ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಕಂಪನಿಯಲ್ಲಿ ಅನುಪಯುಕ್ತ ವಸ್ತುಗಳಾದ ಅಲ್ಯೂಮಿನಿಯಂ, ತಾಮ್ರ, ಕಬ್ಬಿಣ (ಲೋಹದ) ವಸ್ತುಗಳನ್ನು ಅಕ್ರಮ ಇ- ಟೆಂಡರ್ ಕರೆದು ಭ್ರಷ್ಟಾಚಾರ ಮಾಡುತ್ತಿರುವ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ಕೆಂಪಯ್ಯ ಒತ್ತಾಯಿಸಿದರು.

೨೦೨೨ರಿಂದ ಪ್ರಸ್ತುತ ದಿನದವರೆಗೆ ಅನುಪಯುಕ್ತ ವಸ್ತುಗಳ ಬಗ್ಗೆ ಮಾಹಿತಿಯನ್ನು ದೃಢೀಕರಿಸಿ ಕೊಡುವಂತೆ ಕೋರಿದರೂ ನಮ್ಮಲ್ಲಿ ಸ್ಕ್ರ್ಯಾಪ್ ವಸ್ತುಗಳ ಮಾರಾಟ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇ- ಟೆಂಡರ್ ಕರೆದಿರುವ ಬಗ್ಗೆ ಮಾಹಿತಿ ನೀಡದೆ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮೈಷುಗರ್ ಸಕ್ಕರೆ ಕಂಪನಿಯಲ್ಲಿ ಅನುಪಯುಕ್ತ ವಸ್ತುಗಳ ಮಾರಾಟ ಮಾಡಲು ೨೦೨೬ರ ಮೇ ೨೫ರಂದು ಕಚೇರಿ ಆದೇಶದಲ್ಲಿರುವ ಸಮಿತಿಗೆ ಎ- ದರ್ಜೆ ನೌಕರರಲ್ಲದವರನ್ನು ಅನುಪಯುಕ್ತ ವಸ್ತುಗಳ ಮಾರಾಟ ಸಮಿತಿಗೆ ನೇಮಕ ಮಾಡಿಕೊಂಡಿದ್ದಾರೆ. ಆದರೆ, ಸಮಿತಿ ನೇಮಕಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕಬ್ಬು ಅಭಿವೃದ್ಧಿ ಆಯುಕ್ತರು ಅನುಮತಿಯನ್ನೇ ನೀಡಿಲ್ಲ ಎಂದು ದೂರಿದರು.

೨೦೨೨ರಿಂದ ಪ್ರಸ್ತುತ ದಿನಾಂಕದವರೆಗೆ ಅನುಪಯುಕ್ತ ವಸ್ತುಗಳನ್ನು ಮಾರಾಟ ಮಾಡುವ ಬಗ್ಗೆ ಕ್ರಮ ಕೈಗೊಂಡಿರುವ ೩ನೇ ವ್ಯಕ್ತಿಯ ಪರಿಶೀಲನಾ ವರದಿಯನ್ನು ಹಾಗೂ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಮುಖ್ಯ ಕಾರ್ಯದರ್ಶಿಯವರ ಅನುಮತಿ ಪತ್ರಗಳನ್ನು ದೃಢೀಕರಿಸಲು ಕೋರಿದ್ದು, ೨೦೨೫ರ ನವೆಂಬರ್ ೧೯ರಂದು ಸಾಮಗ್ರಿ ವ್ಯವಸ್ಥಾಪಕಿ ಬಿ.ಎಸ್.ಸುಷ್ಮಾ ಹಾಗೂ ಸಾಮಗ್ರಿ ನಿರ್ವಾಹಕ ಅನುಪಯುಕ್ತ ವಸ್ತುಗಳನ್ನು ಮಾರಲು ನಮ್ಮ ವಿಭಾಗದಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಯಾವುದೇ ಅನುಮತಿ ಪತ್ರಗಳು ನಮ್ಮಲ್ಲಿ ಲಭ್ಯವಿಲ್ಲವೆಂದು ಮಾಹಿತಿ ನೀಡಿರುತ್ತಾರೆ. ಆದರೆ, ೨೦೨೫ರ ಅಕ್ಟೋಬರ್ ೮ ರ ಸಭಾ ನಡಾವಳಿ ಲಭ್ಯವಿಲ್ಲವೆಂದು ನೀಡಿರುವುದು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.


ಮೈಷುಗರ್ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಜಮೀನು ಮತ್ತು ಬೆಲೆ ಬಾಳುವ ಅನುಪಯುಕ್ತ ವಸ್ತುಗಳ ಮಾರಾಟ ಮಾಡುವುದನ್ನು ತಡೆಯಲು ಕೋರಿರುವ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧೀನ ಕಾರ್ಯದರ್ಶಿ ಶಾಂತಾರಾಮ್ ಅವರಿಗೆ ವರದಿ ಸಲ್ಲಿಸದೆ ಭ್ರಷ್ಟಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.

೨೦೨೬ರ ಮೇ ೧೯ರಿಂದ ೨೦೨೬ರ ಮೇ ೨೬ರವರೆಗೆ ಐದು ಲಾರಿಗಳಲ್ಲಿ ಸುಮಾರು ೫೨,೩೬೦ ಕೆ.ಜಿ.ಗಳಷ್ಟು ಅನುಪಯುಕ್ತ ಲೋಹಗಳನ್ನು ಅಕ್ರಮವಾಗಿ ಸಾಗಾಣೆ ಮಾಡಿರುವ ಬಗ್ಗೆ ಹಾಗೂ ಸಿ.ಡಿ.ಗಂಗಾಧರ್ ಅವರು ಮೈಷುಗರ್ ಅಧ್ಯಕ್ಷರಾದ ನಂತರ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಚರ್ಚಿಸಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

ಕಾರ್ಖಾನೆಯ ಅನುಪಯುಕ್ತ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ನಗರಾಧ್ಯಕ್ಷ ಪ್ರಸನ್ನಕುಮಾರ್, ಮುಖಂಡರಾದ ವೆಂಕಟೇಶ್, ಸತೀಶ್, ಚಂದ್ರು, ಮನು, ಸುನಿಲ್‌ಕುಮಾರ್ ಅವರು ಗೋಷ್ಠಿಯಲ್ಲಿದ್ದರು.