್, ವಿನಾಕಾರಣ ಶಾಸಕರ ಹೆಸರು ಎಳೆಯಬೇಡಿ. ಯಾರ್ಯಾರು ಬೆಲ್ಲ ತಿಂದವರು ಇನ್ನೊಬ್ಬರಿಗೆ ಒರೆಸುವುದು ಬೇಡ ಎಂದರು. ನೀವೇ ಹೇಳಿಬಿಡಿ ಎಂದೂ ಪ್ರದೀಪ ಶೆಟ್ಟಿ ಅಧ್ಯಕ್ಷರಲ್ಲಿ ಪಟ್ಟು ಹಿಡಿದರು.ಅಧಿಕಾರಿಗಳೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಅವರೇ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ ಎನ್ನಲಾಗಿದೆ. ರಜೆ ಮೇಲೆ ಹೋಗಿದ್ದಾರೆ. ಸರ್ಕಾರಿ ದಾಖಲೆ ಒಯ್ದಿದ್ದಾರೆ. ಅವರ ಮೇಲೆ ನಗರಸಭೆ ಪ್ರಕರಣ ದಾಖಲಿಸಬೇಕು ಎಂದು ಅನೇಕ ಸದಸ್ಯರು ಆಗ್ರಹಿಸಿದರು.
ಸದಸ್ಯ ಆನಂದ ಸಾಲೇರ ಮಾತನಾಡಿ, ನಗರದಲ್ಲಿ ಪೈಪ್ ಅಳವಡಿಸುವುದಕ್ಕೆ ರಸ್ತೆ ಅಗೆದಿರುವುದರಿಂದ ಹೊಂಡ-ಗುಂಡಿಗಳಿಂದ ತೀವ್ರ ಸಮಸ್ಯೆಯಾಗುತ್ತಿದೆ. ಮಳೆ ನೀರಿನಿಂದ ಕುಸಿದು ಹೊಂಡ ನಿರ್ಮಾಣವಾಗಿದ್ದು, ಇನ್ನೇನು ಒಂದು ತಿಂಗಳಿನಲ್ಲಿ ಶಾಲೆ ಆರಂಭಗೊಳ್ಳುತ್ತದೆ. ಅದರಲ್ಲಿ ಶಾಲಾ ಮಕ್ಕಳು ಬಿದ್ದು ಗಾಯಗೊಂಡರೆ ಯಾರು ಹೊಣೆ? ತಕ್ಷಣ ದುರಸ್ತಿ ಮಾಡಲು ಸೂಚಿಸಬೇಕು ಎಂದು ಅಧ್ಯಕ್ಷರನ್ನು ಆಗ್ರಹಿಸಿದರು.ಪ್ರತಿಕ್ರಿಯಿಸಿದ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಪೈಪ್ ಅಳವಡಿಸುವುದಕ್ಕೆ ಅಗೆದ ರಸ್ತೆ ದುರಸ್ತಿ ಮಾಡುವುದಕ್ಕೆ ಸೂಚನೆ ನೀಡಲಾಗುತ್ತದೆ. ಪೈಪ್ ಕಳ್ಳತನ ಪ್ರಕರಣದಲ್ಲಿ ಸದಸ್ಯರೆಲ್ಲರೂ ಸೇರಿ ಯಾವ ನಿರ್ಣಯ ಕೈಗೊಂಡರೂ ನಾನು ಸಮ್ಮತಿ ನೀಡುತ್ತೇನೆ ಎಂದರು.
ನಗರದಲ್ಲಿ ಅನಧಿಕೃತ ಅಂಗಡಿಕಾರರು ಬೀದಿ ಬದಿ ವ್ಯಾಪಾರ ಮಾಡುತ್ತಿದ್ದಾರೆ. ಪಾರ್ಕಿಂಗ್ ಸಮಸ್ಯೆಯಾಗುತ್ತಿದೆ ಎಂದು ಸದಸ್ಯರಾದ ಗಣಪತಿ ನಾಯ್ಕ, ವೀಣಾ ಶೆಟ್ಟಿ, ರುಕ್ಕು ಎಲ್ಲರೂ ಪಕ್ಷಾತೀತವಾಗಿ ಅಭಿಪ್ರಾಯ ಮಂಡಿಸಿದರು.ಅನಧಿಕೃತ ಬೀದಿ ವ್ಯಾಪಾರಸ್ಥರನ್ನು ತೆರವುಗೊಳಿಸುವಾಗ ಸದಸ್ಯರು ಅಧಿಕಾರಿಗಳಿಗೆ ಕರೆ ಮಾಡಿ ಇದೊಂದು ಅಂಗಡಿ ತೆರವುಗೊಳಸಬೇಡಿ ಎಂದು ಒತ್ತಡ ಹಾಕಬಾರದು. ವಸ್ತುಗಳನ್ನು ವಶಪಡಿಸಿಕೊಂಡು ವಿಕಾಸಾಶ್ರಮ ಮೈದಾನದಲ್ಲಿ ತಂದು ಹಾಕಿ. ಯಾರ ಒತ್ತಡಕ್ಕೂ ಅಧಿಕಾರಿಗಳು ಮಣಿಯುವ ಅಗತ್ಯವಿಲ್ಲ ಎಂದರು.
ಉಪಾಧ್ಯಕ್ಷ ರಮಾಕಾಂತ ಭಟ್ಟ, ಪ್ರಭಾರಿ ಪೌರಾಯುಕ್ತ ಶಿವರಾಜ ಮತ್ತಿತರರು ಇದ್ದರು.