ಸಾರಾಂಶ
ಯುವ ಜನತೆಗೆ ಸಹಕಾರಿ ಕ್ಷೇತ್ರದ ಅರಿವು ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸೆ ಕೋಶ, ಅರ್ಥಶಾಸ್ತ್ರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಯುವ ಜನತೆಗೆ ಸಹಕಾರಿ ಕ್ಷೇತ್ರದ ಅರಿವು ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು.ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾಲೇಜಿನ ಪ್ರಾಂಶುಪಾಲರಾದ ಡಾ.ದಯಾನಂದ.ಕೆ.ಸಿ ಅವರು ಉದ್ಘಾಟಿಸಿದರು.
ಕೊಡಗು ಜಿಲ್ಲಾ ಸಹಕಾರಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಡಾ ರೇಣುಕಾ ಆರ್.ಎಸ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಹಕಾರಿ ಕ್ಷೇತ್ರದ ಮೂಲ ತತ್ವಗಳು, ಸಹಕಾರಿ ಸಂಘಗಳ ಕಾರ್ಯ ಚಟುವಟಿಕೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಹಕಾರಿ ವಿಷಯದ ಮಹತ್ವ ಮತ್ತು ಸಹಕಾರಿ ಕ್ಷೇತ್ರದಲ್ಲಿ ಅವಕಾಶವಿರುವ ವಿವಿಧ ಉದ್ಯೋಗ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರು, ಸಹಕಾರಿ ಕ್ಷೇತ್ರ ಬಹಳ ಮುಖ್ಯವಾದ ಒಂದು ಆರ್ಥಿಕ ಕ್ಷೇತ್ರವಾಗಿದೆ. ಭಾರತದಲ್ಲಿ ಸಹಕಾರಿ ಕ್ಷೇತ್ರ ಬಹಳ ಆಳವಾಗಿ ಬೆಳೆದಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳು ಆರ್ಥಿಕ ಹಿಂಜರಿಕೆಯಿಂದ ಸಂಕಷ್ಟ ಅನುಭವಿಸಿದರೂ, ಸಹಕಾರಿ ಕ್ಷೇತ್ರ ಬಹಳ ಪ್ರಬಲವಾಗಿರುವುದರಿಂದ ಅದರ ಪರಿಣಾಮ ಭಾರತದ ಮೇಲೆ ಅಷ್ಟೊಂದು ಉಂಟಾಗಲಿಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಸಹಕಾರಿ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಸಂಜೀವ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹ ಸಂಚಾಲಕರಾದ ಡಾ.ಬಸವರಾಜು, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ದಮಯಂತಿ.ಪಿ.ಟಿ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ವೀಣಾ ಕೆ.ಎಂ, ಗೀತಾ ಬಿ.ವಿ ಅವರು ಉಪಸ್ಥಿತರಿದ್ದರು. ನಿಶಾನ್ ಜೋಷೆಪ್ ನಿರ್ವಹಣೆ ಮಾಡಿದರು. ಕಾಲೇಜಿನ ಎಲ್ಲಾ ಅಧ್ಯಾಪಕ ಮತ್ತು ಅಧ್ಯಾಪಕರೇತರ ಹಾಗೂ ವಿದ್ಯಾರ್ಥಿಗಳು ಇದ್ದರು.