ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಡೆದ ಡ್ರಗ್ಸ್ ವ್ಯಸನ ಮುಕ್ತ ಅಭಿಯಾನ ಜಾಗೃತಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಚಿತ್ರ ನಟ ದೀಪಕ್ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

ನಂತರ ಎಸ್‌ಪಿ ಶೋಭಾರಾಣಿ ಮಾತನಾಡಿ, ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆಯಲ್ಲಿ ಕೆಲವು ಯುವಕರು ಹಾಗೂ ವಿದ್ಯಾರ್ಥಿಗಳು ಸಹ ಭಾಗಿಯಾಗುತ್ತಿರುವುದು ಸಮಾಜಕ್ಕೆ ಗಂಭೀರ ಸವಾಲಾಗಿದೆ. ಆದ್ದರಿಂದ ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಪೊಲೀಸ್ ಇಲಾಖೆ, ರೈಲ್ವೆ ಭದ್ರತಾ ಪಡೆ ಹಾಗೂ ಇತರೆ ಸಂಬಂಧಿತ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.

ಚಿತ್ರ ನಟ ದೀಪಕ್ ಮಾತನಾಡಿ, ಪೋಷಕರು ತಮ್ಮ ಮಕ್ಕಳ ದಿನನಿತ್ಯದ ಚಟುವಟಿಕೆ, ಸ್ನೇಹ ಬಳಗ, ಮೊಬೈಲ್ ಬಳಕೆ ಹಾಗೂ ವರ್ತನೆಯಲ್ಲಾಗುವ ಬದಲಾವಣೆಗಳ ಬಗ್ಗೆ ನಿರಂತರ ಗಮನಹರಿಸಬೇಕು. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ನಂತರ ಶಾಲಾ ವಿದ್ಯಾರ್ಥಿಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿ, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಡ್ರಗ್ಸ್ ಸೇರಿದಂತೆ ಮಾದಕ ವ್ಯಸನದಿಂದಾಗಿ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.


ಅನೈತಿಕ ಚಟುವಟಿಕೆ ತಡೆಗೆ ಕರೀಘಟ್ಟ ಬೆಟ್ಟದಲ್ಲಿ ಪೊಲೀಸರಿಂದ ಕಟ್ಟು ನಿಟ್ಟಿನ ಕ್ರಮ

ಶ್ರೀರಂಗಪಟ್ಟಣ:ತಾಲೂಕಿನ ಕರೀಘಟ್ಟ ಬೆಟ್ಟದಲ್ಲಿ ಮದ್ಯಪಾನ ಹಾಗೂ ಅನೈತಿಕ ಚಟುವಟಿಕೆ ನಡೆಸಿ ರಸ್ತೆಯಲ್ಲಿ ಮದ್ಯಪಾನದ ಖಾಲಿ ಬಾಟಲುಗಳನ್ನು ಎಸೆದು ಭಕ್ತರಿಗೆ ಅಡ್ಡಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕಳೆದ ಎರಡು ದಿನಗಳ ಹಿಂದೆ ಬೆಟ್ಟದ ತಪ್ಪಲಿನಲ್ಲಿ ಮೋಜು ಮಸ್ತಿ ಮಾಡಿ ಬಿಸಾಡಿದ ಮದ್ಯದ ಬಾಟಲುಗಳು ಸೇರಿದಂತೆ ಇತರ ತ್ಯಾಜ್ಯಗಳನ್ನು ಶಾಲಾ ಮಕ್ಕಳು, ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಭಾರೀ ಪ್ರಮಾಣದ ಮದ್ಯದ ಖಾಲಿ ಬಾಟಲ್‌ಗಳು ಲಭ್ಯವಾಗಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬೆಟ್ಟದ ತಪ್ಪಲು ಹಾಗೂ ಬೆಟ್ಟದ ಮೇಲೆ ಮೋಜು- ಮಸ್ತಿ ಮಾಡಿ ಪರಿಸರ ಹಾಳು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಹಾಗೂ ದಂಡ ವಿಧಿಸಲು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಈಗಾಗಲೇ ಬೆಟ್ಟದ ಅನೇಕ ಕಡೆಗಳಲ್ಲಿ ಇನ್ಸ್‌ಪೆಕ್ಟರ್ ಬಿ.ಜಿ ಕುಮಾರ್ ರವರ ನೇತೃತ್ವದಲ್ಲಿ ಎಚ್ಚರಿಕಾ ಸೂಚನಾ ಫಲಕ ಅಳವಡಿಸಿ ಜಾಗೃತಿ ಮೂಡಿಸಿದೆ. ಪರಿಸರ ಹಾಳು ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ, ಶಿಸ್ತು ಕ್ರಮ ಕೈಗೊಂಡು ಎಚ್ಚರಿಕೆ ನೀಡಿ ಕಡಿವಾಣ ಹಾಕಲು ಮುಂದಾಗಿದ್ದಾರೆ.