ಚಿಕ್ಕಮಗಳೂರು ನಗರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಂಚಿಕೆ ಮಾಡುವುದಕ್ಕಿಂತ ಎರಡು ಪಟ್ಟು ಹೆಚ್ಚು ಗೃಹ ನಿರ್ಮಾಣ ಸಹಕಾರಿ ಸಂಘಗಳು ರಾಜ್ಯದಲ್ಲಿ ನಿವೇಶನ ಮತ್ತು ಮನೆಗಳನ್ನು ಕಡಿಮೆ ಬೆಲೆಯಲ್ಲಿ ಸಾರ್ವಜನಿಕರಿಗೆ ಹಂಚಿಕೆ ಮಾಡುತ್ತಿವೆ ಎಂದು ರಾಜ್ಯ ಸಹಕಾರಿ ವಸತಿ ಮಹಾಮಂಡಲದ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.
ಸೋಮವಾರ ಚಿಕ್ಕಮಗಳೂರು ನಗರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಿ (ಬಿಡಿಎ), ಗೃಹ ಮಂಡಳಿಗಿಂತ ಎರಡು ಪಟ್ಟು ನಿವೇಶನ ಹಂಚಿಕೆ ಮತ್ತು ಮನೆ ನಿರ್ಮಾಣ ಮಾಡಿಕೊಡುವ ಕೆಲಸವನ್ನು ಗೃಹ ನಿರ್ಮಾಣ ಸಹಕಾರಿ ಸಂಘ ಗಳು ರಾಜ್ಯದಲ್ಲಿ ಮಾಡುತ್ತಿವೆ. ಅದೂ ಸಹ ಅತ್ಯಂತ ಕಡಿಮೆ ಬೆಲೆಯಲ್ಲಿ ಎಂದು ತಿಳಿಸಿದರು.ರಾಜ್ಯದಲ್ಲಿ ಸಾವಿರಾರು ಗೃಹ ನಿರ್ಮಾಣ ಸಹಕಾರಿ ಸಂಘಗಳು ಇವೆ. ಈ ಪೈಕಿ ಕೆಲವೇ ಸಂಸ್ಥೆಗಳು ನಿವೇಶನ, ಅಪಾರ್ಟ್ ಮೆಂಟ್ ನಿರ್ಮಾಣ, ಸಾಲ ಸೌಲಭ್ಯ ನೀಡುವ ಕೆಲಸ ಮಾಡುತ್ತಿವೆ. ಕೆಲವು ವಂಚನೆ ಮಾಡುವ ಸಹಕಾರಿ ಸಂಘಗಳು ಇವೆ ಎಂದು ಎಚ್ಚರಿಸಿದರು.
ಒಂದು ಸಹಕಾರಿ ಸಂಘಕ್ಕೆ ನೂರು ವರ್ಷ ದಾಟಿದೆ ಎಂದರೆ, ಅದಕ್ಕೆ ಅಧ್ಯಕ್ಷರಾಗಿ, ಸದಸ್ಯರ ಸಾಕಷ್ಟು ಶ್ರಮ ಇದೆ. ಇತ್ತೀಚಿನ ದಿನಗಳಲ್ಲಿ ಸಹಕಾರಿ ಸಂಸ್ಥೆಗಳು ಬೆಳೆಯುವುದು ಕಷ್ಟ. ಆದರೆ, ಚಿಕ್ಕಮಗಳೂರು ಗೃಹ ನಿರ್ಮಾಣ ಸಹಕಾರ ಸಂಘ ನೂರು ವರ್ಷ ಪೂರೈಸುತ್ತಿದೆ. ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಳ್ಳಬೇಕೆಂದು ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಚಿಕ್ಕಮಗಳೂರು ನಗರ ಗೃಹ ನಿರ್ಮಾಣ ಸಹಕಾರಿ ಸಂಸ್ಥೆಗೆ 100 ವರ್ಷ ತುಂಬಿದೆ ಎಂದರೆ ಅದು ಸಾಮಾನ್ಯ ಸಂಗತಿ ಅಲ್ಲ. ರಾಷ್ಟ್ರೀಯ ಬ್ಯಾಂಕ್ಗಳಲ್ಲಿ ಮನೆ ಕಟ್ಟುವುದಕ್ಕೆ ಸಾಲ ಪಡೆಯುವುದು ಸುಲಭದ ಕೆಲಸವಲ್ಲ, ಸಾಲ ಮರು ಪಾವತಿಗೆ ಶಕ್ತಿ ಇದ್ದರೂ, ದಾಖಲೆಗಳನ್ನು ಸಲ್ಲಿಸುವುದಕ್ಕೆ ಆಗುವುದಿಲ್ಲ. ಅಂತಹವರಿಗೆ ಹಾಗಾಗಿ. ಆರಂಭಗೊಂಡಿದ್ದೇ, ಸಹಕಾರಿ ಸಂಸ್ಥೆಗಳು. ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳು ಬೆಳೆಯುವುದಕ್ಕೆ ಎಸ್,ಎಲ್. ಧರ್ಮೇಗೌಡರ ಶ್ರಮ ಸಾಕಷ್ಟು ಇದೆ ಎಂದರು.