ಸಾರಾಂಶ
ಬೆಂಗಳೂರು : ದೀಪಾವಳಿ ಹಬ್ಬಕ್ಕೆ ಇನ್ನೆರಡು ದಿನ ಬಾಕಿ ಇರುವಂತೆ ಅಡುಗೆ ಎಣ್ಣೆಯ ಬೆಲೆ ಒಂದು ಲೀಟರ್ಗೆ ₹1ರಿಂದ ₹5 ರವರೆಗೆ ಹೆಚ್ಚಾಗಿದೆ. ಈಗಾಗಲೇ ಅಗತ್ಯ ವಸ್ತು, ತರಕಾರಿ ಬೆಲೆ ಏರಿಕೆಯಾಗಿರುವ ನಡುವೆಯೇ ಪುನಃ ಅಡುಗೆ ಎಣ್ಣೆ ದರ ಹೆಚ್ಚಾಗಿದ್ದು ಬಡ, ಮಧ್ಯಮ ವರ್ಗದ ಗ್ರಾಹಕರನ್ನು ಕಂಗೆಡಿಸಿದೆ.
ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರ ಅಡುಗೆ ಎಣ್ಣೆಯ ಆಮದು ಸುಂಕವನ್ನು ಶೇ.20ರಷ್ಟು ಹೆಚ್ಚಳ ಮಾಡಿದ್ದರಿಂದ ಏಕಾಏಕಿ ಅಡುಗೆ ಎಣ್ಣೆ ದರ ₹20ರಿಂದ ₹25ರವರೆಗೆ ಹೆಚ್ಚಳವಾಗಿತ್ತು. ಇದೀಗ ಪುನಃ ಅಡುಗೆ ಎಣ್ಣೆ ದರ ಏರಿಕೆ ಬರೆ ಬಿದ್ದಿದೆ.
ಸಗಟು ದರದಲ್ಲಿ ಪ್ರತಿ ಲೀಟರ್ ಸೂರ್ಯಕಾಂತಿ ಎಣ್ಣೆ ದರ ಕಳೆದ ವಾರ ₹120 - ₹124 ಇತ್ತು. ಇದೀಗ ₹128 ದಾಟಿದೆ. ತಾಳೆಎಣ್ಣೆ ₹117.50 ಇದ್ದುದು ₹120 ದಾಟಿದೆ. ಇದರ ಜೊತೆಗೆ ಕಳೆದೊಂದು ತಿಂಗಳಲ್ಲಿ ಸೋಯಾಬಿನ್ ಎಣ್ಣೆ ಕೇಜಿಗೆ ₹18, ಸನ್ಫ್ಲವರ್ ಎಣ್ಣೆ ₹20, ಸಾಸಿವೆ ಎಣ್ಣೆ ₹22 ಹೆಚ್ಚಳವಾಗಿದೆ.
ಹಬ್ಬದ ನಡುವೆ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದಾಸ್ತಾನು ಕೊರತೆಯಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಆದರೆ, ಗ್ರಾಹಕರು ಇದನ್ನು ಒಪ್ಪತ್ತಿಲ್ಲ, ಬದಲಾಗಿ ಹಬ್ಬದ ನೆಪದಲ್ಲಿ ದರ ಹೆಚ್ಚು ಮಾಡಲಾಗಿದೆ. ಗೋದಾಮುಗಳಲ್ಲಿ ದಾಸ್ತಾನು ಇದ್ದರೂ ಕೊಡದೆ ಕೃತಕ ಅಭಾವ ಸೃಷ್ಟಿಸಿ ದರ ಹೆಚ್ಚಿಸಲಾಗಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಬಗ್ಗೆ ಕ್ರಮ ವಹಿಸುವಂತೆ ಜನತೆ ಒತ್ತಾಯಿಸಿದ್ದಾರೆ.
ಖಾದ್ಯಗಳ ಬೆಲೆಯೇರಿಕೆ: ಅಡುಗೆ ಎಣ್ಣೆ ದರ ಏರಿಕೆಯು ದೀಪಾವಳಿ ಖಾದ್ಯಗಳ ಮೇಲೆ ಪರಿಣಾಮ ಬೀರುವುದು ಬಹುತೇಕ ನಿಶ್ಚಿತವಾಗಿದೆ. ಸಿಹಿ ತಿನಿಸು, ಖಾರ ಸೇರಿದಂತೆ ತಿನಿಸುಗಳ ಬೆಲೆ ಹೆಚ್ಚಳವಾಗಬಹುದು. ಇದರ ಜೊತೆಗೆ ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀರಲಿದೆ. ಆದರೆ, ಸದ್ಯಕ್ಕೆ ದೀಪಾವಳಿ ಮುಗಿಯುವವರೆಗೆ ದರ ಹೆಚ್ಚಿಸುವುದಿಲ್ಲ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.
ತರಕಾರಿ ತುಟ್ಟಿ: ಕಳೆದೊಂದು ತಿಂಗಳಿಂದ ಟೊಮೆಟೋ, ಈರುಳ್ಳಿ, ಕ್ಯಾರೆಟ್ ಸೇರಿ ಇತರೆ ತರಕಾರಿಗಳ ಬೆಲೆ ತುಟ್ಟಿಯಾಗಿಯೇ ಮುಂದುವರಿದಿದೆ. ಅಕಾಲಿಕ ಮಳೆಯಿಂದ ಸಾಗಣೆ ಸಮಸ್ಯೆ, ಬೆಳೆ ಕೊಳೆತು ನಾಶವಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ನಗರದಲ್ಲಿ ಟೊಮೆಟೋ ಕೇಜಿಗೆ ₹60- ₹90, ಈರುಳ್ಳಿ ₹60 - ₹70, ಬೀನ್ಸ್ ₹220 ಇದೆ. ಕಳೆದ ವಾರ ಕೇಜಿಗೆ ₹400 ತಲುಪಿದ್ದ ಬೆಳ್ಳುಳ್ಳಿ ಈಗ ₹350 - ₹380 ಬೆಲೆಯಿದೆ. ಹಬ್ಬದ ನಡುವೆ ತರಕಾರಿ ದರವೂ ಹೆಚ್ಚಾಗಲಿದೆ. ಜೊತಗೆ ಹಣ್ಣಿನ ದರವೂ ಏರಿಕೆಯಾಗಲಿದೆ.
ಅಡುಗೆ ಎಣ್ಣೆಕಳೆದ ವಾರ ಈಗ (ದರ ₹)
ಸನ್ ಪ್ಯೂರ್₹125₹135
ಗೋಲ್ಡ್ ವಿನ್ನರ್ ₹126₹136
ಫಾರ್ಚ್ಯೂನ್ ₹130₹136
ಪಾಮ್ ಆಯಿಲ್₹115₹125
ಜೆಮಿನಿ₹140₹145