ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪರೀಕ್ಷೆ ಆರಂಭ

| Published : Jun 04 2025, 12:43 AM IST

ಸಾರಾಂಶ

ದ.ಕ. ಜಿಲ್ಲೆಯಲ್ಲಿ ಮಂಗಳವಾರದಿಂದಲೇ ಕೊರೋನಾ ಪರೀಕ್ಷೆ ಆರಂಭಿಸಲಾಗಿದೆ. ಕೇವಲ ಸರ್ಕಾರಿ ಜಿಲ್ಲಾಸ್ಪತ್ರೆ ವೆನ್ಲಾಕ್‌ನಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಕೊರೋನಾ ಟೆಸ್ಟ್‌ ಮಾಡಲು ಅವಕಾಶ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಆರ್‌. ತಿಮ್ಮಯ್ಯ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದ ವಿವಿಧೆಡೆ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಮಂಗಳವಾರದಿಂದಲೇ ಕೊರೋನಾ ಪರೀಕ್ಷೆ ಆರಂಭಿಸಲಾಗಿದೆ. ಕೇವಲ ಸರ್ಕಾರಿ ಜಿಲ್ಲಾಸ್ಪತ್ರೆ ವೆನ್ಲಾಕ್‌ನಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಕೊರೋನಾ ಟೆಸ್ಟ್‌ ಮಾಡಲು ಅವಕಾಶ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಆರ್‌. ತಿಮ್ಮಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ.ದಲ್ಲಿ ಮೇ ತಿಂಗಳಲ್ಲಿ 64, 57, 29 ವರ್ಷ ವಯಸ್ಸಿನ ಮೂವರು ಮಹಿಳೆಯರಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಕೊರೋನಾ ಸರ್ವೇ ಸಾಮಾನ್ಯ ಸೋಂಕಾಗಿದ್ದು, ಸದ್ಯ ಜಿಲ್ಲೆಯಲ್ಲಿ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ ಎಂದರು.

ಖಾಸಗಿ ಆಸ್ಪತ್ರೆಗಳು ಯಾವುದೇ ಕಾರಣಕ್ಕೂ ಕೊರೋನಾ ಪರೀಕ್ಷೆ ಮಾಡುವಂತಿಲ್ಲ. ರೋಗಿಗಳ ಮಾದರಿಯನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಬೇಕು. ಈ ಕುರಿತು ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ಡಾ.ತಿಮ್ಮಯ್ಯ ತಿಳಿಸಿದರು.

ಎಲ್ಲ ಸಾರಿ ಕೇಸ್‌ಗೆ ಕೊರೋನಾ ಪರೀಕ್ಷೆ:

ಸರ್ಕಾರದ ಮಾರ್ಗಸೂಚಿ ಪ್ರಕಾರ ಎಲ್ಲ ‘ಸಾರಿ’ (ತೀವ್ರ ಉಸಿರಾಟ ಸಮಸ್ಯೆ) ಪ್ರಕರಣಗಳಲ್ಲೂ ಕೊರೋನಾ ಟೆಸ್ಟ್‌ ಕಡ್ಡಾಯ, ಅದೇ ರೀತಿ ಶೇ.5ರಷ್ಟು ಇನ್‌ಫ್ಲುಯೆನ್ಜಾ ಲೈಕ್‌ ಇಲ್‌ನೆಸ್‌ (ಐಎಲ್‌ಐ) ಪ್ರಕರಣಗಳ ರೋಗಿಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದರು.

ಇಲಾಖೆ ಸನ್ನದ್ಧ:

ಯಾವುದೇ ಸಂದರ್ಭದಲ್ಲಿ ಕೊರೋನಾ ಸೋಂಕು ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಸನ್ನದ್ಧವಾಗಿದ್ದು, ಅದಕ್ಕಾಗಿ ಸಾಕಷ್ಟು ಬೆಡ್‌ಗಳು, ಆಕ್ಸಿಜನೇಟೆಡ್ ಬೆಡ್‌ಗಳು, ಐಸಿಯು, ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸದ್ಯ ಮಾಸ್ಕ್‌ ಧರಿಸಲು ಸರ್ಕಾರದಿಂದ ಯಾವ ಸೂಚನೆ ಇಲ್ಲ. ಆದರೆ ಜನರು ಜನಜಂಗುಳಿ ಪ್ರದೇಶಗಳಿಂದ ದೂರ ಇರುವುದು, ಅಂತರ ಕಾಪಾಡಿಕೊಳ್ಳುವ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಆರೋಗ್ಯಾಧಿಕಾರಿ ತಿಳಿಸಿದರು.

ವದಂತಿ ನಂಬಬೇಡಿ:

ಉಳಿದ ಸೋಂಕುಗಳಂತೆ ಕೊರೋನಾ ಕೂಡ ಈಗ ದುರ್ಬಲವಾಗಿದ್ದು, ಸಾಮಾನ್ಯ ಸೋಂಕಿನಂತಾಗಿದೆ. ಆದ್ದರಿಂದ ಕೊರೊನಾ ಕುರಿತಾಗಿ ಜಾಲತಾಣಗಳಲ್ಲಿ ಬರುವ ವದಂತಿಗಳನ್ನು ಯಾರು ನಂಬಬಾರದು ಎಂದು ಸಲಹೆ ನೀಡಿದರು.

ಕೊರೋನಾ ಎದುರಿಸಲು ಆರೋಗ್ಯ ಇಲಾಖೆ ವತಿಯಿಂದ ವಿವಿಧೆಡೆ ಅಣಕು ಪ್ರದರ್ಶನ ಏರ್ಪಡಿಸಲು ಸೂಚನೆ ನೀಡಲಾಗಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳು ಅಥವಾ ಶಿಕ್ಷಕರಿಗೆ ಕೊರೋನಾ ಕಂಡುಬಂದರೆ ಶಾಲೆಗಳಿಗೆ ಬರುವುದನ್ನು ತಪ್ಪಿಸುವುದು ಸೂಕ್ತ ಎಂದು ಡಾ.ತಿಮ್ಮಯ್ಯ ಹೇಳಿದರು.