ಸಾರಾಂಶ
ಮುಂದಾಲೋಚನೆ ಹಾಗೂ ಶ್ರಮದ ಪ್ರತಿಫಲದ ಪರಿಣಾಮವಾಗಿ ಸಹಕಾರಿ ಸಂಘ ದಶಮಾನೋತ್ಸವದ ಸಂಭ್ರಮ ಆಚರಿಸುತ್ತಿದೆ
ನರಗುಂದ: ಸರ್ಕಾರಿ ನೌಕರರಿಗೆ ಸರ್ಕಾರ ಗೌರವಯುತವಾದ ಸಂಬಳ ನೀಡುತ್ತಿದ್ದರೂ ಕೆಲವು ಸಂದರ್ಭಗಳಲ್ಲಿ ಹಣದ ಅವಶ್ಯಕತೆ ಉಂಟಾದಾಗ ಸಹಕಾರಿ ಸಂಘಗಳು ಆಸರೆಯಾಗುತ್ತವೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಫ್. ಮಜ್ಜಿಗಿ ಹೇಳಿದರು. ಅವರು ಪಟ್ಟಣದ ಮಾರ್ಕಂಡೆಯ ಕಲ್ಯಾಣ ಮಂಟಪದಲ್ಲಿ ತಾಲೂಕು ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿ, ನಮ್ಮ ಬೇಕು-ಬೇಡಿಕೆಗಳನ್ನು ಅಗತ್ಯತೆಗೆ ಅನುಸಾರವಾಗಿ ಈಡೇರಿಸಿಕೊಳ್ಳಬೇಕಾದರೆ ಮನೆ ಸ್ಥಿತಿಯ ಜತೆ ''''ಮನಿ''''ಸ್ಥಿತಿಯೂ ಚೆನ್ನಾಗಿರಬೇಕು. ಇಂತಹ ಸಂದರ್ಭಗಳಲ್ಲಿ ಸಹಕಾರ ಸಂಘಗಳು ಸಹಕಾರಿಯಾಗಿ ನಿಲ್ಲುತ್ತವೆ. ಆದ್ದರಿಂದ ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಸಹಕಾರಿ ಸಂಘದ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿ ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಮುಂದಾಲೋಚನೆ ಹಾಗೂ ಶ್ರಮದ ಪ್ರತಿಫಲದ ಪರಿಣಾಮವಾಗಿ ಸಹಕಾರಿ ಸಂಘ ದಶಮಾನೋತ್ಸವದ ಸಂಭ್ರಮ ಆಚರಿಸುತ್ತಿದೆ. ಅವಶ್ಯಕತೆ ಇದ್ದಾಗ ಮಾತ್ರ ಸಾಲ ಪಡೆದುಕೊಳ್ಳಬೇಕು ಎಂದು ಹೇಳಿದರು.ಸಂಸ್ಥಾಪಕ ಅಧ್ಯಕ್ಷ ಡಿ.ಎಚ್. ಅಜ್ಜಿ ಸಂಘದ ವಾರ್ಷಿಕ ವರದಿ ಓದಿದರು. ಪಿ.ಸಿ. ಕಲಹಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಂದ ನಿವೃತ್ತಿ ಹೊಂದಿದ ನೌಕರರನ್ನು ಗೌರವಿಸಲಾಯಿತು.
ಡಾ. ಜಡೇಶ ಭದ್ರಾಗೌಡ್ರ, ಪ್ರಶಾಂತ ದೇವರಮನಿ, ಕೆ.ಬಿ. ದೇವರ, ವಿ.ಬಿ. ಅಸುಂಡಿ, ಸಂಘದ ಉಪಾಧ್ಯಕ್ಷ ಎಸ್.ಎಲ್. ಪಾಟೀಲ, ಜೆಡ್.ಎಂ. ಖಾಜಿ, ಬಿ.ಎ. ಬೋಯಿಟೆ ಇದ್ದರು.