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಹಿರಿಯ ಪತ್ರಕರ್ತ ಎಸ್. ಗಿರಿಜಾಶಂಕರ್ ಮಾತನಾಡಿದರು. ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ವಿಧಾನಪರಿಷತ್ ಮಾಜಿ ಸದಸ್ಯೆಗಾಯತ್ರಿ ಶಾಂತೇಗೌಡ, ನಗರ ಸಭೆ ಅಧ್ಯಕ್ಷೆ ಶೀಲಾ ದಿನೇಶ್, ಮಲೆನಾಡು ವಿದ್ಯಾ ಸಂಸ್ಥೆಯ ಅಧ್ಯಕ್ಷ ಎನ್, ಕೇಶವಮೂರ್ತಿ, ಉದ್ಯಮಿ ಡಾ.ಅಪ್ಸರ್ ಹಿಂದೂಸ್ತಾನಿ ಉಪಸ್ಥಿತರಿದ್ದರು.-- ಬಾಕ್ಸ್ --
ರಾಜಕಾರಣ ಮಾಡುವವರು ಎಲ್ಲರೂ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಇರಬಾರದು ಎಂದು ಹೇಳುತ್ತೇವೆ. ಆದರೆ, ಅತಿ ಹೆಚ್ಚು ರಾಜಕೀಯ ಇರುವುದೇ ಸಹಕಾರಿ ಕ್ಷೇತ್ರದಲ್ಲಿ ಎಂದು ವಿಧಾನ ಪರಿಷತ್ತು ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.ಸಹಕಾರಿ ಕ್ಷೇತ್ರಕ್ಕೆ ಬಂದ ಮೇಲೆ ಕ್ಷೇತ್ರಕ್ಕೆ ನ್ಯಾಯಕೊಡುವ ಕೆಲಸ ಮಾಡಬೇಕು. ಕೃಷಿ ಬದುಕು ಉಳಿದಿಲ್ಲ. ಇಂದಿನ ಪೀಳಿಗೆ ಕೃಷಿ ಲಾಭ ಇಲ್ಲ ಎಂದು ದೂರ ಹೋಗುತ್ತಿದ್ದಾರೆ. ಡಿಸಿಸಿ ಬ್ಯಾಂಕ್, ಸಹಕಾರಿ ಸಂಘಗಳ ಮೂಲಕ ಕೃಷಿ ಬದುಕು ಉಳಿಸುವ ಕೆಲಸ ಮಾಡಬೇಕು.
ಬಜೆಟ್ನಲ್ಲಿ ₹5 -₹10 ಲಕ್ಷ ಸಹಕಾರಿ ಸಂಘ ಸಂಸ್ಥೆಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ನೀಡುತ್ತೇವೆ ಎಂದು ಘೋಷಣೆ ಮಾಡಲಾಗಿದೆ. ಆದರೆ, ಅದು ವಾಸ್ತವಾಗಿ ಕಾರ್ಯಗತವಾಗಿದೆಯೇ ಎಂದು ಪ್ರಶ್ನಿಸಿದರು.ಸಹಕಾರಿ ಇಲಾಖೆ ಮೂಲಕ ರೈತರಿಗೆ ಸಹಾಯ ಮಾಡುವುದಕ್ಕೆಸಾಧ್ಯವಾಗಿರುವುದು ಕೇವಲ ಶೇ.27 ರಷ್ಟು ಮಾತ್ರ. ಇನ್ನುಳಿದಂತೆ ಶೇ.73 ರಷ್ಟು ರೈತರನ್ನು ತಲುಪಿಲ್ಲ. ಕೋಟ್ಯಾಂತರ ರು, ಆಸ್ತಿ ಮಾಲೀಕರಿಗೆ ಸಾಲ ನೀಡುವುದಕ್ಕೆ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೈತರಿಗೆ ಸರಿಯಾದ ಸಹಕಾರಿ ಸಿಗುತ್ತಿಲ್ಲ. ಹಾಗಾಗಿ, ಕೃಷಿ ಬದುಕು ಹಾಳಾಗುತ್ತಿದೆ. ಕೃಷಿ ಮತ್ತು ರೈತರನ್ನು ಉಳಿಸುವ ಕೆಲಸ ಮಾಡದಿದ್ದರೆ, ಈ ನಾಡನ್ನು ಉಳಿಸುವುದಕ್ಕೆ ಸಾಧ್ಯವಿಲ್ಲ. ಸಹಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುವವರು ಪ್ರಮಾಣಿಕವಾಗಿ ಕೆಲಸ ಮಾಡಬೇಕಿದೆ ಎಂದರು.