ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಹಕಾರ ಸಂಘಗಳು ರೈತರಿಗೆ ಸಾಲ ಸೌಲಭ್ಯ ಮಂಜೂರು ಮಾಡುವ ಮೂಲಕ ಅವರು ಆರ್ಥಿಕವಾಗಿ ಮುಂದುವರಿಯಲು ಪ್ರೋತ್ಸಾಹ ನೀಡುತ್ತಿವೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು.

ತಾಲೂಕಿನ ಬಿಸಲವಾಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೆಸಿಸಿ ಸಾಲ ಯೋಜನೆಯಡಿ ೫೨ ರೈತರಿಗೆ ₹೬೮.೯೦ ಲಕ್ಷ ಚೆಕ್ ವಿತರಿಸಿ ಮಾತನಾಡಿದರು.

ಸಹಕಾರ ಸಂಘಗಳಿಂದ ಸಾಲ ಪಡೆದವರು ಸಕಾಲಕ್ಕೆ ಮರುಪಾವತಿಸಿದಾಗ ಸಂಘಗಳು ಅಭಿವೃದ್ಧಿಯತ್ತ ಸಾಗಲಿವೆ. ತಾವು ಸಿಎಂ ಆದೇಶದ ಮೇರೆಗೆ ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದು, ಗುಂಡ್ಲುಪೇಟೆ, ಹನೂರು ಭಾಗದಲ್ಲಿ ಮಳೆಯಿಲ್ಲದೇ ಬೆಳೆಗಳು ಹಾನಿಯಾಗಿದ್ದು, ಕೆಲವೆಡೆ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ, ಟ್ಯಾಂಕರ್ ನಿಂದ ನೀರು ಪೂರೈಸಲಾಗುತ್ತಿದೆ. ಬೆಳೆಹಾನಿಗೊಳಗಾದ ರೈತರು ತಕ್ಷಣವೇ ಬೆಳೆವಿಮೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದರು.

ಕ್ಷೇತ್ರದ ಶಾಸಕರಾಗಿ ನಾಲ್ಕನೇ ಬಾರಿ ಆಯ್ಕೆಯಾಗಿದ್ದು, ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ಮಾಡಿದ್ದೇನೆ. ಈ ಬಾರಿ ಸಂಪುಟದರ್ಜೆ ಸಚಿವರಾಗಿದ್ದು, ಮುಂದಿನ ದಿನಗಳಲ್ಲೂ ಸರ್ಕಾರದಿಂದ ಅಗತ್ಯ ಅನುದಾನ ಮಂಜೂರು ಮಾಡಿಸುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು.


ಮುಖಂಡ ಬಿ.ಕೆ.ರವಿಕುಮಾರ್ ಮಾತನಾಡಿ, ಪುಟ್ಟರಂಗಶೆಟ್ಟಿ ಅವರು ೪ ಬಾರಿ ಶಾಸಕರಾಗಿ, ೨ನೇ ಬಾರಿಗೆ ಸಚಿವರಾಗಿದ್ದಾರೆ. ಈ ಭಾಗದಲ್ಲಿ ಶೇ.೭೦ರಷ್ಟು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದ್ದಾರೆ. ಎಂಡಿಸಿಸಿ ಬ್ಯಾಂಕಿನಿಂದ ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ₹೧ ಕೋಟಿವರೆಗೆ ಸಾಲ ಮಂಜೂರು ಮಾಡಿಸಿಕೊಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಪಿಎಸಿಸಿ ಅಧ್ಯಕ್ಷ ಸಿ,ಬಸವಣ್ಣ, ಉಪಾಧ್ಯಕ್ಷ ಸಿದ್ದಶೆಟ್ಟಿ, ನಿರ್ದೇಶಕರಾದ ಮಂಜುನಾಥ್, ಶಿವಕುಮಾರ್. ಕುಮಾರ್, ಬಿ.ನಂಜಪ್ಪ, ಬಸವನಾಯಕ, ಪದ್ಮಾವತಿ, ನೀಲಮ್ಮ, ನಾಗರಾಜಪ್ಪ, ಉಮೇಶ್, ಮುಖಂಡರಾದ ಎ.ಎಸ್.ಗುರುಸ್ವಾಮಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರವಿ, ಗ್ರಾಪಂ ಮಾಜಿ ಅಧ್ಯಕ್ಷ ಸಿ.ಮಹದೇವಪ್ಪ, ಪಾಧರ್ ಜೋಸೆಪ್, ಎಸ್.ಉಮೇಶ್, ಚನ್ನಬಸಪ್ಪ, ನಾರಾಯಣನಾಯಕ, ಸಿದ್ದನಾಯಕ, ಮಹದೇವಯ್ಯ, ಬಿ.ಪ್ರಭುಸ್ವಾಮಿ, ನಾಗರಾಜು, ಎಚ್.ಎಂ ಮಹದೇವಶೆಟ್ಟಿ. ಸಿ.ಡಿ.ಒ ನಾಗೇಶ್, ಟಿ.ಮಂಜು, ಸಿಇಒ ಅಶೋಕ್, ಸಿಬ್ಬಂದಿ ನಾಗರಾಜು, ಪ್ರಸನ್ನ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.