ಹುಬ್ಬಳಿಯಲ್ಲಿಂದು, ನಾಳೆ ಸಹಕಾರಿ ಅಧಿವೇಶನ: ರಾಜೂಗೌಡ

| Published : Feb 09 2024, 01:47 AM IST

ಸಾರಾಂಶ

ಸಹಕಾರ ಸಂಘಗಳ ಮೂಲಕ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜನಸಾಮಾನ್ಯರಿಗೆ ಸಹಕಾರ ಕ್ಷೇತ್ರ ಇನ್ನು ಸನಿಹವಾಗಲು ದಿಟ್ಟ ಸಂಕಲ್ಪ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಹುಣಸಗಿ

ಸಹಕಾರ ಭಾರತಿ ಸಯೋಗದಲ್ಲಿ ಫೆ.9 ಹಾಗೂ 10ರಂದು ಹುಬ್ಬಳಿಯಲ್ಲಿ ಸಹಕಾರ ಭಾರತಿ ರಾಷ್ಟ್ರೀಯ ಅಧಿವೇಶನ ನಡೆಯಲಿದೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹನಾಯಕ (ರಾಜೂಗೌಡ) ಹೇಳಿದರು.

ತಾಲೂಕಿನ ಕೊಡೇಕಲ್ ಗ್ರಾಮದ ಮಾಜಿ ಶಾಸಕರ ಕಾರ್ಯಾಲಯದಲ್ಲಿ ಕಾರ್ಯಕ್ರಮದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಎರಡು ದಿನಗಳವರೆಗೆ ನಡೆಯಲಿರುವ ಈ ಒಂದು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ಸಹಕಾರ ಸಚಿವ ಅಮಿತ್ ಶಾ ಅವರು ಪಾಲ್ಗೊಳ್ಳಲಿದ್ದು, ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಿಕೆಪಿಎಸ್ ಅಧ್ಯಕ್ಷರು, ಮುಖ್ಯಕಾರ್ಯನಿರ್ವಾಹಕರು, ನಿರ್ದೇಶಕರು, ಸಹಕಾರಿ ಧುರೀಣರು ಪಾಲ್ಗೊಂಡು ಸದುಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಹಕಾರ ಭಾರತಿ ಜಿಲ್ಲಾ ಪ್ರಭಾರಿ ಬಸವರಾಜ್ ಮೇಲಿನಮನಿ ಮಾತನಾಡಿ, ಈಗಾಗಲೇ ಕರ್ನಾಟಕದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗಣಕೀಕೃತ ಮಾಡಿ, ವ್ಯವಹಾರದಲ್ಲಿ ಪಾರದರ್ಶಕತೆ ತರಲು ಕಂಪ್ಯೂಟರ್ ಒದಗಿಸಲಾಗಿದೆ. ಸಹಕಾರ ಸಂಘಗಳ ಮೂಲಕ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜನಸಾಮಾನ್ಯರಿಗೆ ಸಹಕಾರ ಕ್ಷೇತ್ರ ಇನ್ನು ಸನಿಹವಾಗಲು ದಿಟ್ಟ ಸಂಕಲ್ಪ ಮಾಡಲಾಗಿದೆ ಎಂದರು.

ಹದಿನೈದು ವರ್ಷಗಳ ನಂತರ ರಾಜ್ಯದಲ್ಲಿ ಅಧಿವೇಶನ ಹಮ್ಮಿಕೊಂಡಿದೆ. ಹೀಗಾಗಿ ಸಹಕಾರ ಕ್ಷೇತ್ರದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.