ಸಾರಾಂಶ
ಯಲ್ಲಾಪುರ: ಗ್ರೀನ್ ಕೇರ್ ಸಂಸ್ಥೆಯು ಅವಶ್ಯಕತೆಗನುಗುಣವಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ನಿರ್ದಿಷ್ಟ ಗುರಿ ಮತ್ತು ಉದ್ದೇಶವನ್ನು ಹೊಂದಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಇದಕ್ಕೆ ಮನುವಿಕಾಸ ಸಂಸ್ಥೆಯು ಅಗತ್ಯ ಸಹಕಾರ ನೀಡಲಿದೆ ಎಂದು ಶಿರಸಿಯ ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ಟ ತಿಳಿಸಿದರು.ಪಟ್ಟಣದ ಅಡಿಕೆ ಭವನದಲ್ಲಿ ಗ್ರೀನ್ ಕೇರ್ ಸಂಸ್ಥೆ ಮತ್ತು ಕ್ರಿಯೇಟಿವ್ ತರಬೇತಿ ಕೇಂದ್ರದ ಸಹಯೋಗದಲ್ಲಿ ಕೌಶಲ್ಯ ವಿಕಾಸ ಯೋಜನೆಯಡಿ ಹಮ್ಮಿಕೊಂಡಿದ್ದ ಬ್ಯೂಟಿಷಿಯನ್ ಮತ್ತು ಬೇಸಿಕ್ ಫ್ಯಾಷನ್ ಡಿಸೈನಿಂಗ್ ತರಬೇತಿಯ ೩ನೇ ಬ್ಯಾಚಿನವರಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಉದ್ಯಮಿಗಳೂ, ಗ್ರೀನ್ ಕೇರ್ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳೂ ಆದ ಸದಾಶಿವ ಶಿವಯ್ಯನಮಠ ಮಾತನಾಡಿ, ನಮ್ಮ ಬದುಕಿನ ಶಿಲ್ಪಿ ನಾವೇ ಎಂಬ ಸ್ವಾಮಿ ವಿವೇಕಾನಂದರ ವಾಣಿಯನ್ನು ಸದಾ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ಸು ಸಾಧಿಸಲು ಮುಂದಾಗಬೇಕು ಎಂದರು.ಲ್ಯಾಂಪ್ಸ್ ಅಧ್ಯಕ್ಷ ರಾಮನಾಥ ಸಿದ್ದಿ ಮಾತನಾಡಿ, ಸಮಾಜದ ಕೊನೆಯ ವ್ಯಕ್ತಿಗೂ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿಯನ್ನು ಬೆರಳೆಣಿಕೆಯಷ್ಟು ಸಂಘ- ಸಂಸ್ಥೆಗಳು ಮಾತ್ರ ಮಾಡುತ್ತಿದ್ದು, ಅದರಲ್ಲಿ ಗ್ರೀನ್ ಕೇರ್ ಹಾಗೂ ಮನುವಿಕಾಸ ಸಂಸ್ಥೆಗಳೂ ಒಂದಾಗಿವೆ ಎಂದರು. ಪಪಂ ಸಮುದಾಯ ಸಂಘಟನಾಧಿಕಾರಿ ಹೇಮಾವತಿ ಭಟ್ಟ ಮಾತನಾಡಿ, ಕೌಶಲ್ಯ ವಿಕಾಸ ತರಬೇತಿ ಹೊಂದಿದವರಿಗೆ ದೊರಕಬಹುದಾದ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಾಮಾಜಿಕ ಕಾರ್ಯಕರ್ತ ಶಿರಸಿಯ ಗೃಹ ವೈಭವದ ಪ್ರತಾಪ್ ಮುಳೆ, ಶಿರಸಿಯ ಅಸ್ಮಿತೆ ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕ ರಿಯಾಜ್ ಸಾಗರ್ ಮಾತನಾಡಿದರು.ಗ್ರೀನ್ ಕೇರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರಕುಮಾರ್ ಉಪಸ್ಥಿತರಿದ್ದರು. ತರಬೇತಿ ಹೊಂದಿದ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕ್ರಿಯೇಟಿವ್ ತರಬೇತಿ ಸಂಸ್ಥೆಯ ಮುಖ್ಯಸ್ಥ ಶ್ರೀನಿವಾಸ ಮುರುಡೇಶ್ವರ ಸ್ವಾಗತಿಸಿದರು. ಗ್ರೀನ್ ಕೇರ್ ಸಂಸ್ಥೆಯ ನಿರ್ದೇಶಕಿ ಆಶಾ ಡಿಸೋಜ ನಿರ್ವಹಿಸಿದರು. ಗ್ರೀನ್ ಕೇರ್ ಸಂಸ್ಥೆಯ ಅಪ್ಸನಾ ವಂದಿಸಿದರು.ಸಂಪರ್ಕ ರಸ್ತೆ ಕಾಮಗಾರಿಗೆ ಶಾಸಕರ ಚಾಲನೆ
ಸಿದ್ದಾಪುರ: ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಹಾಗೂ ಉದ್ಘಾಟನೆಯನ್ನು ಶಾಸಕ ಭೀಮಣ್ಣ ನಾಯ್ಕ ಮಂಗಳವಾರ ನೆರವೇರಿಸಿದರು.ಲೋಕೋಪಯೋಗಿ ಇಲಾಖೆ ವತಿಯಿಂದ ₹೧.೮೦ ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಟಾ- ಕೊಡಮಡಗಿ ರಾಜ್ಯ ಹೆದ್ದಾರಿಯಿಂದ ಕೋಡಿಗದ್ದೆ, ಸಾಲ್ಕೋಡ ಮೂಲಕ ಹೊನ್ನಾವರ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಗುಣಮಟ್ಟದೊಂದಿಗೆ ಕಾಲಮಿತಿಯೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.ನಂತರ ದೊಡ್ಮನೆ ಗ್ರಾಮ ಪಂಚಾಯಿತಿ ಬಿಳೇಗೋಡಿನಲ್ಲಿ ನಿರ್ಮಾಣವಾದ ನೂತನ ಕಾಲು ಸಂಕವನ್ನು ಉದ್ಘಾಟಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಶಿಕಾಂತ ಗೌಡ, ಸ್ಥಳೀಯ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು.